Site icon Vistara News

Murder Case : ಕಲ್ಲಿನಿಂದ ಜಜ್ಜಿ ಅತ್ತೆಯನ್ನೇ ಕೊಂದ ಅಳಿಯ

Son in law kills mother in law with a stone

ಹುಬ್ಬಳ್ಳಿ: ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಗಳು ನಡೆಯುತ್ತಿವೆ. ಅದರಲ್ಲೂ ಕೌಟುಂಬಿಕ ಕಲಹದಿಂದ (Family Dispute) ನಡೆಯುವ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಸದ್ಯ ಅಳಿಯನೊಬ್ಬ ಅತ್ತೆಯನ್ನೇ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ (Murder Case) ಮಾಡಿದ್ದಾನೆ.

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಮಂಜವ್ವ ಇಂಗನಳ್ಳಿ (48) ಕೊಲೆಯಾದವರು. ಅಳಿಯ ಪ್ರಶಾಂತ ಕೋಟೆ ಎಂಬಾತ ಕೊಲೆ ಆರೋಪಿ ಆಗಿದ್ದಾನೆ.

ಆರೋಪಿ ಪ್ರಶಾಂತ್‌ ಮಂಜವ್ವಳ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ತನ್ನ ಹೆಂಡತಿ ಇತ್ತೀಚೆಗೆ ಜಗಳವಾಡುತ್ತಿದ್ದಾಳೆ. ಇದಕ್ಕೆ ಆಕೆ ಅಮ್ಮ ಮಂಜವ್ವನೇ ಕಾರಣ ಎಂದು ಸಿಟ್ಟಿಗೆದ್ದಿದ್ದ. ಕೋಪದ ಕೈಗೆ ಬುದ್ಧಿ ಕೊಟ್ಟ ಪ್ರಶಾಂತ್‌ ಅತ್ತೆ ಮಂಜವ್ವ ಬಳಿ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ. ಈ ವೇಳೆ ಕಲ್ಲಿನಿಂದ ತಲೆಗೆ ಹೊಡೆದು ಕೊಂದಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಲಘಟಗಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಲಘಟಗಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪ್ರಶಾಂತನನ್ನು ಬಂಧಿಸಿದ್ದಾರೆ.

ಅಳಿಯನಿಗೆ ಅನೈತಿಕ ಸಂಬಂಧ; ಬಿಯರ್‌ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ

ಹಾವೇರಿ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಅಳಿಯನನ್ನೇ ಮಾವ ಕೊಲೆ ಮಾಡಿದ್ದಾನೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಘಟನೆ ನಡೆದಿದೆ. ಸಲೀಂ ದಾದಾಫೀರ್ ಒಲೆಕಾರ್ (29) ಕೊಲೆಯಾದ ವ್ಯಕ್ತಿ.

ಹೈದರ ಚಮನಸಾಬ್ ಹಲಗೇರಿ ಎಂಬುವವನು ಕೊಲೆ ಆರೋಪಿ ಆಗಿದ್ದಾನೆ. ನಗರದ ಹೊರವಲಯಕ್ಕೆ ಸಲೀಂ ಕರೆದು ಹೋದ ಹೈದರ್‌ ಚೆನ್ನಾಗಿ ಬಿಯರ್ ಕುಡಿಸಿದ್ದಾನೆ. ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ ಗದಗ-ಹೊನ್ನಾಳಿ ಹೆದ್ದಾರಿ ಪಕ್ಕದಲ್ಲಿ ಶವ ಎಸೆದು ಹೋಗಿದ್ದರು. ಆರೋಪಿ ಹಾಗೂ ಕೊಲೆಯಾದ ವ್ಯಕ್ತಿ ಇಬ್ಬರು ಮಾಗೋಡ ಗ್ರಾಮದವರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕುಡುಕ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮಾವ

ಚಾಮರಾಜನಗರ: ಮಾವನೊಬ್ಬ ಅಳಿಯನನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ಚಾಮರಾಜನಗರದ‌ ಜನ್ನೂರು ಗ್ರಾಮದಲ್ಲಿ (Murder Case) ನಡೆದಿದೆ. ಉಮೇಶ್ (28) ಹತ್ಯೆಯಾದವನು. ಮಾವ ನಂಜುಂಡಯ್ಯ ಆರೋಪಿ ಆಗಿದ್ದಾರೆ.

ಹುಬ್ಬಳ್ಳಿ ಮೂಲದ ಉಮೇಶ್ (28) ನಿತ್ಯ ಕುಡಿದು ಬಂದು ನಂಜುಂಡಯ್ಯರ ಮಗಳಿಗೆ ತೊಂದರೆ ಕೊಡುತ್ತಿದ್ದ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಕುಡಿತವನ್ನೇ ಚಟವನ್ನಾಗಿಸಿಕೊಂಡಿದ್ದ. ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕುತ್ತಿದ್ದ. ಮಾತ್ರವಲ್ಲ ಕುಡಿದು ಬಂದು ಪತ್ನಿಗೆ ಹೊಡೆದು ಬಡಿದು ಮಾಡುತ್ತಿದ್ದ.

ಹೀಗೆ ನಿನ್ನೆ ಗುರುವಾರ ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡಿದ್ದ. ಇದರಿಂದ ರೋಸಿ ಹೋಗಿ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ನಂಜುಂಡಯ್ಯ ಕೊಲೆ ಮಾಡಿದ್ದಾರೆ. ಉಮೇಶ್‌ ಮುಖಕ್ಕೆ ಕೊಡಲಿಯಿಂದ ಹೊಡೆದು ಛಿದ್ರ ಮಾಡಲಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುದೇರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುದೇರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾವ ನಂಜುಂಡಯ್ಯನನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version