Site icon Vistara News

ಮಗನನ್ನು ಕೊಂದು ತಾಯಿ ಆತ್ಮಹತ್ಯೆ: ತಮ್ಮನ ಹೆಂಡತಿ ಕಡೆಯವರ ಕಿರುಕುಳ ಕಾರಣ ಅಂತ ವಿಡಿಯೊದಲ್ಲಿ ಮೆಸೇಜ್

suicide lakshamma maga

ಬ‌ೆಂಗಳೂರು: ರಾಜಧಾನಿಯ ಬ್ಯಾಟರಾಯನ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಸ ಗುಡ್ಡದ ಹಳ್ಳಿಯಲ್ಲಿ ತಾಯಿಯೊಬ್ಬಳು ತನ್ನ ಮಗನನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೪೮ ವರ್ಷದ ಲಕ್ಷ್ಮಮ್ಮ ಎಂಬವರೇ ತನ್ನ ೧೩ ವರ್ಷದ ಮಗ ಮದನ್‌ ಜತೆಗೆ ಪ್ರಾಣ ಕಳೆದುಕೊಂಡವರು. ಲಕ್ಷ್ಮಮ್ಮ ಅವರು ಇತ್ತೀಚೆಗೆ ತನ್ನ ತಮ್ಮನಿಗೆ ಮದುವೆ ಮಾಡಿಸಿದ್ದು, ತಮ್ಮನ ಹೆಂಡತಿ ಕಡೆಯವರ ಕಿರುಕುಳದಿಂದ ನೊಂದು ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ವಿಡಿಯೊ ಸಂದೇಶದಲ್ಲಿ ಲಕ್ಷ್ಮಮ್ಮ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ತಮ್ಮನ ಮದುವೆ ಮತ್ತು ಕಿರುಕುಳ
ಲಕ್ಷ್ಮಮ್ಮ ಅವರು ಆತ್ಮಹತ್ಯೆ ಮುನ್ನ ವಿಡಿಯೊ ಮತ್ತು ಆಡಿಯೊ ಮಾಡಿಟ್ಟಿದ್ದಾರೆ. ಇದರಲ್ಲಿ ತಾವು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವಿವರಿಸಿದ್ದಾರೆ. ಅದರ ಪ್ರಕಾರ ತಮ್ಮನಿಗೆ ಮಾಡಿಸಿದ ಮದುವೆಯೇ ಅವರಿಗೆ ಮುಳುವಾಗಿದೆ. ಲಕ್ಷ್ಮಮ್ಮ ಅವರು ತಮ್ಮ ಸಹೋದರ ಸಿದ್ದೇಗೌಡ ಅವರಿಗೆ ರಂಜಿತ ಎಂಬ ಯುವತಿ ಜತೆ ಮದುವೆ ಮಾಡಿಸಿದ್ದರು. ಆದರೆ ಸಿದ್ದೇಗೌಡ ಮತ್ತು ರಂಜಿತಾ ದಂಪತಿಯ ನಡುವೆ ಗಲಾಟೆ ನಡೆಯುತ್ತಿತ್ತು.

ಮೊದಲು ಮನೆಯೊಳಗೆ ನಡೆಯುತ್ತಿದ್ದ ಗಲಾಟೆ ಬಳಿಕ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿತ್ತು. ರಂಜಿತಾ ಅವರು ಕೆರಗೂಡು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಗಂಡ ಸಿದ್ದೇಗೌಡ, ಲಕ್ಷ್ಮಮ್ಮ, ಅವರ ಪತಿ ಶಿವಲಿಂಗೇಗೌಡ ಸೇರಿದಂತೆ ಒಬ್ಬತ್ತು ಜನರ ಮೇಲೆ ಕೇಸ್ ದಾಖಲಾಗಿತ್ತು. ಬಳಿಕ ಪೊಲೀಸರು, ಕೋರ್ಟ್ ಅಂತಾ ಕಿರುಕುಳವೇ ನಡೆಯುತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಕ್ಷ್ಮಮ್ಮ ಹೇಳಿದ್ದಾರೆ.

ವಿಡಿಯೊದಲ್ಲಿ ಹೇಳಿದ್ದೇನು?
ನನ್ನ ತಮ್ಮ ಸಿದ್ದೇಗೌಡ ಸ್ವಲ್ಪ ಪೆದ್ದ. ಹೀಗಾಗಿ ಹುಷಾರಾಗಿರುವ ರಂಜಿತಾಳ ಜತೆ ಮದುವೆ ಮಾಡಿದ್ವಿ. ಮದುವೆ ಸಂದರ್ಭದಲ್ಲಿ 50 ಸಾವಿರ ರೂ ಮತ್ತು ಒಂದು ಚೈನು ಮಾತ್ತ ಪಡೆದುಕೊಂಡಿದ್ದು. ಆದರೆ, ಸ್ವಲ್ಪ ದಿನದಲ್ಲಿ ಜಗಳ ಶುರುವಾಗಿದೆ. ಈಗ ನಾನು ನನ್ನ ತಮ್ಮನಿಗೋಸ್ಕರ ಸಾಯುತ್ತಿದ್ದೇನೆ. ನನ್ನ ಸಾವಿಗೆ ಸವಿತಾ, ಶಿವಣ್ಣ, ಲಕ್ಷ್ಮಿ, ಪುಟ್ಟ, ಸಿದ್ದರಾಜ, ಶಿವಲಿಂಗಿ, ಶಂಕರ, ಸಿದ್ದರಾಮ ಅವರೇ ಕಾರಣ ಎಂದು ವಿಡಿಯೊದಲ್ಲಿ ಲಕ್ಷ್ಮಮ್ಮ ಹೇಳಿದ್ದಾರೆ. ರಂಜಿತಾಳನ್ನು ತಮ್ಮನಿಗೆ ತಂದು ತಪ್ಪು ಮಾಡಿದೆ ಎಂದು ಡೆತ್‌ ವಿಡಿಯೊದಲ್ಲಿ ಹೇಳಿರುವ ಲಕ್ಷ್ಮಮ್ಮ ಅವರು ʻʻನನ್ನ ಗಂಡ, ನನ್ನ ತಮ್ಮ, ನನ್ನ ಮಗ ನನ್ನನ್ನು ಮಣ್ಣು ಮಾಡ್ಬೇಕುʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಹೆಸರಾಂತ ಸಾವಯವ ಕೃಷಿಕ, ಬಿಜೆಪಿ ಗ್ರಾಪಂ ಸದಸ್ಯ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Exit mobile version