Site icon Vistara News

Murder Case : ಪ್ರೀತಿಸಿದ ಪತ್ನಿಯನ್ನೇ ಕೊಂದ ಗಂಡ; 45 ದಿನದ ಮಗುವನ್ನು ಹೆಣದ ಜತೆ ಬಿಟ್ಟು ಪರಾರಿ

Sudha and Shivayya

ಹುಬ್ಬಳ್ಳಿ: ವ್ಯಕ್ತಿಯೊಬ್ಬ ತಾನು ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ (Man kills wife) ಕತ್ತುಹಿಸುಕಿ ಕೊಲೆ ಮಾಡಿ (Murder Case) ಪರಾರಿಯಾಗಿದ್ದಾನೆ. ಸಾಲದ್ದಕ್ಕೆ ಕೇವಲ 45 ದಿನದ ತನ್ನ ಮಗುವನ್ನು (45 Days old infant) ಆಕೆಯ ಹೆಣದ ಬಳಿ ಬಿಟ್ಟು ಹೋಗಿದ್ದಾನೆ.

ಹುಬ್ಬಳ್ಳಿಯ (Hubballi News) ನೇಕಾರ ನಗರದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಸುಧಾ ಹಿರೇಮಠ (20) ಕೊಲೆಯಾಗಿರುವ ಮಹಿಳೆ. ಆಕೆಯ ಪತಿ ಶಿವಯ್ಯ ಹಿರೇಮಠ ಎಂಬಾತನೇ ಕೊಲೆ ಮಾಡಿ ಪರಾರಿಯಾಗಿರುವ ಧೂರ್ತ.

ಶಿವಯ್ಯ ಮತ್ತು ಸುಧಾ ಪ್ರೀತಿಸಿ ಮದುವೆಯಾಗಿದ್ದರು. ಶಿವಯ್ಯ ಆಕೆಯನ್ನು ಬೆನ್ನು ಬಿದ್ದು ಮದುವೆ ಮಾಡಿಕೊಂಡಿದ್ದ. ಆದರೆ, ಈ ಮದುವೆಯಲ್ಲಿ ಆಕೆ ನೆಮ್ಮದಿಯನ್ನು ಕಾಣಲೇ ಇಲ್ಲ. ಅದರೆ, ಯಾವತ್ತಾದರೂ ಸರಿ ಹೋಗಬಹುದು ಎಂಬ ನಂಬಿಕೆಯಲ್ಲಿ ಬದುಕಿದ್ದಳು.

ಈ ನಡುವೆ ಅವರ ಸಾಂಸಾರಿಕ ಬದುಕಿನಲ್ಲಿ ಪುಟ್ಟ ಮಗುವೊಂದು ಬಂದಿತ್ತು. ಅದು ಬಂದ ಮೇಲಾದರೂ ಬದುಕು ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಆದರೆ, ಆ ದಿನ ಬರಲೇ ಇಲ್ಲ.

ಕೊಲೆಯಾಗಿ ಬಿದ್ದಿರುವ ಸುಧಾ

ಭಾನುವಾರ ರಾತ್ರಿ ಯಾವುದೋ ವಿಷಯಕ್ಕೆ ಹೆಂಡತಿ ಜತೆ ಜಗಳಕ್ಕಿಳಿದ ಶಿವಯ್ಯ ಆಕೆ ಇನ್ನೂ ಹಸಿ ಹಸಿ ಬಾಣಂತಿ ಎನ್ನುವುದನ್ನೂ ಲೆಕ್ಕಿಸದೆ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ.

ಇಷ್ಟೆಲ್ಲ ದುಷ್ಕೃತ್ಯ ನಡೆಸುವಾಗ ಒಂದುವರೆ ಪುಟ್ಟ ಮಗು ಅಲ್ಲೇ ಇತ್ತು. ಅಪ್ಪ-ಅಮ್ಮನ ನಡುವೆ ಏನು ನಡೆಯುತ್ತಿದೆ ಎಂದು ಗೊತ್ತಾಗದ ಈ ಪುಟಾಣಿಯನ್ನೂ ಅಲ್ಲೇ ಬಿಟ್ಟ ಧೂರ್ತ ಮನೆಯಿಂದ ಹೊರಬಿದ್ದಿದ್ದಾನೆ. ಹೊರಗೆ ಬರುವಾಗ ಬಾಗಿಲನ್ನೂ ಹಾಕಿಕೊಂಡಿದ್ದಾನೆ.

ಸೋಮವಾರ ಮುಂಜಾನೆ ಮನೆಯೊಳಗಿನಿಂದ ಒಂದೇ ಸಮನೆ ಮಗು ಅಳುತ್ತಿರುವ ಸದ್ದು ಕೇಳಿಬಂದಿತ್ತು. ಅಕ್ಕಪಕ್ಕದವರು ಸ್ವಲ್ಪ ಹೊತ್ತು ನೋಡಿದರು. ಬಳಿಕ ಬಾಗಿಲನ್ನು ತೆರೆದು ನೋಡಿದರೆ ಸುಧಾ ಸತ್ತು ಬಿದ್ದಿದ್ದರು. ಮಗು ಆಕೆಯ ಪಕ್ಕದಲ್ಲಿ ಜೋರಾಗಿ ಅಳುತ್ತಾ ಇತ್ತು.

