Site icon Vistara News

Road Accident: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕಾರುಗಳ ಡಿಕ್ಕಿ; ಮೂವರ ಸಾವು

Maddur accident

#image_title

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bangalore- Mysore Express way) ಬರುವ ಮದ್ದೂರಿನ ಹೊರವಲಯದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ (Road accident) ಮೂವರ ಸಾವು ಸಂಭವಿಸಿದೆ. ಟಾಟಾ ನೆಕ್ಸಾನ್ ಹಾಗೂ ಸ್ವಿಫ್ಟ್ ಡಿಸೈರ್ ನಡುವೆ ಅಪಘಾತ ನಡೆದಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸಾವಿನ ಹೆದ್ದಾರಿ ಆಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಅಪಘಾತ ಸಂಭವಿಸಿದ್ದು, ಮೃತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಕಾರಿನಲ್ಲಿ ಇನ್ನೂ ಕೆಲವರಿದ್ದು, ಗಾಯಗೊಂಡಿರುವ ಅವರನ್ನು ಮದ್ದೂರಿನ ಆಸ್ಪತ್ರೆಗೆ ದಾಖಲಾಗಿದೆ.

ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಮದ್ದೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಲ್ಲಿ ಒಬ್ಬರು ಉತ್ತರ ಪ್ರದೇಶದ ಅಧಿಕಾರಿ ಎಂದು ತಿಳಿದುಬಂದಿದೆ.

ಗೂಡ್ಸ್‌ ಗಾಡಿ ಚಕ್ರಕ್ಕೆ ಸಿಲುಕಿ ಮಗು ಮೃತ್ಯು

ಮಂಡ್ಯ: ಪೋಷಕರನ್ನು ಹಿಂಬಾಲಿಸಿಕೊಂಡು ಬಂದ 3 ವರ್ಷದ ಮಗುವೊಂದು ಹಾಲಿನ ಗೂಡ್ಸ್‌ ವಾಹನದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ. ಮಂಡ್ಯದ ಮದ್ದೂರು ತಾಲೂಕಿನ ಡಿ. ಹೊಸೂರು ಬಳಿ ಮಂಗಳವಾರ (ಜೂ.20) ಈ ದುರ್ಘಟನೆ ನಡೆದಿದೆ. ಗ್ರಾಮದ ಸರ್ವರ್ಖಾನ್ ಎಂಬುವವರ ಪುತ್ರಿ ರಿಫಾ (3) ಎಂಬಾಕೆ ಮೃತ ದುರ್ದೈವಿ.

ರಿಫಾ ಪೋಷಕರು ಬೆಳಗ್ಗೆ ಹಾಲು ಖರೀದಿಸಲು ಹೊರಗೆ ಬಂದಿದ್ದಾರೆ. ಮೂವರು ವರ್ಷದ ಮಗು ರಿಫಾ ಆಟವಾಡುತ್ತಾ ಪೋಷಕರ ಜತೆಗೆ ಹೆಜ್ಜೆ ಹಾಕಿದೆ. ಹಾಲು ತೆಗೆದುಕೊಂಡು ವಾಪಸ್‌ ಹೋಗಬೇಕು ಎನ್ನುವಾಗ, ಚಾಲಕ ವಾಹನ ಹಿಂದೆ ತೆಗೆಯಲು ಮುಂದಾಗಿದ್ದು, ಪಕ್ಕದಲ್ಲೆ ನಿಂತಿದ್ದ ರಿಫಾ ಮೈಮೇಲೆ ಹರಿದಿದೆ. ಗೂಡ್ಸ್‌ ವಾಹನ ಗುದ್ದಿದ ರಭಸಕ್ಕೆ ಮಗುವಿನ ಮೆದುಳಿನ ಭಾಗವೇ ಹೊರ ಬಂದಿದೆ. ತೀವ್ರ ರಕ್ತಸ್ರಾವವಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾನೈಟ್ ಲಾರಿ ಹರಿದು ವ್ಯಕ್ತಿ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಗ್ರಾನೈಟ್‌ ಸಾಗಿಸುವ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಡ್ಡಗಲ್ ಗ್ರಾಮದ ರಾಘವೇಂದ್ರ (34) ಮೃತ ದುರ್ದೈವಿ.

ಜಮೀನು ಕಡೆ ಹೋಗುತ್ತಿದ್ದ ರಾಘವೇಂದ್ರ ಮೇಲೆ ಹಿಂಬದಿ ಇದ್ದ ಬಂದ ಗ್ರಾನೈಟ್ ಸಾಗಿಸುವ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ರಾಘವೇಂದ್ರರನ್ನು ಕೂಡಲೇ ಬೆಂಗಳೂರಿನ ಕಿಮ್ಸ್‌ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಪೊಲೀಸರು ಗ್ರಾನೈಟ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಿಯಂತ್ರಣ ತಪ್ಪಿದ ಬೈಕ್‌, ಹಳ್ಳಕ್ಕೆ ಬಿದ್ದ ಸವಾರ ಸಾವು

ಮೈಸೂರಿನ ಹುಣಸೂರು ತಾಲೂಕಿನ ಕಾಳಬೂಚನಹಳ್ಳಿ ಬಳಿ ನಿಯಂತ್ರಣ ತಪ್ಪಿ ಬೈಕ್‌ವೊಂದು ಹಳ್ಳಕ್ಕೆ ಬಿದ್ದಿದೆ. ಪರಿಣಾಮ ಬಿ.ಆರ್.ಕಾವಲ್ ನಿವಾಸಿ ಉಮೇಶ್ (26) ಮೃತಪಟ್ಟಿದ್ದಾರೆ. ಜಮೀನಿನ ಶುಂಠಿ ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಬರಲು ಹೇಳಿ ವಾಪಸ್ಸು ಬರುವಾಗ ಈ ಅಪಘಾತ ಸಂಭವಿಸಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಶಿವಮೊಗ್ಗದಲ್ಲಿ ಬೈಕ್ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ

Road accident in Bangalore- mysore Expressway: three dead

Exit mobile version