Site icon Vistara News

Karnataka Election: ಮಿಸ್ಸಾಗೋ ಚಾನ್ಸೇ ಇಲ್ಲ, ಇವರೇ ಮುಂದಿನ ಸಿಎಂ; ಇದು ಮಂಡ್ಯದ ಶ್ವಾನ ಭೈರ ಭವಿಷ್ಯ!

Dog predicts next CM of Karnataka. (Karnataka Election updates)

ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಯಾವ ಪಕ್ಷ ಹೆಚ್ಚು ಸೀಟು ಪಡೆಯುತ್ತದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತಾರೆ? ಯಾರು ಸಿಎಂ ಆಗ್ತಾರೆ?- ಇದು ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಚರ್ಚೆ.

ಈ ಚರ್ಚೆಯ ನಡುವೆ ಕೆಲವು ವಿಶ್ಲೇಷಕರು ತಮ್ಮ ಅನುಭವಕ್ಕೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಾರೆ, ಮತದಾರರ ಮನಸ್ಸಿಗೆ ಕಣ್ಣು ಹಾಕಿದಂತೆ ಇದೇ ರಿಸಲ್ಟ್‌ ಅಂತಾರೆ, ಅವರ ನಡುವೆ ಜ್ಯೋತಿಷಿಗಳು, ಸಂಖ್ಯಾ ಶಾಸ್ತ್ರಜ್ಞರು ಕೂಡಾ ತಮ್ಮ ತಮ್ಮ ಲೆಕ್ಕಾಚಾರ, ಗ್ರಹಗತಿಗಳ ಆಧಾರದಲ್ಲಿ ತಮ್ಮ ಊಹೆಗಳನ್ನು ಮಾಡುತ್ತಿದ್ದಾರೆ.

ಈ ಮಧ್ಯೆ, ನಾಯಿ ಹೇಳಿದ ಭವಿಷ್ಯವೊಂದು ಗಮನ ಸೆಳೆದಿದೆ. ಅದರು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಭವಿಷ್ಯ ನುಡಿದಿದೆ. ಮಂಡ್ಯದ ಅಶೋಕನಗರದ ಗೋಪಿ ಎಂಬುವರ ಮನೆ ನಾಯಿ ಭೈರ ಅಲಿಯಾಸ್‌ ರ‍್ಯಾಂಬೋ (Dog Prediction) ಈಗ ಭವಿಷ್ಯ ಹೇಳಿ ಕುತೂಹಲದ ಕೇಂದ್ರ ಬಿಂದುವಾಗಿದೆ.

ಮಂಡ್ಯದ ಗೋಪಿ ಅವರು ಕಾಲ ಭೈರವೇಶ್ವರನ ಭಕ್ತರು. ತಮ್ಮ ಮನೆ ದೇವರಾದ ಕಾಲ ಭೈರವೇಶ್ವರನ ಜತೆಗೆ ತಾವು ಸಾಕಿರುವ ಶ್ವಾನಕ್ಕೂ ಪೂಜೆ ಸಲ್ಲಿಸುತ್ತಾರೆ. ನಾಯಿ ತಮ್ಮ ಮನೆಯ ಕಷ್ಟಗಳನ್ನು ಪರಿಹರಿಸಿದೆ ಎನ್ನುವುದು ಅವರ ನಂಬಿಕೆ. ಅದಕ್ಕೆ ಮುಂದಿನ ಭವಿಷ್ಯವನ್ನು ಅಂದಾಜಿಸುವುದಕ್ಕೂ ಗೊತ್ತು ಅನ್ನೋದು ಅವರಿಗೆ ಇತ್ತೀಚೆಗೆ ಗ್ರಹಿಕೆಗೆ ಬಂದಿದೆ. ಹೀಗಾಗಿ ಅವರು ಈಗ ರಾಜ್ಯದ ಭವಿಷ್ಯವನ್ನೇ ಕೇಳಿದ್ದಾರೆ.

ಭವಿಷ್ಯ ಹೇಳುವ ಮುನ್ನ ನಾಯಿಗೆ ಪೂಜೆ

ಹಾಗಿದ್ದರೆ ಯಾರಾಗ್ತಾರೆ ಸಿಎಂ?

