Site icon Vistara News

ಹರಿಹರಪುರ ಮಠದ ಕುಂಭಾಭಿಷೇಕಕ್ಕೆ ಶುಭ ಕೋರಿದ ಮಸೀದಿ ಆಡಳಿತ ಮಂಡಳಿ

ಕುಂಭಾಭಿಷೇಕಕ್ಕೆ

ಚಿಕ್ಕಮಗಳೂರು: ಮಲೆನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಹರಿಹರಪುರದ ಶಾರದಾ ಪೀಠದಲ್ಲಿ ಕುಂಭಾಭಿಷೇಕ ವೈಭವದಿಂದ ನಡೆಯುತ್ತಿದೆ. ಕಳೆದ 12 ವರ್ಷಗಳಿಂದ ನಡೆಯುತ್ತಿದ್ದ ಶ್ರೀ ಮಠದ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ಕುಂಭಾಭಿಷೇಕ ಆಯೋಜಿಸಿದ್ದಾರೆ.

ಕುಂಭಾಭಿಷೇಕ ಅದ್ಧೂರಿಯಾಗಷ್ಟೆ ಇದ್ದರೆ ಸಾಲದು, ಎಲ್ಲ ಸಮುದಾಯದವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬುದು ಸ್ವಾಮೀಜಿಯವರ ಉದ್ದೇಶ. ಈ ಕಾರ್ಯಕ್ಕಾಗಿ ಮಲೆನಾಡಿನ 10 ತಾಲೂಕಿನಲ್ಲಿರುವ ಎಲ್ಲ ಸಮುದಾಯಗಳ ಸುಮಾರು 2 ಲಕ್ಷ ಮನೆಗಳಿಗೆ ಆಹ್ವಾನ ನೀಡಲಾಗಿದೆ. ಮಠದ ಸ್ವಯಂಸೇವಕರು ಈ ಮನೆಗಳಿಗೆ ಖುದ್ದು ತೆರಳಿ ಅಕ್ಷತೆ ನೀಡಿ ಆಹ್ವಾನಿಸಿ ಬಂದಿದ್ದಾರೆ. ಅದರಂತೆಯೇ ಕುಂಭಾಭಿಷೇಕ ನೆರವೇರುತ್ತಿದೆ.

ಸದ್ಯ ಕರ್ನಾಟಕದಲ್ಲಿ ಅನೇಕ ದಿನಗಳಿಂದಲೂ ಹಿಜಾಬ್‌, ಹಲಾಲ್‌, ಜಟಕಾ, ವಕ್ಫ್‌, ಕೇಸರಿ ಶಾಲು ವಿವಾದಗಳೇ ಕಿವಿಗೆ ಬೀಳುತ್ತಿವೆ. ಇದೆಲ್ಲದರ ನಡುವೆ, ಹರಿಹರ ಪುರ ಮಠದ ಕರೆಗೆ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಿಂದ ಸ್ವಾಗತ ಸಿಕ್ಕಿದೆ. ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿಯವರು ಮಸೀದಿ ಆವರಣದಲ್ಲಿ ದೊಡ್ಡ ಫ್ಲೆಕ್ಸ್‌ ಅಳವಡಿಸಿದ್ದಾರೆ.

“ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಮ್‌, ಶ್ರೀಮಠ, ಹರಿಹರಪುರ. ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವ. ಶುಭ ಕೋರುವವರು: ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಜಮಾತ್‌ ಬಾಂಧವರು, ಜಯಪುರ” ಎಂದು ಫ್ಲೆಕ್ಸ್‌ನಲ್ಲಿ ಬರೆಯಲಾಗಿದೆ.

https://vistaranews.com/wp-content/uploads/2022/04/harihara-pur-mutt-masjid.mp4

ಹೆಚ್ಚಿನ ಓದಿಗಾಗಿ: ಇದು ಹಿಜಾಬ್‌-ಕೇಸರಿ ಶಾಲು ವಿವಾದ ಅಲ್ಲ: ಸಮವಸ್ತ್ರದಿಂದ ಬಾಲಕ ಪತ್ತೆಯಾದ ಕತೆ !

Exit mobile version