ಕೂಡಲೇ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿ ನೀಡಿದ್ದು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಸ್ಐ ಪತ್ನಿ ಅನುಮಾನಾಸ್ಪದ ಸಾವು ಪ್ರಕರಣ: ಠಾಣೆ ಎದುರು ಪ್ರತಿಭಟನೆ

ಬೊಮ್ಮನಹಳ್ಳಿ (ಬೆಂಗಳೂರು): ಬೇಗೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಮೇಶ್ ಅವರ ಪತ್ನಿ ಶಿಲ್ಪಾ ಇತ್ತೀಚೆಗೆ ಮೃತಪಟ್ಟಿದ್ದು, ಇದೊಂದು ಅನುಮಾನಾಸ್ಪದ ಸಾವೆಂದು ದಾಖಲಾಗಿತ್ತು. ಇದೀಗ ಪಿಎಸ್‌ಐ ರಮೇಶ್‌ ಅವರ ವಿರುದ್ಧ ಅವರ ಶಿಲ್ಪಾ ಮನೆಯವರು ಸಿಡಿದೆದ್ದಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ ಜೂನ್ 4ರಂದು ಪಿಎಸ್ಐ ಪತ್ನಿ ಶಿಲ್ಪಾ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದರು. ಆಕೆ ವಾಸವಾಗಿದ್ದ ಬೇಗೂರು ಬೇಗೂರು ಪಟೇಲ್ ಬಡಾವಣೆಯ ಮನೆಯಲ್ಲಿ ಸಾವು ಸಂಭವಿಸಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡುಬಂದಿತ್ತು. ಪಿಎಸ್ಐ ರಮೇಶ್ ಅವರ ವಿರುದ್ಧ ಕುಟುಂಬಿಕರು ಕೊಲೆ, ಕಿರುಕುಳ ಪ್ರಕರಣ ದಾಖಲು ಮಾಡಿದ್ದರು.

ಸಬ್‌ ಇನ್ಸ್‌ಪೆಕ್ಟರ್‌ ರಮೇಶ್‌ ಮತ್ತು ಪತ್ನಿ ಶಿಲ್ಪಾ

ರಮೇಶ್ ಕೆಲಸ ನಿರ್ವಹಿಸುತ್ತಿದ್ದ ಬೇಗೂರು ಪೋಲೀಸ್ ಠಾಣೆಯಲ್ಲಿಯೇ ದೂರು ದಾಖಲಾಗಿತ್ತು. ಪಿಎಸ್ಐ ರಮೇಶ್ ಕುಟುಂಬದ ಏಳು ಮಂದಿಯ ವಿರುದ್ಧ ಶಿಲ್ಪಾಗೆ ಕಿರುಕುಳ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಬೇಗೂರು ಪೋಲೀಸರು ಪಿಎಸ್ಐ ರಮೇಶ್ ಅವರನ್ನು ಮಾತ್ರ ವಶಕ್ಕೆ ಪಡೆದು, ಇಲಾಖೆ ಅಮಾನತು ಮಾಡಿತ್ತು.

ರಮೇಶ್‌ನ ಕುಟುಂಬದವರು ಆಕೆಯ ಜಾತಿನಿಂದನೆ ಮಾಡಿ ಕಿರುಕುಳ ನೀಡಿದ್ದರು. ಅಪಮಾನ ಮಾಡಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು. ಅವರ ಚಿತ್ರಹಿಂಸೆಯ ಬಗ್ಗೆ ವಿವರ ನೀಡಿದ್ದರೂ ಬಂಧನ ಮಾಡಿಲ್ಲ ಎಂದು ಆಕ್ಷೇಪಿಸಲಾಗಿದೆ. ಘಟನೆ ನಡೆದು ಒಂದು ತಿಂಗಳಾದರೂ ಆರೋಪಿಗಳನ್ನು ಬಂಧಿಸದೆ ಅವರಿಗೆ ಜಾಮೀನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿರುವ ಶಿಲ್ಪಾ ಕುಟುಂಬಿಕರು, ಬೇಗೂರು ಠಾಣೆ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಬೇಗೂರು ಠಾಣೆ ಎದುರು ಶಿಲ್ಪಾ ಸಂಬಂಧಿಕರ ಪ್ರತಿಭಟನೆ

ಅದೇ ಠಾಣೆಯ ಪಿಎಸ್ಐ ಆಗಿರುವುದರಿಂದ ಪ್ರಕರಣ ದಿಕ್ಕು ತಪ್ಪಿಸಲು ಯತ್ನ ನಡೆಯುತ್ತಿದೆ. ಪಿಎಸ್ಐ ರಮೇಶ್ ಹಾಗೂ ಕುಟುಂಬದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಶಿಲ್ಪಾ ಅವರ ಮನೆಯವರು ಆಗ್ರಹಿಸಿದ್ದಾರೆ. ಯುವತಿ ಶಿಲ್ಪಾ ಸಾವಿಗೆ ಪೋಲೀಸ್ ಇಲಾಖೆ ನ್ಯಾಯ ಕೊಡಿಸುತ್ತದೆ ಎನ್ನುವ ನಂಬಿಕೆ ಇಲ್ಲ. ಹೀಗಾಗಿ ಪ್ರಕರಣವನ್ನು ಸಿಐಡಿ ಹಾಗೂ ಸಿಬಿಐಗೆ ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಲಾಗಿದೆ.

ಇದನ್ನೂ ಓದಿ: Murder Case: ಹೋಟೆಲ್‌ ಮಾಲಿಕ ಪತ್ನಿಯಿಂದಲೇ ಕೊಲೆ, ಪತ್ತೆಯಾಗದಿರಲಿ ಎಂದು ಖಾರದ ಪುಡಿ ಬಳಕೆ!

Exit mobile version