ಗೋಪಿನಾಥ್‌ ಅವರು ಶ್ವಾನದ ಮುಂದೆ ಮೂವರು ಮುಖ್ಯಮಂತ್ರಿ ಆಕಾಂಕ್ಷಿಗಳ ಪೋಟೊಗಳನ್ನು ಇಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್, ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಫೋಟೋ ಇಟ್ಟು ಸಿಎಂ ಯಾರಾಗ್ತಾರೆ ಎಂದು ಹೇಳುವಂತೆ ಭೈರ ಅಲಿಯಾಸ್‌ ರ‍್ಯಾಂಬೊನನ್ನು ಕೇಳಿದ್ದಾರೆ. ದೇವರತ್ತ ಒಂದು ಬಾರಿ ಮುಖ ಮಾಡಿದ ಶ್ವಾನ ಎಚ್.ಡಿ‌.ಕುಮಾರಸ್ವಾಮಿ ಫೋಟೊ ಎತ್ತಿ ಹಿಡಿದಿದೆ. ಈ ಮೂಲಕ ಮುಂದಿನ ಮುಖ್ಯಮಂತ್ರಿ ಹೆಚ್ ಡಿಕೆ ಎಂದು ಶ್ವಾನ ಸೂಚಿಸಿದೆ. ಹೇಳಿ ಕೇಳಿ ಕಾಲಭೈರವೇಶ್ವರಸ್ವಾಮಿ ದೇವರನ್ನ ಆರಾಧಿಸೋ ಕುಮಾರಸ್ವಾಮಿ ಕುಟುಂಬಕ್ಕೆ ಈ ಭೈರನ ಆಶೀರ್ವಾದವೂ ಸಿಕ್ಕಿದಂತಾಗಿದೆ! ಆದರೆ, ಇನ್ನೊಬ್ಬ ಸಿಎಂ ಆಕಾಂಕ್ಷಿ ಸಿದ್ದರಾಮಯ್ಯ ಅವರ ಫೋಟೊವನ್ನೇ ಗೋಪಿನಾಥ್‌ ಇಟ್ಟಿಲ್ಲ.. ಯಾಕೇಂತ ಗೊತ್ತಿಲ್ಲ!

ಏನಿದು ಶ್ವಾನ ಭವಿಷ್ಯದ ಹಿನ್ನೆಲೆ!?

ಕಾಲಭೈರವೇಶ್ವರನ ಭಕ್ತರಾಗಿರುವ ಗೋಪಿನಾಥ್‌ ತಮ್ಮ ಮನೆಯ ನಾಯಿಗೂ ಭೈರ ಎಂದೇ ಹೆಸರಿಟ್ಟಿದ್ದರು. ಪ್ರೀತಿಯಿಂದ ಕಲಿಯೋದು ರ‍್ಯಾಂಬೋ. ಈ ನಾಯಿ ಪ್ರೀತಿ ಪಾತ್ರ ಹೇಗೋ ಒಂದು ರೀತಿಯ ಮಾಂತ್ರಿಕ ಶಕ್ತಿ ಇದೆ ಎನ್ನುವುದು ಗೋಪಿನಾಥ್‌ ನಂಬಿಕೆ.

ಅದೊಂದು ಸಾರಿ ಅವರ ಅಮ್ಮನಿಗೆ ಹೃದಯಾಘಾತವಾದಾಗ ಜಯದೇವ ಆಸ್ಪತ್ರೆಗೆ ಸೇರಿಸಿದ್ದಾಗ ಅನ್ನ, ನೀರು ಬಿಟ್ಟಿದ್ದ ನಾಯಿಯನ್ನು ಅಲ್ಲೇ ಕರೆದುಕೊಂಡು ಹೋಗಿ ಅಮ್ಮನ ದರ್ಶನ ಮಾಡಿಸಲಾಯಿತಂತೆ. ನಾಯಿ ನೆಕ್ಕಿದ್ದೇ ತಡ ಅಮ್ಮ ಕೂಡಾ ಹುಷಾರಾಗಿ ಬಿಟ್ಟರಂತೆ.

ಇವರೇ ಗೋಪಿನಾಥ್

ಸಾಮಾನ್ಯವಾಗಿ ಫುಟ್ಬಾಲ್‌ ವಿಶ್ವಕಪ್‌ ಸಂದರ್ಭದಲ್ಲಿ ಅಕ್ಟೋಪಸ್‌ ಭವಿಷ್ಯ ಹೇಳಿದ್ದನ್ನು ಗಮನಿಸಿದ್ದ ಗೋಪಿನಾಥ್‌ ಅವರಿಗೆ ತಮ್ಮ ನಾಯಿಗೂ ಅಂಥದ್ದೊಂದು ಶಕ್ತಿ ಇದೆ ಎಂದು ಅನಿಸಿದೆ. ಹಾಗಾಗಿ ಅವರು ಕೂಡಾ ಪ್ರಯೋಗ ಮಾಡಿ ನೋಡಿದಾಗ ನಾಯಿ ಕುಮಾರಸ್ವಾಮಿ ಚಿತ್ರವನ್ನು ತೋರಿಸಿದೆ. ಜತೆಗೆ ಪ್ರತಿ ಬಾರಿಯೂ ಅವರ ಫೋಟೊವನ್ನೇ ತೋರಿಸುತ್ತದೆ ಎನ್ನುವುದು ವಿಶೇಷ.

