Site icon Vistara News

ಮಹಿಳಾ ಸಿಬ್ಬಂದಿ ಜತೆ KSOU ಕುಲಪತಿ ಡಾ. ವಿದ್ಯಾಶಂಕರ್‌ ಅಕ್ರಮ ಸಂಬಂಧ: ನಿವೃತ್ತ ಪ್ರಾಧ್ಯಾಪಕ ಆರೋಪ

KSOU

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಡಾ. ವಿದ್ಯಾಶಂಕರ್ ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದೆ. ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ.ಕೆ. ಮಹಾದೇವ್‌ ಅವರು ಈ ಗಂಭೀರ ಆರೋಪ ಮಾಡಿದ್ದು, ಮಹಿಳಾ ಸಿಬ್ಬಂದಿ ಜತೆಗೆ ಅವರು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಮಹಿಳಾ ಸಿಬ್ಬಂದಿಯ ಪತಿ, ವಿದ್ಯಾಶಂಕರ್‌ ಅವರನ್ನು ಈ ನಿಟ್ಟಿನಲ್ಲಿ ತರಾಟೆಗೆ ತೆಗೆದುಕೊಂಡ ಆಡಿಯೊವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಮುಕ್ತ ವಿವಿ ಕೆಲವು ಸಮಯದಿಂದ ಹಗರಣಗಳಿಂದಲೇ ಸುದ್ದಿ ಮಾಡುತ್ತಿದೆ. ಇದರ ನಡುವೆ ಕಳೆದ ವಾರ ಪತ್ರಿಕೋದ್ಯಮ ವಿಭಾಗದಲ್ಲಿ ನಡೆದ ವಾಮಾಚಾರಕ್ಕಾಗಿ ಚರ್ಚೆಗೆ ಬಂದಿತ್ತು. ಈಗ ಕುಲಪತಿಗಳ ಮೇಲೆಯೇ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಹೈಡ್ರಾಮಾ
ಮೈಸೂರು ವಿಶ್ವವಿದ್ಯಾಲಯದ ಯೋಜನಾ ಮತ್ತು ನಿರ್ವಹಣಾ ಮಂಡಳಿ ಸದಸ್ಯರಾಗಿರುವ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಮಹದೇವ್ ಅವರು ಮಂಗಳವಾರ ಮೈಸೂರಿನ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದರು. ಅವರು ಅದರಲ್ಲಿ ಆಡಿಯೊವನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಕುಲಪತಿಗಳ ಕಡೆಯವರೆಂದು ಹೇಳಲಾದ ಕೆಲವರು ಬಂದು ಅಡ್ಡಿಪಡಿಸಿದರು. ಅವರನ್ನು ಬಳಿಕ ಹೊರಗೆ ಕಳುಹಿಸಲಾಯಿತು.

ʻʻಮಹಿಳೆಯ ಗಂಡ ಮತ್ತು ಕುಲಪತಿ ಮಾತನಾಡಿರುವ ಆಡಿಯೋವನ್ನು ನಾನು ಬಿಡುಗಡೆ ಮಾಡಿದ್ದೇನೆ. ಇದನ್ನು ತಡೆಯುವ ಉದ್ದೇಶದಿಂದ ಕೆಎಸ್‌ಒಯು ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ ಮತ್ತಿಬ್ಬರು ಪ್ರಯತ್ನ ಮಾಡಿದ್ದಾರೆ. ಡಾ.ಸುಧಾಕರ್ ದಾವಣಗೆರೆಯ ರೀಜನಲ್ ಸೆಂಟರ್‌ನಲ್ಲಿದ್ದಾಗಲೇ ಸಸ್ಪೆಂಡ್ ಆಗಿದ್ದ. ಡಾ.ವಿದ್ಯಾಶಂಕರ್ ಅವನನ್ನು ಮಂಡ್ಯಕ್ಕೆ ವರ್ಗಾವಣೆ ಮಾಡಿದ್ದಾರೆʼʼ ಎಂದು ಗಲಾಟೆ ಮಾಡಲು ಬಂದವರ ವಿವರ ನೀಡಿದರು.

ʻʻವಿಶ್ವವಿದ್ಯಾಲಯಗಳ ಚನ್ನಾಗಿವೆ. ಅದನ್ನು ನಡೆಸುವ ಕುಲಪತಿ ಸರಿ ಇಲ್ಲ. ಅವರ ವಿರುದ್ಧ ನಾನು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ವರದಿ ಜಾರಿಯಾದರೆ ಡಾ.ಸುಧಾಕರ್ ಜೈಲಿಗೆ ಹೋಗುತ್ತಾನೆ. ನಾನು ಈಗಾಗಲೇ ಕೆಎಸ್‌ಒಯು ಹಗರಣಗಳ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇನೆ. ವಿಚಾರಣೆ ಹಂತದಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲʼʼ ಎಂದು ಬಳಿಕ ವಿಸ್ತಾರ ನ್ಯೂಸ್‌ಗೆ ಡಾ. ಕೆ. ಮಹದೇವ್‌ ಹೇಳಿದರು.

