Site icon Vistara News

ಸಾವಿನಲ್ಲೂ ಒಂದಾದ ತಾಯಿ-ಮಗ: ಪುತ್ರನ ಶಿವಗಣಾರಾಧನೆ ವೇಳೆ ಅಮ್ಮನಿಗೆ ಹೃದಯಾಘಾತ

mother and son death

ಕುಷ್ಟಗಿ: ತಾಯಿ ಮತ್ತು ಮಗ ಒಂಬತ್ತು ದಿನದ ಅಂತರದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮಗನ ಶಿವಗಣಾರಾಧನೆ ದಿನವೇ ಅಮ್ಮ ತಾನೂ ಹೊರಟುಹೋಗಿದ್ದಾಳೆ. ಇಂಥಹುದೊಂದು ಮನ ಕಲಕುವ ಘಟನೆ ನಡೆದಿರುವುದು ಕುಷ್ಟಗಿ ಪಟ್ಟಣದ ಅಂಬೇಡ್ಕರ್‌ ನಗರದಲ್ಲಿ.

ಕುಷ್ಟಗಿ ಪಟ್ಟಣದ 14ನೇ ವಾರ್ಡ್‌ ಆಗಿರುವ ಅಂಬೇಡ್ಕರ್‌ ನಗರದ ನಿವಾಸಿ ರವಿಕುಮಾರ ದುರಗಪ್ಪ ಕೆಂಗಾರಿ ಅವರು ಕಳೆದ ಆಗಸ್ಟ್‌ ೯ರಂದು ಅಕಾಲಿಕವಾಗಿ ನಿಧನರಾಗಿದ್ದರು. ಅವರು ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದರು. ಸಾಧಾರಣ ೩೦ರ ಆಸುಪಾಸಿನಲ್ಲಿದ್ದ ರವಿಕುಮಾರ ಅವರ ಸಾವು ಊರಿನವರ ಮನಸ್ಸನ್ನು ಕಲಕಿತ್ತು. ಅಮ್ಮ ಮಾಬವ್ವ ತನಗಿಂತ ಮೊದಲು ಮರಣಿಸಿದ ಮಗನ ನೆನಪಲ್ಲೇ ಕಣ್ಣೀರು ಹಾಕುತ್ತಿದ್ದರು.

ಬುಧವಾರ ರವಿಕುಮಾರ್‌ ಅವರ ಸಾವಿಗೆ ಸಂಬಂಧಿಸಿದ ಅಪರ ಕ್ರಿಯೆ ಭಾಗವಾಗಿ ಶಿವಗಣಾರಾಧನೆ ಆಯೋಜನೆಗೊಂಡಿತ್ತು. ಮನೆಯಲ್ಲೇ ನಡೆದ ಕಾರ್ಯಕ್ರಮಕ್ಕೆ ಬಂಧುಮಿತ್ರರನ್ನು ಆಹ್ವಾನಿಸಲಾಗಿತ್ತು. ಅವರೆಲ್ಲರೂ ಬಂದು ಸೇರಿದ್ದರು. ರವಿಕುಮಾರ್‌ ಅವರ ಹೆಸರಿನಲ್ಲಿ ಪೂಜೆಯ ಸಿದ್ಧತೆ ಅಂತಿಮ ಹಂತದಲ್ಲಿತ್ತು.

ಅಷ್ಟೂ ಹೊತ್ತು ಮೂಲೆಯಲ್ಲಿ ಕೂತು ಕಣ್ಣೀರು ಹಾಕುತ್ತಿದ್ದ ಮಾಬವ್ವನನ್ನು ಎಲ್ಲರೂ ಸಂತೈಸುತ್ತಿದ್ದರು. ಹಾಗೆ ಸುಮ್ಮನೆ ಕುಳಿತಿದ್ದ ಮಾಬವ್ವ ಒಮ್ಮೆಗೇ ಎದೆ ನೋವೆಂದು ಎದೆ ಹಿಡಿದುಕೊಂಡು ಕುಸಿದುಬಿದ್ದರು. ಪರೀಕ್ಷಿಸಿ ನೋಡಿದಾಗ ಪ್ರಾಣಪಕ್ಷಿ ಹಾರಿಹೋಗಿತ್ತು. ಒಂಬತ್ತೇ ದಿನದಲ್ಲಿ ತಾಯಿ ಮತ್ತು ಮಗನ ಈ ಮರಣಕ್ಕೆ ಊರಿನವರು ಕಣ್ಣೀರು ಹಾಕಿದರು. ಹೊಲದಲ್ಲಿ ಕೆಲಸ ಮಾಡುತ್ತಾ ಕಷ್ಟದ ಜೀವನ ನಡೆಸುತ್ತಿದ್ದ ತಾಯಿ-ಮಗನ ಸಾವು ಅವರನ್ನು ಕಂಗೆಡಿಸಿದೆ.
ಇದನ್ನೂ ಓದಿ| ಶಿಗ್ಗಾಂವಿ: ಮನೆ ಗೋಡೆ ಕುಸಿದು ಯುವಕ ಮೃತ್ಯು, ಬಾಣಂತಿ ಪತ್ನಿ, ಪುಟ್ಟ ಮಗು ಬಚಾವ್‌

Exit mobile version