ಈ ನಾಯಿ ಕುಮಾರಸ್ವಾಮಿ ಪ್ರೇಮಿ!

ಇನ್ನೊಂದು ಅಚ್ಚರಿಯ ಘಟನೆ ಎಂದರೆ, ಈ ನಾಯಿಗೆ ಸ್ವಲ್ಪ ಪಾಲಿಟಿಕ್ಸ್‌ನಲ್ಲೂ ಆಸಕ್ತಿ ಇದೆ. ಅದರಲ್ಲೂ ಕುಮಾರಸ್ವಾಮಿ ಅಂದರೆ ಸ್ವಲ್ಪ ಜಾಸ್ತಿ ಪ್ರೀತಿ. ಇತ್ತೀಚೆಗೆ ಒಂದು ಸಾರಿ ಎಂದಿನಂತೆ ದಿನಪತ್ರಿಕೆಯನ್ನು ತಂದು ಗೋಪಿ ಅವರ ಕೈಯಲ್ಲಿ ಇಡಬೇಕಾಗಿದ್ದ ಭೈರ ಅದನ್ನು ಕೊಡದೆ ತಾನೇ ಕೈಯ ನಡುವೆ ಇಟ್ಟುಕೊಂಡಿತ್ತಂತೆ. ಯಾಕೆ ಹೀಗೆ ಮಾಡ್ತಿದೆ ಎಂದು ಬಿಡಿಸಿ ನೋಡಿದರೆ ಆ ಪತ್ರಿಕೆಯ ಜಾಹೀರಾತಿನಲ್ಲಿದ್ದ ದೇವೇಗೌಡರು ಮತ್ತು ಕುಮಾರಸ್ವಾಮಿ ಫೋಟೊವನ್ನೇ ಅದು ನೋಡುತ್ತಿತ್ತಂತೆ. ಅದರಲ್ಲೂ ಕುಮಾರಸ್ವಾಮಿ ಫೋಟೊ ನೋಡಿ ಪ್ರೀತಿಯಿಂದ ನೆಕ್ಕಲು ಶುರು ಮಾಡಿತಂತೆ!

ಈ ನಡುವೆ ಗೋಪಿನಾಥ್‌ ಅವರಿಗೆ ಇನ್ನೊಂದು ಆಸೆ ಇದ್ಯಂತೆ. ಕುಮಾರಸ್ವಾಮಿ ಅವರನ್ನು ಒಮ್ಮೆ ನಾಯಿಗೆ ಭೇಟಿ ಮಾಡಿಸೋದು. ನಾಯಿಯನ್ನು ಭೇಟಿ ಮಾಡಿದರೆ ಅವರ ಆರೋಗ್ಯವೂ ಸುಧಾರಿಸಬಹುದು ಎನ್ನುವುದು ಅವರ ಅಭಿಪ್ರಾಯ. ಅದರ ಜತೆಗೆ ಕುಮಾರಸ್ವಾಮಿ ಹೇಳುವ, ಜೆಡಿಎಸ್‌ ಅಭ್ಯರ್ಥಿ ಪರವೂ ನಾಯಿ ಕೈಯಲ್ಲಿ ಪ್ರಚಾರ ಮಾಡಿಸೋ ಪ್ಲ್ಯಾನೂ ಇದೆ. ಒಟ್ಟಿನಲ್ಲಿ ಈ ಕುಮಾರಸ್ವಾಮಿ ಪ್ರೇಮಿ ಅನ್ನೋದರಲ್ಲಿ ಡೌಟೇ ಇಲ್ಲ!

ಇದನ್ನೂ ಓದಿ : Karnataka Election : ಡಿ.ಕೆ ಶಿವಕುಮಾರ್, ಎಚ್‌.ಡಿ ಕುಮಾರಸ್ವಾಮಿ ಪರವಾಗಿ ಪತ್ನಿಯರಿಂದ ಮತಯಾಚನೆ‌

karnataka-election: Dog predicts next CM of Karnataka? who will be then?

Exit mobile version