ಏನಿದು ಆಡಿಯೊ, ಅಕ್ರಮ ಸಂಬಂಧ?
ಮುಕ್ತ ವಿವಿಗೆ ಈ ವರ್ಷದ ಆರಂಭದಲ್ಲಿ ಮಹಿಳೆಯೊಬ್ಬರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗಿತ್ತು. ಕುಲಪತಿಗಳಾದ ವಿದ್ಯಾಶಂಕರ್‌ ಅವರ ಶಿಫಾರಸಿನ ಮೇರೆಗೆ ಈ ನೇಮಕಾತಿ ನಡೆದಿದೆ ಎನ್ನಲಾಗಿದೆ. ಈ ಮಹಿಳೆಯ ಜತೆಗೆ ಕುಲಪತಿಗಳು ಅಕ್ರಮ ಸಂಬಂಧ ಹೊಂದಿದ್ದಾರೆ, ಆಕೆಗೆ ಹಣ ನೀಡಿದ್ದಾರೆ, ರಾತ್ರಿ ಯಾವುದೋ ಹೊತ್ತಿನಲ್ಲಿ ಕರೆ ಮಾಡುತ್ತಿದ್ದಾರೆ ಎನ್ನುವುದು ಆಕೆಯ ಗಂಡನ ದೂರು.
ಈ ವಿಚಾರವನ್ನೇ ಮುಂದಿಟ್ಟುಕೊಂಡು ಆತ ವಿದ್ಯಾಶಂಕರ್‌ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ಅದರ ಆಡಿಯೊವನ್ನು ಮಹದೇವ್‌ ಬಿಡುಗಡೆ ಮಾಡಿದ್ದಾರೆ.

ಆಡಿಯೊದಲ್ಲಿ ಮಾತನಾಡುವ ವ್ಯಕ್ತಿ, ತನ್ನ ಹೆಂಡತಿ ಜತೆ ನಿಮಗೆ ಆಕ್ರಮ ಸಂಬಂಧವಿದೆ ಎಂದು ನೇರವಾಗಿಯೇ ಆರೋಪ ಮಾಡುತ್ತಾನೆ. ವಿದ್ಯಾಶಂಕರ್‌ ಅವರದು ಎಂದು ಹೇಳಲಾದ ಧ್ವನಿ ಈ ಆರೋಪಗಳನ್ನು ನಿರಾಕರಣೆ ಮಾಡುತ್ತಾರೆ. ಆದರೆ, ಆ ವ್ಯಕ್ತಿ ಹಲವು ದಾಖಲೆಗಳನ್ನು ನೀಡುತ್ತಾರೆ. ಹಣ ಕೊಟ್ಟಿದ್ದು, ಟುವೀಲರ್‌ ತೆಗೆಸಿಕೊಡುವುದಾಗಿ ಹೇಳಿದ್ದು, ರಾತ್ರಿ ಎರಡು ಗಂಟೆಗೆ, ಬೆಳಗ್ಗೆ ಐದು ಗಂಟೆಗೆ ಫೋನ್‌ ಮಾಡಿ ಮುಖ ನೋಡಬೇಕು ಎಂದು ಹೇಳಿದ್ದೆಲ್ಲವನ್ನೂ ತಾನು ದಾಖಲೆ ಸಹಿತ ಇಟ್ಟುಕೊಂಡಿರುವುದಾಗಿ ಆತ ಹೇಳುತ್ತಾನೆ. ಕಾಲ್‌ ಡಿಟೇಲ್ಸ್‌ ಇಟ್ಟುಕೊಂಡು ಎಲ್ಲ ಸಮಯ, ಸಂದರ್ಭಗಳನ್ನು ವಿವರಿಸುತ್ತಾನೆ. ಕೆಲವೊಂದು ಕರೆಗಳನ್ನು ವಿಸಿ ಎಂದು ಹೇಳಲಾದ ವ್ಯಕ್ತಿ ಒಪ್ಪಿಕೊಳ್ಳುತ್ತಾರಾದರೂ ಅದೆಲ್ಲವೂ ತಂಗಿ ಎಂಬ ಪ್ರೀತಿಯಿಂದ, ಕಷ್ಟದಲ್ಲಿದ್ದಾರೆಂಬ ಕಾರಣಕ್ಕೆ ಮಾಡಿದ್ದಾಗಿ ಹೇಳುತ್ತಾರೆ.

Exit mobile version