Site icon Vistara News

Lok Sabha Security Breach: ಪ್ರತಾಪ್‌ ಸಿಂಹ ವಿರುದ್ಧ ದೇಶದ್ರೋಹಿ ಫ್ಲೆಕ್ಸ್;‌ ಸಂಘಟನೆ ಅಧ್ಯಕ್ಷನ ಮೇಲೆ FIR

Anti national flex against Pratap Simha

ಮೈಸೂರು: ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ವೈಫಲ್ಯ (Lok Sabha Security Breach) ಹಾಗೂ ಕಲರ್‌ ಗ್ಯಾಸ್‌ ಸಿಡಿತ (Color gas explosion) ಪ್ರಕರಣಕ್ಕೆ ಸಂಬಂಧಿಸಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರು ಆರೋಪಿಗಳಿಗೆ ಪಾಸ್‌ ಕೊಟ್ಟ ವಿಚಾರವನ್ನು ಹಲವರು ಟೀಕಿಸಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (Karnataka State Backward Classes Awareness Forum) ಮೈಸೂರಿನಲ್ಲಿ ಪ್ರತಿಭಟನೆ ಮಾಡಿ, ಸಂಸದ ಪ್ರತಾಪ್‌ ಸಿಂಹ ವಿರುದ್ಧ ದೇಶದ್ರೋಹಿ ಎಂದು ಫ್ಲೆಕ್ಸ್‌ (Seditious Flex) ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರ ಮೇಲೆ ಈಗ ಪೊಲೀಸ್‌ ಕೇಸ್‌ ದಾಖಲಾಗಿದೆ.

ಸಂಸದ ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಪೋಸ್ಟರ್ ಹಾಕಿದವರ ಮೇಲೆ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಸಂಸದ ಪ್ರತಾಪ್ ಸಿಂಹ ಕೈಗೆ ಬಾಂಬ್ ಕೊಟ್ಟು, ದೇಶದ್ರೋಹಿ ಎಂಬ ಫ್ಲೆಕ್ಸ್ ಅನ್ನು ಅಳವಡಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್ ವಿರುದ್ಧ ದೂರನ್ನು ದಾಖಲು ಮಾಡಲಾಗಿದೆ. ಬಿಜೆಪಿ ಮುಖಂಡ ಬಿ. ಆನಂದ್ ಎಂಬುವವರು ದೂರು ನೀಡಿದ್ದಾರೆ.

ಏನಿದು ಪ್ರಕರಣ?

ಆರೋಪಿಗಳಿಗೆ ಸಂಸದ ಪ್ರತಾಪ್‌ ಸಿಂಹ ಕೊಟ್ಟಿದ್ದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅವರ ವಿರುದ್ಧ ಪ್ರತಿಭಟನೆ ಮುಂದುವರಿದಿತ್ತು. ಸಂಸದ ಪ್ರತಾಪ್ ಸಿಂಹ ದೇಶದ್ರೋಹಿ ಎಂದು ಮೈಸೂರಿನ ಮಹಾರಾಜ ವೃತ್ತದ ಬಳಿ ಫ್ಲೆಕ್ಸ್ ಹಾಕಲಾಗಿತ್ತು.

ಅದರಲ್ಲಿ ಪ್ರತಾಪ್ ಸಿಂಹ ಫೋಟೊಗೆ ಬಾಂಬ್ ಹಾಗೂ ಪಾಸ್ ಹಿಡಿದು ನಿಂತಿರುವ ರೀತಿಯ ಚಿತ್ರಿಸಲಾಗಿತ್ತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಈ ಫ್ಲೆಕ್ಸ್‌ ಅನ್ನು ಹಾಕಿತ್ತು. ಜತೆಗೆ ಸಂಸತ್ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಚಳವಳಿಯನ್ನೂ ನಡೆಸಲಾಗಿದ್ದು, ಫ್ಲೆಕ್ಸ್ ಮೇಲೆ ಸಹಿ ಸಂಗ್ರಹ ಮಾಡುವಂತೆ ಕರೆ‌ ನೀಡಲಾಗಿತ್ತು. ಈಗ ಈ ಸಂಬಂಧ ದೂರು ದಾಖಲಾಗಿದೆ.

We stand with Prathap simha ಅಭಿಯಾನ

ಈಗ ಪ್ರತಾಪ್‌ ಸಿಂಹ ಪರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್ ಆರಂಭವಾಗಿದೆ. We stand with Prathap simha ಹೆಸರಿನಲ್ಲಿ ಕ್ಯಾಂಪೇನ್‌ ನಡೆಸಲಾಗುತ್ತಿದೆ.

