Site icon Vistara News

Murder Case : ದೇವಸ್ಥಾನದಿಂದ ಮರಳುತ್ತಿದ್ದಾಗ ಮಗಳ ಎದುರೇ ತಾಯಿಯ ಬರ್ಬರ ಹತ್ಯೆ

Woman murdered in pandavapura Mandya

ಮಂಡ್ಯ: ಮಗಳ ಮುಂದೆಯೇ ತಾಯಿಯನ್ನು ಬರ್ಬರವಾಗಿ (woman killed in front of daughter) ಕೊಲೆ (Murder Case) ಮಾಡಿದ ಭೀಕರ ಘಟನೆ ಮಂಡ್ಯ ಜಿಲ್ಲೆ (Mandya News) ಪಾಂಡವಪುರ ತಾಲ್ಲೂಕಿನ ಎಲೆಕೆರೆ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಮನೆ ಸಮೀಪದ ದೇವಸ್ಥಾನಕ್ಕೆ ಹೋಗಿ ತಾಯಿ-ಮಗಳು ಮರಳುತ್ತಿದ್ದಾಗ ಹಿಂಬಾಲಿಸಿ ಬಂದ ದುಷ್ಕರ್ಮಿಯೊಬ್ಬ ಈ ಕೃತ್ಯವನ್ನು ಎಸಗಿದ್ದಾನೆ.

ಎಲೆಕೆರೆ ಗ್ರಾಮದ ಪಾರ್ವತಮ್ಮ(50) ಕೊಲೆಯಾದ ದುರ್ದೈವಿ. ಪಾರ್ವತಮ್ಮ ಅವರು ಮಗಳು ಅರ್ಪಿತಾ ಜತೆ ಮನೆದೇವರ ಪೂಜೆ ಮುಗಿಸಿಕೊಂಡು ಮನೆಗೆ ವಾಪಾಸ್ ಬರುವಾಗ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬಂದು ಕೊಲೆ ಮಾಡಿದ್ದಾನೆ. ದುಷ್ಕರ್ಮಿ ಸುಮಾರು ಅರ್ಧ ಕಿಲೋಮೀಟರ್ ದೂರದಿಂದಲೇ ಫಾಲೋ ಮಾಡಿಕೊಂಡು ಬಂದು ಕೊಲೆ ಮಾಡಿದ್ದಾಗಿ ಮಗಳು ಅರ್ಪಿತಾ ಹೇಳಿಕೆ ನೀಡಿದ್ದಾರೆ. ಆದರೆ, ಆತ ತಮ್ಮನ್ನು ಕೊಲೆ ಮಾಡಲು ಬರುತ್ತಿದ್ದಾನೆ ಎಂಬುದು ಅವರಿಬ್ಬರಿಗೂ ಗೊತ್ತಿರಲಿಲ್ಲ.

ಈ ಕೊಲೆ ಯಾಕೆ ಮಾಡಲಾಗಿದೆ. ಈ ಮಹಿಳೆಗೂ ಕೊಲೆಗಾರರನಿಗೂ ಏನು ದ್ವೇಷ, ಯಾರನ್ನೋ ಕೊಲೆ ಮಾಡಲು ಹೋಗಿ ಇವರನ್ನು ಬಲಿ ಪಡೆದನಾ ಎಂಬ ಬಗ್ಗೆ ಹಲವು ಪ್ರಶ್ನೆಗಳಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಡ್‌ನಿಂದ ಹೊಡೆದು ಪತ್ನಿಯನ್ನು ಕೊಂದ ಪಾಪಿ ಗಂಡ

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮಂಡ್ಯದ ಮಳವಳ್ಳಿ ತಾಲೂಕಿನ ದೇಶುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಧುಶ್ರೀ (32) ಎಂಬವರನ್ನು ಮಹದೇವ ಎಂಬಾತ ಕೊಂದು ಹಾಕಿದ್ದಾನೆ.

ಗಂಡ-ಹೆಂಡತಿ ನಡುವೆ ಆಗಾಗ ಜಗಳ ಸಾಮಾನ್ಯವಾಗಿತ್ತು. ಆದರೆ, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಮಂಗಳವಾರ ತಡರಾತ್ರಿ ತಾರಕಕ್ಕೇರಿತ್ತು. ಈ ವೇಳೆ ಸಿಟ್ಟಿಗೆದ್ದ ಮಹದೇವ ರಾಡ್‌ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಹೊಡೆತ ತಿಂದ ಹೆಂಡತಿ ಸತ್ತು ಹೋಗಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆಯೇ ಭಯಗೊಂಡ ಮಹದೇವ ಕೂಡಲೇ ಕಿರುಗಾವಲು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harm: ಸಮಾಜ ಸೇವಕ, ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ

ವಿಜಯನಗರ: ವ್ಯಕ್ತಿಯೊಬ್ಬರು ಕೌಟುಂಬಿಕ ಕಲಹದಿಂದ ನೊಂದು ನೇಣಿಗೆ ಶರಣಾದ ಘಟನೆ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ನಡೆದಿದೆ. ಮಳ್ಳೆರು ಅನಿಲ್ ಕುಮಾರ್ ಮೃತರು.

ತೋರಣಗಲ್ಲ ಬಳಿ ಇರುವ ಜಿಂದಾಲ್ ಕಾರ್ಕಾನೆಯಲ್ಲಿ ಕೆಲಸ ಮಾಡುತ್ತಿದ್ದ ಅನಿಲ್‌ ಕುಮಾರ್‌ ಅವರು, ಕೆಲಸ ಮುಗಿಸಿ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾರೆ.

ಅನಿಲ್‌ ಕುಮಾರ್‌ಗೆ ಪತ್ನಿ ಮತ್ತು ಪುತ್ರಿ ಇದ್ದಾಳೆ. ಮನೆಗೆ ಅಧಾರವಾಗಿದ್ದ ಯುವಕ ನೇಣಿಗೆ ಶರಣಾಗಿರುವುದು ಕುಟುಂಬಸ್ಥರಿಗೆ ಆಘಾತವಾಗಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ಗಂಡ ಹೆಂಡತಿ ಮಧ್ಯೆ ಬಹಳ ದಿನಗಳಿಂದ ವಾಗ್ವಾದ ಇತ್ತು ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version