Site icon Vistara News

Karnataka Weather : ನಾಳೆಯಿಂದ ಡಿ. 9ರ ವರೆಗೆ ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ

Rain Alert

ಬೆಂಗಳೂರು: ರಾಜ್ಯದಲ್ಲಿ ಮಳೆಯು ಕಣ್ಣಾಮುಚ್ಚಾಲೆ ಆಟವನ್ನಾಡುತ್ತಿದೆ. ಡಿ.1 ರಿಂದ 9ರವರೆಗೆ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯೊಂದಿಗೆ (Rain news) ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗಲಿದೆ.

ಆಗ್ನೇಯ ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪ್ರಭಾವದಿಂದಾಗಿ ರಾಜ್ಯದಲ್ಲಿ ವಾತಾವರಣದಲ್ಲಿ ಬದಲಾವಣೆ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡದಲ್ಲಿ ಡಿ.1 ರಿಂದ 5ರವರೆಗೆ ಸಾಧಾರಣ ಮಳೆಯಾದರೆ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮೊದಲೆರಡು ದಿನ ಮಳೆ ಸಾಧ್ಯತೆ ಇದ್ದರೆ, ನಂತರ ಒಣಹವೆ ಮುಂದುವರಿಯಲಿದೆ.

ಉತ್ತರ ಒಳನಾಡಲ್ಲಿ ಸಕ್ರಿಯವಾಗಿದ್ದ ಮಳೆಯು ಮುಂದಿನ ವಾರ ದುರ್ಬಲಗೊಳ್ಳಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ ವಿಜಯಪುರದ ಅಲ್ಲಲ್ಲಿ ತಕ್ಕ ಮಟ್ಟಿಗೆ ಮಳೆ ಸಾಧ್ಯತೆ ಇದೆ. ಉಳಿದಂತೆ ಗದಗ, ಕೊಪ್ಪಳದಲ್ಲಿ ಒಣಹವೆ ಇರಲಿದೆ.

ಮಲೆನಾಡು ಹಾಗೂ ದಕ್ಷಿಣ ಒಳನಾಡಲ್ಲಿ ಭರ್ಜರಿ ಮಳೆ

ದಕ್ಷಿಣ ಒಳನಾಡಲ್ಲಿ ಡಿ.1 ಹಾಗೂ 2ರಂದು ವ್ಯಾಪಕ ಮಳೆಯಾಗಲಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಮಳೆ ಅಬ್ಬರ ಇರಲಿದೆ.

ಇದನ್ನೂ ಓದಿ: Jeera Water Benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದು ಎಷ್ಟು ಒಳ್ಳೆಯದು ಗೊತ್ತೇ?

ಹುಕ್ಕೇರಿಯಲ್ಲಿ ಅಧಿಕ ಮಳೆ

ಗುರುವಾರ ರಾಜ್ಯದ ವಿವಿಧೆಡೆ ಮಳೆಯಾಗಿರುವ ವರದಿ ಆಗಿದ್ದು, ಬೆಳಗಾವಿಯ ಹುಕ್ಕೇರಿಯಲ್ಲಿ 7 ಸೆಂ.ಮೀ ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಚಿಕ್ಕೋಡಿಯಲ್ಲಿ 5 ಸೆಂ.ಮೀ, ಸೇಡಬಾಳ, ಬೈಲಹೊಂಗಲ, ಹಿಡಕಲ್ ಅಣೆಕಟ್ಟಲ್ಲಿ 4 ಸೆಂ.ಮೀ, ರಾಯ್‌ಭಾಗ, ಶೃಂಗೇರಿಯಲ್ಲಿ 3, ಗೋಕಾಕ್‌, ಸಂಕೇಶ್ವರ್‌ನಲ್ಲಿ 2 ಸೆಂ.ಮೀ, ರಾಯಲ್‌ಪಡು, ಚಿಕ್ಕಬಳ್ಳಾಪುರ, ಜಯಪುರ, ಕಮ್ಮರ್ಡಿಯಲ್ಲಿ 1 ಸೆಂ,ಮೀ ಮಳೆಯಾಗಿದೆ. ಚಿಕ್ಕನಹಳ್ಳಿಯಲ್ಲಿ ಕನಿಷ್ಠ ಉಷ್ಣಾಂಶ 17.0 ಡಿ.ಸೆ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version