Site icon Vistara News

Drowned In Water : ತಂದೆ-ಮಗ ಸೇರಿ ಕರ್ನಾಟಕದಲ್ಲಿ ಒಂದೇ ದಿನ 12 ಮಂದಿ ಜಲ ಸಮಾಧಿ

Drowned in Water

ಮಂಡ್ಯ: ಪ್ರತ್ಯೇಕ ಕಡೆಗಳಲ್ಲಿ ಈಜಲು ಹಾಗೂ ಮೀನು ಹಿಡಿಯಲು ಹೋದ ಒಟ್ಟು 12 ಮಂದಿ ಒಂದೇ ದಿನ ಜಲ ಸಮಾಧಿಯಾಗಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಲು ಹೋದ ತಂದೆ ಮಗ ಸೇರಿ ನಾಲ್ವರು (Drowned In Water) ಮೃತಪಟ್ಟಿದ್ದಾರೆ.

ಮೈಸೂರು ಕನಕಗಿರಿ ಬಡಾವಣೆ ನಿವಾಸಿಗಳಾದ ನಾಗೇಶ್ (40) ಇವರ ಮಗ ಭರತ್ (17) ಹಾಗೂ ಗುರು (32), ಮಹಾದೇವ್ (16) ಮೃತ ದುರ್ದೈವಿಗಳು. ದೇವರ ಕಾರ್ಯಕ್ಕೆಂದು ಮುತ್ತತ್ತಿಗೆ ಬಂದಿದ್ದರು. ಈ ವೇಳೆ ಕಾವೇರಿ ನದಿಗಿಳಿದು ಈಜಲು ಹೋಗಿದ್ದಾರೆ. ಆದರೆ ನೀರಿನ ರಭಸಕ್ಕೆ ನಾಲ್ವರು ಕೊಚ್ಚಿ ಹೋಗಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿ ಅಗ್ನಿಶಾಮಕ ದಳ ಸಿಬ್ಬಂದಿ ನಾಗೇಶ್‌ ಹಾಗೂ ಭರತ್‌ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಗುರು ಹಾಗೂ ಮಹಾದೇವ್ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

ಕೊಚ್ಚಿ ಹೋದ ಜೀವದ ರಂಗು

ಕೆರೆಯಲ್ಲಿ ಈಜಾಡಲು ಹೋಗಿ ಯುವಕನೊಬ್ಬ ನೀರುಪಾಲಾದ ಘಟನೆ ಯಾದಗಿರಿ ತಾಲೂಕಿನ ಅರಕೇರಾ ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವಲಿಂಗಪ್ಪ (18) ಮೃತ ದುರ್ದೈವಿ. ಬೆಳಗ್ಗೆ ಸ್ನೇಹಿತರ ಜತೆ ಬಣ್ಣದೋಕಳಿ ಆಡಿ ನಂತರ ತಮ್ಮನೊಟ್ಟಿಗೆ ಕೆರೆಗೆ ಈಜಾಡಲು ತೆರಳಿದ್ದಾನೆ. ಆದರೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳೀಯರು ಮೃತದೇಹವನ್ನು ಹೊರ ತೆಗೆದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗದಗದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಯುವಕ

ಅದ್ಧೂರಿಯಾಗಿ ಹೋಳಿ ಹಬ್ಬ (Holli Fest) ಆಚರಿಸಿ ನಂತರ ಸ್ನಾನ‌ ಮಾಡಲೆಂದು ನದಿಗೆ ತೆರಳಿದ ಯುವಕ‌ ನೀರಿನಲ್ಲಿ ಮುಳುಗಿ (Drowned In River) ಮೃತಪಟ್ಟಿದ್ದಾನೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬ್ಯಾರೇಜ್‌ನಲ್ಲಿ ಘಟನೆ (Gadaga News) ನಡೆದಿದೆ. ಯುವರಾಜ ವಿಶ್ವನಾಥ ಕೊಂಪಿ (23) ಮೃತ ದುರ್ದೈವಿ. ವಿಜಯನಗರ ಜಿಲ್ಲೆ ಹಿರೇಹಡಗಲಿ‌ ಗ್ರಾಮದ ನಿವಾಸಿಯಾದ ಯುವರಾಜ ಹೋಳಿ ಹಬ್ಬ ಮುಗಿಸಿಕೊಂಡು ಸ್ನೇಹಿತರೊಟ್ಟಿಗೆ ಸ್ನಾನಕ್ಕೆಂದು ನದಿಗೆ ಬಂದಿದ್ದ. ಶಿಂಗಟಾಲೂರು ಏತ ‌ನೀರಾವರಿಯ ಬ್ಯಾರೇಜ್‌ನಲ್ಲಿ ಈಜಲು ತೆರಳಿದಾಗ, ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ.

ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು

ಕಾಲು ಜಾರಿ ಕೃಷಿ ಹೊಂಡಕ್ಕೆ (Drowned in Pond) ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದ ತೋಟದಲ್ಲಿ ಘಟನೆ (Bengaluru Rural) ನಡೆದಿದೆ. ಉಜ್ಜನಿ ಹೊಸಹಳ್ಳಿ ಗ್ರಾಮದ ಸುನೀಲ್ (30) ಮೃತ ದುರ್ದೈವಿ. ಸುನೀಲ್‌ 2 ತಿಂಗಳ ಹಿಂದಷ್ಟೇ ತೋಟದ ಕೆಲಸಕ್ಕೆ ಸೇರಿಕೊಂಡಿದ್ದರು. ತೋಟದಲ್ಲೇ ವಾಸವಿದ್ದ ಸುನೀಲ್‌ ಬಿಹಾರ ಮೂಲದ ಕಾರ್ಮಿಕರ ಜತೆ ಹೋಳಿ ಆಚರಿಸಿದ್ದ. ಹೋಳಿ ಹಬ್ಬ ಆಚರಿಸಿ‌ ಹೊಂಡದಲ್ಲಿ ಕೈ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಿದ್ದ ರಭಸಕ್ಕೆ ಮುಖಕ್ಕೆ ತೀವ್ರವಾಗಿ ಗಾಯವಾಗಿರುವ ಗುರುತು ಇದೆ. ಕಾರ್ಮಿಕರು ಕೃಷಿ ಹೊಂಡದ ಬಳಿ ಬಂದಾಗ ಸುನೀಲ್ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೈಸೂರಿನಲ್ಲಿ ಕಪಿಲಾ ನದಿಯ ಸುಳಿಗೆ ಸಿಲುಕಿ ಮೂವರು ಸಾವು

ರಾಜ್ಯದಲ್ಲಿ ಸೆಕೆ ವಿಪರೀತವಾಗಿದೆ. ಬಿಸಿಲ ತಾಪದಿಂದ (Temperature rising) ತಪ್ಪಿಸಿಕೊಳ್ಳಲು ಜನರು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಕೆಲವರು ನೀರಿನಲ್ಲಿ ಈಜಲೂ ಹೋಗುವುದುಂಟು. ಆದರೆ ಮೈಸೂರಿನಲ್ಲಿ ಬಿಸಿಲ ತಾಪಮಾನವು ಮೂವರ ಜೀವ ತೆಗೆದಿದೆ. ಸೆಕೆ ತಾಳಲಾರದೆ ಮೂವರು ಕೆರೆಯಲ್ಲಿ ಈಜಲು (Drowned in River) ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಹಾರ ಮೂಲದ ಮಿಲನ್ (25), ಮೋಹನ್ (19), ತರುಣ್ (19) ಮೃತ ಕಾರ್ಮಿಕರು. ಈ ಮೂವರು ನೆಸ್ಲೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಹೊರ ಬಂದ ಯುವಕರು ಬೇಸಿಗೆಯ ಸೆಖೆ ತಾಳಲಾರದೆ ಕಪಿಲಾ ನದಿಗೆ ಇಳಿದಿದ್ದಾರೆ. ಆದರೆ ಕಪಿಲಾ ನದಿಗೆ ಇಳಿದವರು ಸುಳಿಗೆ ಸಿಲುಕಿ ಹೊರಬರಲು ಆಗದೆ ಮೃತಪಟ್ಟಿದ್ದಾರೆ. ಮಿಲನ್‌ನ ಶವ ಪತ್ತೆಯಾಗಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಸೀತಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು

ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರುಪಾಲಾದ (Drowned in River) ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ (Seeta river) ನಡೆದಿದೆ. ಹೊಸಾಳ ಗ್ರಾಮದ ಶ್ರೀಶ (21) ಹಾಗೂ ಪ್ರಶಾಂತ್ ಪೂಜಾರಿ (30) ಮೃತಪಟ್ಟವರು. ಮಾ.26ರ ಬೆಳಗ್ಗೆ ಮೀನು ಹಿಡಿಯಲೆಂದು ನಾಗರಮಠದ ಸೀತಾ ನದಿಗೆ ಹೋಗಿದ್ದರು. ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಇದೇ ವೇಳೆ ಅಲ್ಲಿದ್ದ ಸ್ಥಳೀಯರು ಮುಳುಗುತ್ತಿರುವವರ ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version