Site icon Vistara News

Karnataka High Court | ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ನ್ಯಾ. ಪ್ರಸನ್ನ ಬಿ ವರಳೆ ಪ್ರಮಾಣ ವಚನ ಸ್ವೀಕಾರ

Karnataka High Court

ಬೆಂಗಳೂರು: ಕರ್ನಾಟಕ ಹೈಕೋರ್ಟ್ (Karnataka High Court) ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪ್ರಸನ್ನ ಬಾಲಚಂದ್ರ ವರಳೆ (Justice Prasanna B Varale) ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ಈ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಜರಿದ್ದರು.

ಪ್ರಮಾಣವಚನ ಬೋಧನಾ ಸಮಾರಂಭವನ್ನು ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ, ಹಿರಿಯ ಅಧಿಕಾರಿಗಳ ಜತೆಗೆ, ಹೊಸದಾಗಿ ನೇಮಕವಾಗಿರುವ ಮುಖ್ಯ ನ್ಯಾಯಮೂರ್ತಿಗಳ ಕುಟುಂಬದ ವರ್ಗದವರೂ ಹಾಜರಿದ್ದರು.

ನ್ಯಾ.ಪ್ರಸನ್ನ ಬಾಲಚಂದ್ರ ವರಳೆ ಮೂಲತಃ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯವರು. 1962 ಜೂನ್ 23ರಂದು ಪ್ರಸನ್ನ ಅವರು ನಿಪ್ಪಾಣಿಯಲ್ಲಿ ಜನಿಸಿದರು. ಕಲಾ ಪದವೀಧರರಾಗಿರುವ ಪ್ರಸನ್ನ ಬಿ ವರಳೆ ಅವರು, ಮಹಾರಾಷ್ಟ್ರದ ಔರಂಗಾಬಾದ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠಾವಾಡ ವಿವಿಯಿಂದ ಕಾನೂನು ಪದವಿ ಪಡೆದುಕೊಂಡಿದ್ದಾರೆ.

1985ರಲ್ಲಿ ವಕೀಲಿಕಿಗೆ ನೋಂದಣಿ ಮಾಡಿಸಿಕೊಂಡ ವರಳೆ ಅವರು, ಎಸ್.ಎನ್. ಲೋಯಾ ಅವರ ಬಳಿ ಸೇರಿಕೊಂಡರು. ಕ್ರಿಮಿನಲ್ ಮತ್ತು ಸಿವಿಲ್ ಕೇಸ್‌ಗಳನ್ನು ನಡೆಸುತ್ತಿದ್ದರು. ಇದೇ ವೇಳೆ, ಅವರು ಔರಂಗಾಬಾದ್‌ನ ಅಂಬೇಡ್ಕರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಅಸಿಸ್ಟಂಟ್ ಗೌರ್ನಮೆಂಟ್ ಪ್ಲೀಡರ್ ಮತ್ತು ಅಡಿಷನಲ್ ಪಬ್ಲಿಕ್ ಪ್ರಾಸೆಕ್ಯೂಟರ್ ಕೂಡ ಆಗಿದ್ದರು. ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದಲ್ಲಿ ಭಾರತ ಸರ್ಕಾರದ ಪರವಾಗಿ ಎಎನ್‌ಡಿ ಅಡಿಷನಲ್ ಸ್ಟ್ಯಾಂಡಿಂಗ್ ಕೌನ್ಸೆಲ್ ಕೂಡ ಆಗಿದ್ದರು.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನ್ಯಾ. ಪ್ರಸನ್ನ ಬಿ ವರಲೆ ಅವರಿಗೆ ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಇದನ್ನೂ ಓದಿ | Justice D Y Chandrachud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ

Exit mobile version