ಪ್ರತಾಪ್ ಸಿಂಹ ಅವರಿಗೆ ಕೆಟ್ಟ ಹೆಸರು ತರಲು ಮಾಡಿದ ಕೃತ್ಯ ಇದಾಗಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದ ದೃಷ್ಟಿಯಿಂದ ಸಂಸತ್ ಪ್ರವೇಶಿಸಲು ಅವರು ಅವಕಾಶ ಮಾಡಿ ಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿ‌ಯ ಉದ್ದೇಶವನ್ನು ಇಟ್ಟುಕೊಂಡು ಅವಕಾಶ ನೀಡಿದ್ದಾರೆ. ಆದರೆ, ಇದನ್ನು ದುರುಪಯೋಗ ಮಾಡಿಕೊಂಡು ಹೀನ ಕೃತ್ಯ ಮಾಡಲು ಬಳಸಿಕೊಂಡಿದ್ದು ವಿಷಾದನೀಯ ಎಂದು ನೆಟ್ಟಿಗರು ಸಂಸದ ಪ್ರತಾಪ್‌ ಸಿಂಹ ಅವರ ಪರವಾಗಿ ಬ್ಯಾಟ್‌ ಬೀಸಿದ್ದಾರೆ.

ಸಂಸತ್ತಿನಲ್ಲಿ ಉಂಟಾದ ಈ ಘಟನೆಯನ್ನು ರಾಜಕಾರಣಿಗಳು ಪಕ್ಷಾತೀತವಾಗಿ ಖಂಡಿಸಬೇಕು. ಆದರೆ, ನಮ್ಮ ರಾಜಕಾರಣಿಗಳು ಇದನ್ನು ರಾಜಕೀಯವಾಗಿ ಬಳಿಸಿಕೊಳ್ಳುತ್ತಿರುವುದು ತಪ್ಪು. ಇಷ್ಟು ದೊಡ್ಡ ಭದ್ರತಾ ಲೋಪವಾಗಲು ಕಾರಣವಾಗಿರುವ ಕಾಣದ ಕೈಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ನಾವು ಪ್ರತಾಪ್ ಸಿಂಹ ಪರವಾಗಿದ್ದೇವೆ ಎಂದು ಕ್ಯಾಂಪೇನ್‌ ಮಾಡಲಾಗುತ್ತಿದೆ. ಇದಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗುತ್ತಿವೆ.

ಸಾಗರ್‌ ಶರ್ಮಾಗೆ ಪಾಸ್‌ ಕೊಟ್ಟಿದ್ದೇಕೆ?: ಇಲ್ಲಿದೆ ಪ್ರತಾಪ್‌ಸಿಂಹ ವಿವರಣೆ

ಎಲ್ಲಿಯ ಉತ್ತರ ಪ್ರದೇಶದ ಸಾಗರ್‌ ಶರ್ಮಾ? (Sagar Sharma) ಎಲ್ಲಿಯ ಮೈಸೂರಿನ ಸಂಸದ ಪ್ರತಾಪ್‌ಸಿಂಹ? (MP Pratap simha) ಬುಧವಾರ ನೂತನ ಸಂಸತ್‌ ಭವನದ ಒಳಗೆ ನಡೆಯುತ್ತಿದ್ದ ಲೋಕಸಭಾ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೇಜುಗಳ ಮೂಲಕವೇ (Security breach in Loksabha) ಸ್ಪೀಕರ್‌ ಅವರತ್ತ ಧಾವಿಸಿದ ಸಾಗರ್‌ ಶರ್ಮನಿಗೆ ಪ್ರತಾಪ್‌ ಸಿಂಹ ವಿಸಿಟರ್ಸ್‌ ಪಾಸ್‌ (Visitors Pass) ಕೊಟ್ಟಿದ್ದು ಹೇಗೆ? ಮತ್ತು ಯಾಕೆ ಎಂಬ ಪ್ರಶ್ನೆ ಈಗ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ.

ಅದಕ್ಕೆ ಉತ್ತರವನ್ನು ಸ್ವತಃ ಸಂಸದ ಪ್ರತಾಪ್‌ಸಿಂಹ ಅವರೇ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿಯಾಗಿ ವಿವರಣೆ ನೀಡಿರುವ ಪ್ರತಾಪ್‌ ಸಿಂಹ ಅವರು ತಾನು ಪಾಸ್‌ ನೀಡಿದ್ದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ನಿಜವೆಂದರೆ ಆರಂಭದಲ್ಲಿ ಪ್ರತಾಪ್‌ ಸಿಂಹಗೂ ಇದೇ ಪ್ರಕರಣದಲ್ಲಿ ಸಾಗರ್‌ ಶರ್ಮ ಜತೆ ಗ್ಯಾಲರಿಗೆ ಬಂದು ಸಿಕ್ಕಿಬಿದ್ದ ಮೈಸೂರಿನ ಮನೋರಂಜನ್‌ಗೂ ಪರಿಚಯ ಇರಬಹುದು ಎಂದು ಭಾವಿಸಲಾಗಿತ್ತು. ಅದೇ ಪರಿಚಯದಲ್ಲಿ ಮನೋರಂಜನ್‌, ಸಾಗರ್‌ ಶರ್ಮ ಪಾಸ್‌ ಪಡೆದಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಪ್ರತಾಪ್‌ಸಿಂಹ ಹೇಳುವ ಪ್ರಕಾರ, ಅವರ ಕಚೇರಿಯಿಂದ ಪಾಸ್‌ ಇಶ್ಯೂ ಆಗಿದ್ದು ಸಾಗರ್‌ ಶರ್ಮ ಅವರಿಗೆ. ಅದನ್ನು ತೆಗೆಸಿಕೊಟ್ಟಿದ್ದು ಸ್ವತಃ ಸಾಗರ್‌ ಶರ್ಮನ ತಂದೆ ಶಂಕರ್‌ಲಾಲ್‌ ಶರ್ಮ!

