Site icon Vistara News

Murder Case : ಸ್ನೇಹಿತರ ಜತೆ ಹೋಗಿದ್ದ ಯುವಕನ ಮರ್ಡರ್‌; ಬೆಂ-ಮೈಸೂರು ಹೆದ್ದಾರಿ ದರೋಡೆಕೋರರ ಕೃತ್ಯ?

Ramanagara youngster dead

ಮಂಡ್ಯ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bangalore-Mysore Expressway) ಗೆಳೆಯರ ಜತೆ ಹೋಗುತ್ತಿದ್ದ ರಾಮನಗರದ ಯುವಕನೊಬ್ಬನ ಕೊಲೆಯಾಗಿದೆ (Murder Case). ಜತೆಗಿದ್ದ ಯುವಕರಿಗೂ ತಿಳಿಯದಂತೆ ನಡೆದಿರುವ ಈ ಭೀಕರ ಕೃತ್ಯದ ಹಿಂದೆ ಹೆದ್ದಾರಿ ದರೋಡೆಕೋರರ (Highway dacoits) ಪಾತ್ರವಿದೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳೆದ್ದಿವೆ. ಜತೆಗೆ ಇನ್ನೂ ಹಲವು ಅನುಮಾನಗಳು ಕಾಣಿಸಿಕೊಂಡಿವೆ.

ರಾಮನಗರ ಜಿಲ್ಲೆ ಬೈರಮಂಗಲ ಗ್ರಾಮದ ನಿವಾಸಿ ರಾಮ್ ಕುಮಾರ್ (23) ಮೃತಪಟ್ಟ ಯುವಕ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ರಾಮ್‌ ಕುಮಾರ್‌ ತನ್ನ ಸ್ನೇಹಿತರ ಜತೆ ಬೈಕ್‌ನಲ್ಲಿ ರಾಮನಗರದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದ. ಬಸವರಾಜು ಮತ್ತು ಪ್ರದೀಪ್‌ ಕುಮಾರ್‌ ಎಂಬ ಗೆಳೆಯರು ಜತೆಯಲ್ಲಿದ್ದರು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ರುದ್ರಾಕ್ಷಿಪುರ ಸಮೀಪ ಬಂದಾಗ ಮೂರೂ ಜನ ಮೂತ್ರ ವಿಸರ್ಜನೆಗೆಂದು ಬೈಕ್‌ಗಳನ್ನು ನಿಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರದಲ್ಲಿ ಅವರು ಬೈಕ್‌ಗಳನ್ನು ನಿಲ್ಲಿಸಿದ್ದರು.

ಈ ವೇಳೆ ಹೆದ್ದಾರಿಯಲ್ಲಿ ಬಂದ ಗ್ಯಾಂಗ್‌ ಒಂದು ಮೂವರ ಮೇಲೆಯೂ ದಾಳಿ ನಡೆಸಿದೆ. ಇದು ಹೆದ್ದಾರಿ ದರೋಡೆಕೋರರು ಇರಬಹುದು ಎಂದು ಶಂಕಿಸಲಾಗಿದೆ. ದಾಳಿ ನಡೆದಾಗ ಭಯಗೊಂಡ ಬಸವರಾಜು ಎಂಬಾತ ದುಷ್ಕರ್ಮಿಗಳಿಂದ ರಕ್ಷಣೆಗಾಗಿ ಹೆದ್ದಾರಿ ದಾಟಿ ಪರಾರಿಯಾಗಿದ್ದ. ಇದರಿಂದಾಗಿ ಪ್ರದೀಪ್‌ ಮತ್ತು ರಾಮ್‌ ದುಷ್ಟರ ಕೈಗೆ ಸಿಕ್ಕಿದ್ದರು. ಸ್ವಲ್ಪ ಹೊತ್ತಿನಲ್ಲಿ ಹೆದ್ದಾರಿ ಗಸ್ತು ವಾಹನ ಸ್ಥಳಕ್ಕೆ ಬಂದಿದೆ. ಆದರೆ, ಅಷ್ಟು ಹೊತ್ತಿಗೆ ರಾಮ್‌ ಕುಮಾರ್‌ ಸ್ಥಳದಲ್ಲಿ ಇರಲಿಲ್ಲ. ಕೇವಲ ಪ್ರದೀಪ್‌ ಮಾತ್ರ ಅಲ್ಲಿದ್ದ.

ಪೊಲೀಸರು ಪ್ರದೀಪ್‌ನನ್ನು ವಿಚಾರಿಸಿದಾಗ ಆತ ಹಲ್ಲೆಯ ವಿವರ ನೀಡಿದ. ಪೊಲೀಸರು ರಾಮ್‌ ಕುಮಾರ್‌ ಎಲ್ಲಿ ಎಂದು ಹುಡುಕಾಡಿದರು. ಅವರು ಸಮೀಪದ ರುದ್ರಾಕ್ಷಿ ಕೆರೆ ಪಕ್ಕದಲ್ಲೂ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ, ಯಾವ ಕುರುಹೂ ಸಿಕ್ಕಿರಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ಹೆದ್ದಾರಿ ಮೇಲಿನ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗಿದೆಯಾದರೂ ಹೆಚ್ಚಿನ ವಿವರಗಳು ಸಿಕ್ಕಿಲ್ಲ.

ಇದನ್ನೂ ಓದಿ: Road Accident: ಕ್ಯಾಂಟರ್‌ ತಲೆ ಮೇಲೆ ಹರಿದು ಬೈಕ್‌ ಸವಾರರ ಸಾವು

ಈ ನಡುವೆ ಘಟನೆ ನಡೆದು ಮೂರು ದಿನಗಳಾದ ಮೇಲೆ ರುದ್ರಾಕ್ಷಿ ಕೆರೆಯಲ್ಲಿ ರಾಮ್‌ ಕುಮಾರ್‌ ಶವ ಪತ್ತೆಯಾಗಿದೆ. ಇದು ನಿಗೂಢತೆಯನ್ನು ಸೃಷ್ಟಿಸಿದೆ. ಹಲ್ಲೆ ಮಾಡಿದ ದುಷ್ಕರ್ಮಿಗಳ ತಂಡ ಹೆದ್ದಾರಿಯಲ್ಲಿ ದರೋಡೆ ಮಾಡಲು ಯತ್ನಿಸಿದೆಯೇ ಎಂಬ ಅನುಮಾನ ಕಾಡಿದೆ.

ಅದರ ಜತೆಗೆ ಹೆದ್ದಾರಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಂಡು ಓಡುವ ಭರದಲ್ಲಿ ರಾಮ್‌ ಕುಮಾರ್‌ ಕೆರೆಗೆ ಬಿದ್ದಿದ್ದರೇ ಎಂಬ ಪ್ರಶ್ನೆಯೂ ಕಾಡುತ್ತಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version