Site icon Vistara News

Karnataka Election 2023: ಬೀದಿ ಬೀದಿಯಲ್ಲಿ ಕಾಂಚಾಣದ ನರ್ತನ, ಮರದ ಬುಡದಲ್ಲೂ ಸಿಕ್ಕಿತು ಹಣ! ಐಟಿ ರೈಡ್‌ನಲ್ಲಿ ಕೋಟಿಗಟ್ಟಲೆ ವಶ

IT Raid karnataka election seize

ಬೆಂಗಳೂರು: ಮತದಾರರಿಗೆ ಹಣ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಈ ಸಂದರ್ಭ ಮಧ್ಯ ಪ್ರವೇಶಿಸಿದ ಪೊಲೀಸರಿಗೆ ಮರದ ಬುಡದಲ್ಲಿ ಹಣದಿಂದ ತುಂಬಿದ್ದ ಬ್ಯಾಗ್‌ ಪತ್ತೆಯಾಗಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಚಿಕ್ಕಲ್ಲಸಂದ್ರದಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಆರ್.ಕೆ. ರಮೇಶ್ ಅವರ ಕಾರ್ಯಕರ್ತರು ಮನೆಮನೆಗೆ ತೆರಳಿ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆಗಿರುವ ಎಂ.ಕೃಷ್ಣಪ್ಪ ಅವರ ಬೆಂಬಲಿಗರು ಆರೋಪಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕೈ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಘಟನೆಯಿಂದ ಉಂಟಾದ ಬಿಗುವಿನ ಸ್ಥಿತಿ ತಿಳಿಗೊಳಿಸಲು ಸ್ಥಳಕ್ಕೆ ಬಂದ ಸುಬ್ರಹ್ಮಣ್ಯಪುರ ಪೊಲೀಸರು ಕಾಂಗ್ರೆಸ್ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ನಿಂದ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಪಕ್ಕದಲ್ಲೆಲ್ಲ ತಡಕಾಡಿದ ಪೊಲೀಸರಿಗೆ ಈ ವೇಳೆ ಮರದ ಬುಡದಲ್ಲಿ ಗರಿ ಗರಿ ನೋಟುಗಳಿಂದ ತುಂಬಿದ ಬ್ಯಾಗ್ ಸಿಕ್ಕಿತು. ಅದರಲ್ಲಿ ಮೂರು ಲಕ್ಷದಷ್ಟು ಹಣವಿತ್ತು. ಹಣ ಸೀಜ್‌ ಮಾಡಿರುವ ಪೊಲೀಸರು, ಕೆಲ ಕಾಂಗ್ರೆಸ್‌, ಕಮಲ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಟಿ ಅಧಿಕಾರಿಗಳಿಂದ 11 ಕಡೆ ದಾಳಿ, ಕೋಟಿಗಟ್ಟಲೆ ಹಣ ವಶ

ನಗರದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಾನಾ ಕಡೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದು, ಸುಮಾರು 15.53 ಕೋಟಿ ರೂ. ನಗದು ಸೀಜ್ ಮಾಡಿದ್ದಾರೆ. 7 ಕೋಟಿ ಮೌಲ್ಯದ 10.14 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.

ಶಿವಾಜಿನಗರ ವ್ಯಾಪ್ತಿಯಲ್ಲಿ 4.77 ಕೋಟಿ, ಆರ್‌ಆರ್ ನಗರ ವ್ಯಾಪ್ತಿಯಲ್ಲಿ 3.44 ಕೋಟಿ, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 3.35 ಕೋಟಿ, ಪುಲಿಕೇಶಿನಗರ ವ್ಯಾಪ್ತಿಯಲ್ಲಿ 2.30 ಕೋಟಿ, ಶಾಂತಿನಗರ ವ್ಯಾಪ್ತಿಯಲ್ಲಿ 62.83 ಲಕ್ಷ, ಗಾಂಧಿನಗರ ವ್ಯಾಪ್ತಿಯಲ್ಲಿ 55 ಲಕ್ಷ, ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಜಯನಗರದಲ್ಲಿ 23.50 ಲಕ್ಷ ನಗದು ಸೀಜ್ ಮಾಡಲಾಗಿದೆ. ರಾಯಚೂರು ವ್ಯಾಪ್ತಿಯಲ್ಲಿ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ನಗರದ ಮೂರು ಕ್ಷೇತ್ರಗಳಲ್ಲಿ ಐದು ಕೋಟಿ ಮೌಲ್ಯದ ಸುಮಾರು 6.59 ಕೆಜಿ ಚಿನ್ನ, ರಾಯಚೂರು ಕ್ಷೇತ್ರದಲ್ಲಿ 2.8 ಕೋಟಿ ಮೌಲ್ಯದ 3.55 ಕೆಜಿ ಚಿನ್ನ ಸೀಜ್ ಮಾಡಲಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಐಟಿ ಇಲಾಖೆ ಆಪರೇಷನ್ ಹೆಚ್ಚು ಮಾಡಿದೆ. ಮತದಾನಕ್ಕೆ ಇನ್ನೂ ಒಂದು ದಿನವಷ್ಟೆ ಬಾಕಿಯಿದ್ದು, ಕ್ಷೇತ್ರಗಳಲ್ಲಿ ಹಣ, ಉಡುಗೊರೆಗಳ ಹಂಚಿಕೆ ಮಾಡಲಾಗುತ್ತಿರುವ ಗುಮಾನಿಯಲ್ಲಿ ಐಟಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಬಹಿರಂಗ ಪ್ರಚಾರ ಅಂತ್ಯ; ಕಣ ರಂಗೇರಿಸಿದ ಅತಿರಥ, ಮಹಾರಥರ ಕ್ಯಾಂಪೇನ್!

Exit mobile version