Site icon Vistara News

HD Kumaraswamy: ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ‘ಅಣ್ತಮ್ಮ’ ಇದ್ದಂತೆ ಎಂದ ಎಚ್‌ಡಿಕೆ!

HD Kumaraswamy

Lok Sabha Election 2024: BJP And JDS Workers Are Like Brothers; Says HD Kumaraswamy

ತುಮಕೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೆಲ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು, ನಾಯಕರು ಒಗ್ಗಟ್ಟಾಗಿ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು, ಬಿಜೆಪಿ ಕ್ಷೇತ್ರಗಳಲ್ಲಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಪ್ರಚಾರದ ಮೂಲಕವೇ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಇದರ ಬೆನ್ನಲ್ಲೇ, “ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು (BJP And JDS Workers) ಒಂದೇ ಕುಟುಂಬದ ಅಣ್ಣ-ತಮ್ಮಂದಿರ ರೀತಿ ಕೆಲಸ ಮಾಡುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಪ್ರಚಾರ ಮಾಡುವಾಗ ಕಾರ್ಯಕರ್ತರನ್ನುದ್ದೇಶಿಸಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. “ಎರಡೂ ಪಕ್ಷದ ಕಾರ್ಯಕರ್ತರ ಕೆಲಸವು ನನಗೆ ಖುಷಿ ತಂದಿದೆ. ಸೋಮಣ್ಣ ಅವರ ಗೆಲುವಿಗಾಗಿ ಅಣ್ಣ-ತಮ್ಮಂದಿರ ರೀತಿ ಶ್ರಮ ಹಾಕಿದ್ದೀರಿ. ಅದಕ್ಕಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಲ್ಲ, ರಾಜ್ಯದಲ್ಲಿ ಜೆಡಿಎಸ್‌ ಉಳಿಯಲ್ಲ. ಬಾಗಿಲೇ ಮುಚ್ಚಿಬಿಡುತ್ತಾರೆ ಎಂದು ಕಾಂಗ್ರೆಸ್‌ ನಾಯಕರು ದುರಹಂಕಾರದ ಮಾತುಗಳನ್ನು ಆಡಿದ್ದರು. ಆದರೆ, ಮಾತುಗಳನ್ನು ಕಾರ್ಯಕರ್ತರು ಹುಸಿಗೊಳಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಬಿ.ಎಸ್.ಯಡಿಯೂರಪ್ಪ ಅವರ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದ್ದಾಗ ನಾವು ಇನ್ನೂ 20 ತಿಂಗಳು ಮುಂದುವರಿದಿದ್ದರೆ ಅವತ್ತೇ ಕಾಂಗ್ರೆಸ್‌ ಬಾಗಿಲು ಮುಚ್ಚಬೇಕಿತ್ತು. ಆಗ ಸರ್ಕಾರ ಬೀಳಲು ಅನೇಕ ಕಾರಣಗಳು ಇವೆ. ನಾನು ಸಿಎಂ ಸ್ಥಾನ ಬಿಟ್ಟುಕೊಡದಿದ್ದಕ್ಕೆ ಒಂದು ರೀತಿ ವನವಾಸ ಅನುಭವಿಸಿದ್ದೇನೆ. ಅವತ್ತಿನ ಸರ್ಕಾರದ ಕೆಲಸಗಳ ಬಗ್ಗೆ ಹಲವು ಚರ್ಚೆಗಳಾಗಿವೆ” ಎಂದು ಹೇಳಿದರು.

ಸಂವಿಧಾನ ಕುರಿತು ಪ್ರಸ್ತಾಪ

ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ನಾಯಕರ ಹೇಳಿಕೆ ಕುರಿತು ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಮೋದಿ ಅವರ ಹೇಳಿಕೆ ಪ್ರಸ್ತಾಪಿಸಿದರು. “ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನವನ್ನು ಯಾರ ಕೈಯಲ್ಲೂ ಬದಲು ಮಾಡಲು ಆಗಲ್ಲ ಎಂದು ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಆದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂಬುದಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ” ಎಂದು ಟೀಕಿಸಿದರು.

“ಮೊದಲು ನಿಮಗೆ ಯುವಕರಿಗೆ ಉದ್ಯೋಗ ಕೊಟ್ಟು ಬದುಕಿಸಬೇಕು ಅಂತ ಇದ್ರೆ, ರಾಜ್ಯದಲ್ಲಿ ಎರಡು ಮುಕ್ಕಾಲು‌ ಲಕ್ಷ ಉದ್ಯೋಗ ಖಾಲಿ ಇವೆ. ಅವುಗಳನ್ನು ಮೊದಲು ಭರ್ತಿ ಮಾಡಿ. ಅವತ್ತು ನಾನು ಮಾನಸಿಕವಾಗಿ ಅವರ ಜತೆ ಹೊಂದಾಣಿಕೆಗೆ ಸಿದ್ಧ ಇರಲಿಲ್ಲ. ಆದರೆ‌ ರೈತರ ಸಾಲ ಮನ್ನಾ ಮಾಡೋಕೆ ಅಂತ ಹೋದೆ. ಆದರೆ, ಅದು ನಾವು ಮಾತು ಕೊಟ್ಟಿರಲಿಲ್ಲ, ಕೇವಲ ನಮ್ಮ ಯೋಜನೆ ಮುಂದುವರಿಸಬೇಕು ಎಂದರು” ಎಂಬುದಾಗಿ ತಿಳಿಸಿದರು.

ಇದನ್ನೂ ಓದಿ: ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

Exit mobile version