Site icon Vistara News

Jain Muni Murder : ಜೈನಮುನಿ ದೇಹ 9 ಪೀಸ್‌; ಸೀರೆಯಲ್ಲಿ ಸುತ್ತಿ ಕೊಳವೆ ಬಾವಿಗೆ ಎಸೆದಿದ್ದ ದುರುಳರು!

Jain muni kamakumara nandi murder and spot

ಚಿಕ್ಕೋಡಿ: ರಾಜ್ಯದ ಇತಿಹಾಸದಲ್ಲಿ ಸ್ವಾಮೀಜಿಯೊಬ್ಬರ ಭೀಕರ ಹತ್ಯೆಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಾಕ್ಷಿಯಾಗಿದೆ. ಇಲ್ಲಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಕೇಸ್ ರಾಜ್ಯದ ಜನರನ್ನು ಭಯಕ್ಕೆ ದೂಡಿದೆ. ಅಲ್ಲದೆ, ಇದು ಜೈನ ಸಮುದಾಯದ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಜೈನಮುನಿಯನ್ನು ಕರೆಂಟ್‌ ಶಾಕ್‌ ನೀಡಿ ಕೊಂದಿರುವ (Jain Muni Murder) ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಅವರ ದೇಹವನ್ನು 9 ತುಂಡುಗಳನ್ನಾಗಿ ಮಾಡಿ 400 ಅಡಿ ಆಳದ ಕೊಳವೆ ಬಾವಿಗೆ ಹಾಕಲಾಗಿದೆ. ಈಗ ದೇಹದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇಲ್ಲಿನ ಖಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆಬಾವಿಗೆ ಹಂತಕರು ಜೈನಮುನಿಗಳ ದೇಹವನ್ನು ತುಂಡರಿಸಿ ಎಸೆದಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯಿಂದಲೇ ಕಾರ್ಯಾಚರಣೆ ನಡೆದಿತ್ತು. ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ಮತ್ತೆ ಪೊಲೀಸರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ್ದರು. ಮಧ್ಯಾಹ್ನದ ವೇಳೆಗೆ ಕೊಳವೆಬಾವಿಯ 25ನೇ ಅಡಿ ಆಳದಲ್ಲಿ ರಕ್ತಸಿಕ್ತ ಸೀರೆ, ಟವೆಲ್ ಪತ್ತೆಯಾಗಿತ್ತು.

ಇದನ್ನೂ ಓದಿ: Vistara Impact: ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿ ಮಣ್ಣು ತೆಗೆಯುವವರ ವಿರುದ್ಧ FIRಗೆ ಸೂಚನೆ

30 ಅಡಿ ಆಳಕ್ಕೆ ಸಿಕ್ಕ ಮೃತದೇಹದ ಭಾಗಗಳು

ಕೊಳವೆಬಾವಿಯನ್ನು ಅಗೆಯುತ್ತಾ ಹೋದಾಗ 30 ಅಡಿ ಆಳದಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ದೇಹದ 9 ಭಾಗಗಳು ಪತ್ತೆಯಾಗಿವೆ. ದೇಹದ ಎಲ್ಲ ಭಾಗಗಳನ್ನು ಒಂದೆಡೆ ಜೋಡಿಸಿಡಲಾಗಿದೆ.

ದೇಹವನ್ನು 9 ಭಾಗ ಮಾಡಿದರು!

ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ ಮಾಡಿದ ಬಳಿಕ ದುರುಳರು 9 ಭಾಗವನ್ನಾಗಿ ಮಾಡಿದ್ದಾರೆ. ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆಯನ್ನು ಈ ಕ್ರೂರಿಗಳು ಪ್ರತ್ಯೇಕವಾಗಿ ಕತ್ತರಿಸಿ ಹಾಕಿದ್ದಾರೆ.

ಬೆಳಗಾವಿಗೆ ಜಿಲ್ಲಾಸ್ಪತ್ರೆಗೆ ರವಾನೆ

ಜೈನಮುನಿಗಳ ಮೃತದೇಹವನ್ನು ಖಟಕಬಾವಿಯಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಶನಿವಾರವೇ (ಜುಲೈ 08) ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಭಾನುವಾರ (ಜುಲೈ 9) ಹಿರೇಕೋಡಿಯ ನಂದಿಪರ್ವತ ಆಶ್ರಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಭಕ್ತಾದಿಗಳು ನಿರ್ಧಾರ ಮಾಡಿದ್ದಾರೆ.

ಕರೆಂಟ್‌ ಶಾಕ್‌ ಕೊಟ್ಟು ಕೊಂದರೇ?

