Site icon Vistara News

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder Case

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ (Neha Murder case) ಸಂಬಂಧಿಸಿದಂತೆ ನೇಹಾ ತಂದೆ ನಿರಂಜನ್‌ ಹಿರೇಮಠ್‌ ಅವರ ಕಾರುಚಾಲಕ ಮತ್ತು ಅಕೌಂಟೆಂಟ್‌ರನ್ನು ಸಿಐಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ.

ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಮತ್ತು ಸಿಐಡಿ ಎಸ್‌ಪಿ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಕಾರು ಚಾಲಕ ಮಹಾಂತೇಶ ಮೆಣಸಿನಕಾಯಿ, ಅಕೌಂಟೆಂಟ್ ಬಷೀರ್ ಅಹ್ಮದ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅವರಿಬ್ಬರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ?

ಅನಾಮಧೇಯ ವ್ಯಕ್ತಿಗಳು ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಪ್ರತಿಕ್ರಿಯಿಸಿದ್ದಾರೆ. ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಆದರೆ ಮಗಳ ಹತ್ಯೆಯಾದ ಐದನೇ ದಿನ, ಸಂತಾಪದ ನೆಪದಲ್ಲಿ ಒಬ್ಬರು ನಮ್ಮ ಮನೆಗೆ ಬಂದು ವಿಡಿಯೊ ಮಾಡಿಕೊಂಡು ಹೋಗಿದ್ದಾರೆ. ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡು ಬಂದಿದೆ. ಕೊಲೆ ಮಾಡುವ ಮುನ್ನ ಆರೋಪಿ ಬಿಡ್ನಾಳದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದ ಎಂದು ತಿಳಿದು ಬಂದಿದೆ. ಇವತ್ತು ಕೆಲ ವ್ಯಕ್ತಿಗಳು ಯಾವುದೊ ಸಂಚು ಹಾಕಿದ್ದಾರೆ ಎಂಬ ಅನುಮಾನ ಬಂದಿದೆ. ಈ ವಿಷಯವನ್ನು ಪೊಲೀಸ್ ಆಯುಕ್ತರಿಗೆ ಹೇಳಿದ್ದೇವೆ, ಅವರು ಭದ್ರತೆ ಕೊಡುವುದಾಗಿ ಹೇಳಿದ್ದು, ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೂ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಂದಲೂ ಕೆಲ ಮಾಹಿತಿ ಕೇಳಿದ್ದಾರೆ. ಪ್ರಕರಣದ ತನಿಖೆಗೆ ನಮ್ಮ ಸಹಕಾರ ಕೇಳಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆರೋಪಿಯನ್ನು ಕರೆತಂದು ವಿಚಾರಣೆ ಮಾಡಿದ್ದಾರೆ. ಸದ್ಯ ತನಿಖೆ ವಿವರಗಳನ್ನು ಹೇಳದಿರುವಂತೆ ಮನವಿ ಮಾಡಿದ್ದಾರೆ. ಸಿಐಡಿ ವರದಿ ಕೊಟ್ಟ ನಂತರ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Physical abuse : ಬೆಂಗಳೂರಲ್ಲಿ ಯುವತಿ ಕಿಡ್ನ್ಯಾಪ್; ಐವರು ಕಾಮುಕರಿಂದ ಅತ್ಯಾಚಾರ

ಏನಿದು ನೇಹಾ ಹತ್ಯೆ ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌ ಎಂಬಾತ ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್‌ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ.

ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್‌ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್‌ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version