ಪಾಸ್‌ಗಾಗಿ ಹಲವು ಬಾರಿ ಮನವಿ ಮಾಡಿದ್ದರು!

ಇದು ಹೇಗೆಂದರೆ ಸಾಗರ್‌ ಶರ್ಮಾ ಅವರ ತಂದೆ ಶಂಕರ್‌ ಲಾಲ್‌ ಶರ್ಮ ಅವರು ಉತ್ತರ ಪ್ರದೇಶದವರಾದರೂ ಈಗ ಇರುವುದು ಮೈಸೂರಿನಲ್ಲಿ! ಆರೋಪಿ ಸಾಗರ್​ ಶರ್ಮಾ ಅವರ ತಂದೆ ಶಂಕರ್​ ಲಾಲ್​ ಶರ್ಮಾ ನಮ್ಮ ಕ್ಷೇತ್ರ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೊಸ ಸಂಸತ್​ ಭವನವನ್ನು ನೋಡಬೇಕೆಂದು ಅನೇಕ ಬಾರಿ ವಿಸಿಟರ್​ ಪಾಸ್​ಗಾಗಿ ಮನವಿ ಮಾಡಿದ್ದರು. ಸಾಗರ್ ಶರ್ಮಾ ಅವರು ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ತಮ್ಮ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ಪ್ರತಾಪ್‌ ಸಿಂಹ ಅವರು ವಿವರಣೆ ನೀಡಿದ್ದಾರೆ. ವಿಸಿಟರ್‌ ಪಾಸ್‌ ಹೊರತುಪಡಿಸಿ ಬೇರೆ ರೀತಿಯ ಪರಿಚಯವಿಲ್ಲ. ಹೆಚ್ಚುವರಿ ಮಾಹಿತಿಯೂ ಇಲ್ಲ ಎಂದು ಪ್ರತಾಪ್‌ಸಿಂಹ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Security Breach: ಸಂಸತ್‌ ತಪಾಸಣೆ ವೈಫಲ್ಯ; 8 ಸಿಬ್ಬಂದಿ ಸಸ್ಪೆಂಡ್‌

ಸಾಗರ್‌ ಶರ್ಮ ಮತ್ತು ಮನೋರಂಜನ್‌ ಸದನದ ಒಳಗೆ ಗದ್ದಲವೆಬ್ಬಿಸುತ್ತಿದ್ದಂತೆಯೇ ಸಂಸದರು ಮತ್ತು ಗ್ಯಾಲರಿಯಲ್ಲಿದ್ದವರು ಅವರಿಬ್ಬರನ್ನು ಹಿಡಿದುಕೊಂಡರು. ಈ ನಡುವೆ ಬಿಎಸ್‌ಪಿಯ ಉಚ್ಚಾಟಿತ ಸಂಸದ ಡ್ಯಾನಿಷ್‌ ಅಲಿ ಅವರು ಸಾಗರ್‌ ಶರ್ಮಾನ ಬಳಿ ಇರುವ ವಿಸಿಟಿಂಗ್‌ ಪಾಸ್‌ ಪ್ರತಾಪ್‌ಸಿಂಹ ಅವರ ಕಚೇರಿಯಿಂದ ಇಶ್ಯೂ ಆಗಿರುವುದು ಎನ್ನುವುದನ್ನು ಗಮನಕ್ಕೆ ತಂದರು. ಹೀಗಾಗಿ ಪ್ರತಾಪ್‌ ಸಿಂಹ ಅವರ ವಿರುದ್ಧ ಆಕ್ರೋಶ ಕೇಳಿಬಂತು. ಈ ಕೃತ್ಯಕ್ಕೆ ಸಂಸದರೇ ನೇರ ಹೊಣೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಹಲವು ಕಡೆ ಪ್ರತಿಭಟನೆಗಳು ನಡೆದಿವೆ.

Exit mobile version