ಕಾರವಾರ: ತಾವು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾಗಿನಿಂದಲೂ ತಮಗೆ ಜೀವಬೆದರಿಕೆ (Life Threatening) ಒಡ್ಡುತ್ತಲೇ ಬರಲಾಗುತ್ತಿದೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ. ಈ ಬಗ್ಗೆ ತಮಗಾದ ಕಹಿ ಅನುಭವಗಳ ಕುರಿತು ಖುದ್ದು ಮಾಹಿತಿ ಬಿಚ್ಚಿಟ್ಟ ಶಾಸಕಿ, ಸಮ್ಮಿಶ್ರ ಸರ್ಕಾರದಲ್ಲಿ ಈ ಬಗ್ಗೆ ಕೇಳಿಕೊಂಡಾಗ ಗನ್ ಲೈಸೆನ್ಸ್ ಕೊಡಲೂ ವಿಳಂಬ ಮಾಡಿದರು ಎಂದು ಬೇಸರವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೆಲ್ಲ ಇದ್ದರೂ ಯಾವುದಕ್ಕೂ ಬಗ್ಗದೇ ತನ್ನ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಶಾಸಕಿಯಾಗುವ ಪೂರ್ವದಿಂದಲೂ ನನಗೆ ಜೀವ ಬೆದರಿಕೆ ಇತ್ತು. ಟಿಕೆಟ್ ಸಿಗುವ ಪೂರ್ವದಿಂದಲೇ ಬೆದರಿಕೆ ಇದೆ ಎಂದು ಹೇಳಿದರು.
ಇದನ್ನೂ ಓದಿ: Drowned in Sea: ಗೋಕರ್ಣದ ಕುಡ್ಲೆ ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರ ರಕ್ಷಣೆ
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ಜೀವ ಬೆದರಿಕೆ ಇದ್ದು, ಗನ್ ಲೈಸೆನ್ಸ್ ನೀಡಬೇಕೆಂದು ಮನವಿ ಮಾಡಿಕೊಂಡಾಗಲೂ ತುಂಬಾ ವಿಳಂಬ ಮಾಡಿ ಲೈಸೆನ್ಸ್ ಮಂಜೂರು ಮಾಡಿದ್ದರು. ನಾನು ಕಾರಿನಲ್ಲಿ ಹೊರಟರೆ ಹಿಂಬದಿ ನನ್ನನ್ನು ಕಾರು, ಬೈಕ್ಗಳ ಮೂಲಕ ಫಾಲೋ ಮಾಡಲಾಗುತ್ತಿತ್ತು. ಕೇರಳ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯದ ನೋಂದಣಿಯುಳ್ಳ ಕಾರುಗಳು, ಟ್ರಕ್ಗಳು ರಾತ್ರಿಯ ವೇಳೆಯಲ್ಲಿ ಬರುತ್ತಿದ್ದವು. ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ, ಹೆಲ್ಮೆಟ್ ಹಾಕಿಕೊಂಡು ಕೆಲವರು ನನ್ನ ಕಾರನ್ನು ಹಿಂಬಾಲಿಸುತ್ತಿದ್ದರು. ಮಧ್ಯರಾತ್ರಿ ನನ್ನ ಮನೆಯ ಓಣಿಗಳಲ್ಲಿನ ಕರೆಂಟ್ ತೆಗೆದು, ಬೈಕ್ಗಳಲ್ಲಿ ಮನೆಯ ಸುತ್ತ ಅಪರಿಚಿತರು ತಿರುಗಾಡುವ ಪ್ರಕರಣಗಳೂ ನಡೆದಿವೆ ಎಂದು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಮಗ, ಅಕ್ಕನ ಮಕ್ಕಳನ್ನು ಅಪಹರಣ ಮಾಡಲು ಕೆಲವರು ಯತ್ನಿಸಿದ್ದರು. “ನಮಗೆ ಸಹಕಾರ ನೀಡಿ, ಇಲ್ಲದಿದ್ದರೆ ಸಾಯಿಸ್ತೇವೆ” ಎಂದು ನನಗೆ ಮೆಸೇಜ್ ಕೂಡ ಕಳುಹಿಸಿದ್ದರು. ರಾಜಕಾರಣದಲ್ಲಿ ಯಾರು ಶತ್ರು, ಯಾರು ಮಿತ್ರ ಎಂದು ಊಹಿಸಲು ಕೂಡ ಅಸಾಧ್ಯ. ಕೆಲ ಹತಾಶರಾದ ರಾಜಕಾರಣಿಗಳೂ ಇದರ ಹಿಂದೆ ಇರಬಹುದು. ಇವೆಲ್ಲ ಬಹಳ ಸಮಯದಿಂದ ನಡೆಯುತ್ತಿದ್ದರೂ ನಾನು ಇಷ್ಟು ದಿನ ಸುಮ್ಮನಿದ್ದೆ. ಶಾಸಕಿಯಾಗಿ ನನಗೇ ಇಷ್ಟು ಬೆದರಿಕೆ ಇದೆ ಎಂದು ಗೊತ್ತಾದರೆ ಕ್ಷೇತ್ರದ ಜನತೆಗೆ ಆತಂಕವಾಗುತ್ತದೆ ಎಂದು ಇಂಥ ಸಂದರ್ಭದಲ್ಲಿ ಧೈರ್ಯಗೆಡದೇ ಎದುರಿಸಿದ್ದೆ. ಈ ಹಿಂದೆ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಪೆನ್ನೇಕರ್ ಅವರಿದ್ದಾಗ ಮನೆ ಕಡೆಗಳಲ್ಲಿ ಪೊಲೀಸರನ್ನು ಗಸ್ತು ಹಾಕಿಸಿದ್ದರು. ಸದ್ಯ ಇಂಥ ಪ್ರಕರಣಗಳು ಈಗ ಕಡಿಮೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರಿಗೂ ದೂರು ನೀಡಿದ್ದೇನೆ ಎಂದು ರೂಪಾಲಿ ನಾಯ್ಕ ತಿಳಿಸಿದ್ದಾರೆ.
ಈ ನಾಲ್ಕೂವರೆ ವರ್ಷಗಳ ನನ್ನ ಅವಧಿಯಲ್ಲಿ ಕಾರವಾರ ಕ್ಷೇತ್ರ ಬಹಳ ಶಾಂತವಾಗಿತ್ತು. ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. ಆದರೆ, ಮತ್ತೆ ಇಲ್ಲಿನ ಶಾಂತಿಯನ್ನು ಹಾಳು ಮಾಡಲು ಪ್ರಯತ್ನ ನಡೆಯುತ್ತಿದೆ. ಅದಕ್ಕೆ ನಾನು ಬಿಡುವುದಿಲ್ಲ. ಇಂಥ ಬೆದರಿಕೆಗಳಿಗೆ ಹೆದರುವುದೂ ಇಲ್ಲ ಎಂದು ಶಾಸಕಿ ರೂಪಾಲಿ ಹೇಳಿದ್ದಾರೆ.