Site icon Vistara News

Mangalore Blast | ಗಾಯಾಳು ಪ್ರಯಾಣಿಕನ ಬಳಿ ಇದ್ದ ಆಧಾರ್‌ ಕಾರ್ಡ್‌ ನಕಲಿ; ಅಸಲಿ ವ್ಯಕ್ತಿ ತುಮಕೂರಲ್ಲಿ ಪತ್ತೆ

Auto Rickshaw Blast

ತುಮಕೂರು: ಮಂಗಳೂರಿನ ಹೊರ ವಲಯದ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ (Mangalore Blast) ಗಾಯಗೊಂಡಿರುವ ವ್ಯಕ್ತಿ ಬಳಿ ಪತ್ತೆಯಾಗಿದ್ದ ಆಧಾರ್‌ ಕಾರ್ಡ್‌ ನಕಲಿ ಎಂಬ ಸಂಗತಿ ಬಯಲಾಗಿದ್ದು, ಆಧಾರ್‌ ಕಾರ್ಡ್‌ನಲ್ಲಿರುವ ಪ್ರೇಮ್ ರಾಜ್ ಕೊಣಗಿ ಎಂಬ ಹೆಸರಿನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಸ್ಫೋಟಕ್ಕೆ ಲಘು ಐಇಡಿ ಬಾಂಬ್‌ ಅನ್ನು ಬಳಸಲಾಗಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಎನ್‌ಐಎ ತಂಡವು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದೆ. ಅಲ್ಲದೆ, ಮಂಗಳೂರಿನಲ್ಲಿ ಈ ಹಿಂದೆ ನಡೆದಿದ್ದ ಪ್ರಕರಣಗಳ ಅಧ್ಯಯನವೂ ನಡೆಯುತ್ತಿದ್ದು, ಎಲ್ಲ ರೀತಿಯಲ್ಲಿಯೂ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆಟೋದಲ್ಲಿ ಸ್ಫೋಟಗೊಂಡಾಗ ಅದರೊಳಗೆ ಇದ್ದ ಪ್ರಯಾಣಿಕ ಗಾಯಗೊಂಡಿದ್ದ ಎಂದು ಭಾವಿಸಲಾಗಿತ್ತು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಗಾಯಾಳುವಿನ ಬ್ಯಾಗ್‌ನಲ್ಲಿ ಆಧಾರ್‌ ಕಾರ್ಡ್‌ ಪತ್ತೆಯಾಗಿದ್ದು, ಅದರಲ್ಲಿ ಪ್ರೇಮ್ ರಾಜ್ ಕೊಣಗಿ ಎಂಬ ಹೆಸರಿತ್ತು.

Mangalore Blast | ಸ್ಫೋಟ ತನಿಖೆಗೆ ಆಗಮಿಸಿದ ಎನ್‌ಐಎ ತಂಡ; ಉಗ್ರ ಕೃತ್ಯ ಆಯಾಮದಲ್ಲಿ ಪರಿಶೀಲನೆ

ಈ ಹಿನ್ನೆಲೆಯಲ್ಲಿ ಆ ಫೋಟೊ ಹಾಗೂ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಆದರೆ, ಈಗ ಪ್ರೇಮ್ ರಾಜ್ ಕೊಣಗಿ ಎಂಬ ಹೆಸರಿನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆಯಾಗಿದ್ದು, ಈಗ ಗಾಯಾಳು ಬಳಿ ಪತ್ತೆಯಾಗಿರುವ ಆಧಾರ್‌ ಕಾರ್ಡ್‌ ನಕಲು ಎಂಬುದು ತಿಳಿದುಬಂದಿದೆ.

ಸ್ಫೋಟ ತನಿಖೆಗೆ ಆಗಮಿಸಿದ ಎನ್‌ಐಎ ತಂಡ
ಲಘು ಐಇಡಿ ಬಾಂಬ್‌ ಅನ್ನು ಬಳಸಲಾಗಿದೆ ಎಂಬ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ (ನ.೨೦) ಮಂಗಳೂರಿಗೆ ಆಗಮಿಸಿದ್ದು, ಆಟೋ ಸ್ಫೋಟಗೊಂಡ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ನಾಲ್ವರು ಅಧಿಕಾರಿಗಳ ತಂಡವು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದೆ. ಇವರಲ್ಲಿ ಒಬ್ಬರು ಮಹಿಳಾ ಅಧಿಕಾರಿಯೂ ಇದ್ದಾರೆ. ಈಗ ಮಂಗಳೂರು ಪೊಲೀಸರಿಂದ ಘಟನೆ ಹಾಗೂ ಇದುವರೆಗೆ ನಡೆದ ತನಿಖೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಡಿಜಿಪಿ ಪ್ರವೀಣ್‌ ಸೂದ್‌ ಟ್ವೀಟ್‌ ಮಾಡಿದ್ದು, “ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಭಯೋತ್ಪಾದನಾ ಕೃತ್ಯ ಎಂಬುದು ದೃಢಪಟ್ಟಿದೆ. ಇದು ಆಕಸ್ಮಿಕ ಸ್ಫೋಟವಲ್ಲ, ಗಂಭೀರವಾಗಿ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದನಾ ಕೃತ್ಯವಾಗಿದೆ ಎಂಬುದು ತಿಳಿದುಬಂದಿದೆ. ಕೇಂದ್ರ ಏಜೆನ್ಸಿಗಳ ಜತೆಗೂಡಿ ಕರ್ನಾಟಕ ರಾಜ್ಯ ಪೊಲೀಸರು ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | Mangalore Blast | ಮಂಗಳೂರಿನ ಆಟೊ ರಿಕ್ಷಾದಲ್ಲಿ ಲಘು ಐಇಡಿ ಬಾಂಬ್‌ ಸ್ಫೋಟ

ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿಗೆ ಭೇಟಿ ನೀಡಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಫೋಟ ಪ್ರಕರಣವನ್ನು ರಾಜ್ಯ ಗೃಹ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಉಗ್ರ ಕೃತ್ಯದ ಆಯಾಮದಲ್ಲಿಯೇ ತನಿಖೆ ನಡೆಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಈಗಾಗಲೇ ಪೊಲೀಸರು ಹಲವಾರು ರೀತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದು, ನಗರದ ಪ್ರಮುಖ ಬೀದಿಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಬಾಂಬ್‌ ನಿಷ್ಕ್ರಿಯ ದಳ ತಜ್ಞರು ಭೇಟಿ ನೀಡಿದ್ದು, ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.

ಆಟೋ ಚಾಲಕನ ಮಾಹಿತಿ ಸಂಗ್ರಹಕ್ಕೆ ಮುಂದಾದ ಪೊಲೀಸರು
ಆಟೋ ಚಲಾಯಿಸುತ್ತಿದ್ದ ವ್ಯಕ್ತಿ ಯಾರು? ಆತನ ಹಿನ್ನಲೆ ಏನು? ಆತ ಯಾರ ಜತೆಗೆ ಸಂಪರ್ಕ ಹೊಂದಿದ್ದ ಎಂಬುದರ ಬಗ್ಗೆ ಪೊಲೀಸರಿಂದ ಪ್ರಾಥಮಿಕ ತನಿಖೆ ನಡೆದಿದೆ. ಆಟೋ ಚಾಲಕನ ಪೂರ್ವಪರ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ | Mangalore blast | ಮಂಗಳೂರಿನ ಆಟೊ ರಿಕ್ಷಾ ಸ್ಫೋಟ ಭಯೋತ್ಪಾದಕ ಕೃತ್ಯ

ಕೇಂದ್ರ ಭದ್ರತಾ ಪಡೆ ಜತೆ ಜಂಟಿ ತನಿಖೆ
ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇದು ಮೇಲ್ನೋಟಕ್ಕೆ ಭಯೋತ್ಪಾದನಾ ಕೃತ್ಯ ಎಂದು ಕಂಡುಬಂದಿದ್ದು, ಎಲ್ಲ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ನಮ್ಮ ಮಂಗಳೂರು ಪೊಲೀಸರು ಇದರ ಹಿನ್ನೆಲೆಯನ್ನು ಭೇದಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಕರಣದ ಹಿನ್ನೆಲೆ ಬಹಳ ದೊಡ್ಡದಿದೆ. ಭಯೋತ್ಪಾದನಾ ಸಂಘಟನೆಗಳ ಲಿಂಕ್ ಇದರ ಹಿಂದಿದೆ ಎಂಬ ಸೂಚನೆ ಕಂಡು ಬರುತ್ತಿದೆ. ಈ ಸಂಬಂಧ ಕೇಂದ್ರ ಭದ್ರತಾ ಪಡೆ ಜತೆಗೆ ಮಾತುಕತೆ ನಡೆದಿದೆ. ಅವರೂ ಸಹ ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಒಂದೆರಡು ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಕರಾವಳಿ ಭಾಗದಲ್ಲಿ ಈ ರೀತಿಯ ಚಟುವಟಿಕೆ ಹಲವಾರು ವರ್ಷಗಳಿಂದ ನಡೆಯುತ್ತಿವೆ. ಈ ಬಗ್ಗೆಯೂ ತನಿಖೆ ನಡೆದಿದೆ. ಬಹಳ ಬೇಗ ಈ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ | Mangalore blast | ಮಂಗಳೂರಿನ ಆಟೊ ರಿಕ್ಷಾ ಸ್ಫೋಟ ಭಯೋತ್ಪಾದಕ ಕೃತ್ಯ

Exit mobile version