ಜೈನಮುನಿಗಳನ್ನು ಕೊಲ್ಲಲು ಈತ ಸಾಕಷ್ಟು ಮೊದಲೇ ಪ್ಲ್ಯಾನ್‌ ಮಾಡಿಕೊಂಡಿದ್ದನೇ? ಅವರನ್ನು ಕರೆಂಟ್‌ ಶಾಕ್‌ ನೀಡಿ ಕೊಲ್ಲಲಾಗಿದೆಯೇ ಎಂಬ ಅನುಮಾನ ಮೂಡಿದ್ದು, ಈ ಬಗ್ಗೆ ಜೈನಮುನಿ ಆಪ್ತ ಪ್ರದೀಪ್‌ ನಂದಗಾಂವ್‌ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇತ್ತು. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.

ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿ ವಾಸವಿದ್ದರು. ಅವರು ನಾಪತ್ತೆಯಾದ ಬಗ್ಗೆ ಆಚಾರ್ಯ ಕಾಮಕುಮಾರನಂದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿತ್ತು.

ಆಪ್ತನಿಂದಲೇ ಕೊಲೆ ಆರೋಪ

ಈ ಕೊಲೆಯ ಹಿಂದೆ ಇರುವ ಪ್ರಮುಖ ಆರೋಪಿಯು ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಬಹಳ ಆಪ್ತ ಎನ್ನಲಾಗಿದೆ. ಈತ ಆಗಾಗ ಮಠಕ್ಕೆ ಬಂದು ಸ್ವಾಮೀಜಿಯವರ ವಿಶ್ವಾಸವನ್ನು ಗಳಿಸಿದ್ದ. ಅಲ್ಲದೆ, ತನ್ನ ಕಷ್ಟಗಳನ್ನು ಹೇಳಿಕೊಂಡು ಹಣವನ್ನು ಪಡೆದಿದ್ದ ಎನ್ನಲಾಗಿದೆ. ಕೊನೆಗೆ ಸ್ವಾಮೀಜಿ ಹಣವನ್ನು ವಾಪಸ್‌ ಕೇಳಿದಾಗ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ತನಿಖೆ ನಡೆದಿದೆ. ಅಲ್ಲದೆ, ಆರೋಪಿಗಳ ಹೆಸರನ್ನು ಈ ಹಂತದಲ್ಲಿ ಬಹಿರಂಗಗೊಳಿಸಲಾಗದು ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.

ರಾತ್ರಿ ಇಡೀ ಪೊಲೀಸರಿಗೆ ತಪ್ಪು ಮಾಹಿತಿ

ತನಿಖೆ ಸಂದರ್ಭದಲ್ಲಿ ರಾತ್ರಿಯಿಡೀ ಇಬ್ಬರು ಆರೋಪಿಗಳು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹತ್ಯೆ ಮಾಡಿ ಶವವನ್ನು ಎಲ್ಲಿ ಬಿಸಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಸತಾಯಿಸಿದ್ದರು. ಒಂದು ಬಾರಿ, ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದಿದ್ದರು. ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದರು. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ದೊರೆತಿಲ್ಲ. ಹೀಗಾಗಿ ಶನಿವಾರ ಬೆಳಗ್ಗೆ 6.30ರಿಂದ ಮುನಿಗಳ ಮೃತದೇಹದ ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕೊನೆಗೂ ಮೃತದೇಹ ಪತ್ತೆಯಾದಂತೆ ಆಗಿದೆ.

ಇದನ್ನೂ ಓದಿ: Jain muni Murder‌ : ಜೈನಮುನಿ ಕಾಮಕುಮಾರ ನಂದಿ ಹತ್ಯೆ; ಅನ್ನಾಹಾರ ಬಿಟ್ಟ ಜೈನಮುನಿ ಗುಣಧರನಂದಿ ಮಹಾರಾಜ್

ಹಣದ ವಿಚಾರ ಕಾರಣವೇ?

ಸದ್ಯಕ್ಕೆ ಹಣದ ವಿಚಾರದ ಬಗ್ಗೆ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಮುಖ ಆರೋಪಿಯು ಜೈನಮುನಿಯಿಂದ ಹಣವನ್ನು ಪಡೆದುಕೊಂಡಿದ್ದು, ಅದನ್ನು ವಾಪಸ್‌ ಕೇಳಿದ್ದಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿಗಳು ಬಾಯಿಬಿಟ್ಟಿದ್ದಾರೆಂಬ ಮಾಹಿತಿ ಇದೆ. ಆದರೆ, ಇನ್ನಷ್ಟೇ ಸತ್ಯಾಂಶ ತಿಳಿದುಬರಬೇಕಿದೆ.

Exit mobile version