Site icon Vistara News

Karnataka Election 2023: ಬಜರಂಗದಳ ನಿಷೇಧ ಇಲ್ಲ ಎಂದ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ

Karnataka Election 2023: No ban on Bajarangdal, says Veerappa Moily

ಉಡುಪಿ, ಕರ್ನಾಟಕ: ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಬಜರಂಗದಳ ಮತ್ತು ಪಿಎಫ್ಐಗಳಂಥ ಸಂಘಟನೆಗಳನ್ನು ನಿಷೇಧ ಮಾಡುವ ಭರವಸೆಯನ್ನು ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಈ ವಿಷಯ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ (Veerappa Moily) ಅವರು, ಬಜರಂಗದಳ ನಿಷೇಧ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ. ಬಜರಂಗದಳ ಸಂಘಟನೆಯು ವಿಶ್ವ ಹಿಂದೂ ಪರಿಷತ್‌ನ ಯುವ ಘಟಕವಾಗಿದೆ(Karnataka Election 2023).

ಮಾಜಿ ಮುಖ್ಯಮಂತ್ರಿಯೂ ಆಗಿರುವ ವೀರಪ್ಪ ಮೊಯ್ಲಿ ಅವರು, ನಮ್ಮ ಪ್ರಣಾಳಿಕೆಯಲ್ಲಿ ನಾವು ಎರಡೂ ಸಂಘಟನೆಗಳನ್ನು ಅಂದರೆ ಬಜರಂಗದಳ ಮತ್ತು ಪಿಎಫ್ಐ ಹೆಸರಿಸಿದ್ದೇವೆ. ಇದು ಎಲ್ಲ ಸಮಾಜವಿರೋಧಿ ಸಂಘಟನೆಗಳಿಗೆ ಅನ್ವಯಿಸುತ್ತದೆ. ಯಾವುದೇ ಸಂಘಟೆಯನ್ನು ನಿಷೇಧ ಮಾಡುವುದು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ಹಾಗಾಗಿ, ಬಜರಂಗದಳವನ್ನು ಕರ್ನಾಟಕ ನಿಷೇಧ ಮಾಡಲು ಸಾಧ್ಯವಿಲ್ಲ ಎಂಬ ವೀರಪ್ಪ ಮೊಯ್ಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಈ ಬಗ್ಗೆ ಡಿ ಕೆ ಶಿವಕುಮಾರ್ ಅವರು ಸ್ಪಷ್ಟವಾದ ಉತ್ತರ ನೀಡಲಿದ್ದಾರೆ. ದ್ವೇಷದ ರಾಜಕಾರಣ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಬಜರಂಗದಳ ನಿಷೇಧ ಮಾಡುವ ಯಾವುದೇ ಪ್ರಸ್ತಾಪಗಳು ನಮ್ಮಲ್ಲಿ ಇಲ್ಲ. ನಾನು ಕಾಂಗ್ರೆಸ್ ನಾಯಕನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಮೊಯ್ಲಿ ಅವರು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ ಸುಟ್ಟ ಈಶ್ವರಪ್ಪ; ಇದು ಜನರಿಗೆ ಮಾಡಿದ ಅವಮಾನ ಎಂದ ಖರ್ಗೆ

ಬಜರಂಗ ದಳ ನಿಷೇಧ ಪ್ರಣಾಳಿಕೆಯ ಭರವಸೆಯ ಕುರಿತು, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಉತ್ತರ ನೀಡಲಿದ್ದಾರೆ. ಆದರೆ, ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟಿರುವುದು ಸರಿಯಲ್ಲ. ನಿಮಗೆ ಇಷ್ಟ ಆಗಲೀ, ಆಗದೇ ಇರಲಿ ಪ್ರಣಾಳಿಕೆ ಸುಡುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿದ್ದಾರೆ(Karnataka Election 2023).

ಕಲಬುರಗಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸುಟ್ಟಿದ್ದಾರೆ. ಇದರ ಅರ್ಥ ಏನೆಂದರೆ, ಕಾಂಗ್ರೆಸ್ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಸುಟ್ಟು ಹಾಗೆ ಆಗುತ್ತದೆ. ಈ ಮೂಲಕ ಈಶ್ವರಪ್ಪ ಅವರು ಜನರಿಗೆ ಅವಮಾನ ಮಾಡಿದ್ದಾರೆ. ರಾಜಕಾರಣದಲ್ಲಿ ಇದು ಸರಿಯಾದ ಕ್ರಮವಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ಇದನ್ನೂ ಓದಿ: Karnataka Election 2023: ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಸೋನಿಯಾ ಗಾಂಧಿ ಎಂಟ್ರಿ, ಶೆಟ್ಟರ್ ಪರ ಕ್ಯಾಂಪೇನ್

ಪ್ರಜಾಪ್ರಭುತ್ವದಲ್ಲಿ ಸಹಿಷ್ಣುತೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಆರೋಪ ಮಾಡುತ್ತಾರೆ.ಇದು ಬಿಜೆಪಿಯ ವಿಚಾರ. ಅವರ ನಂಬಿಕೆಗಳು, ನಮ್ಮ ನಂಬಿಕೆಗಳು ಬೇರೆ. ನಾವು ಹಿಂದೂ ಇದ್ದೇವೆ, ನೀವು ಹಿಂದೂ ಇದ್ದೀರಿ. ಆದರೆ, ನಿಮಗಿರುವ ಸ್ವಾತಂತ್ರ್ಯ ನಮಗಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

Exit mobile version