Site icon Vistara News

Murder Case : ಯುವ ಬ್ರಿಗೇಡ್‌ ಸದಸ್ಯನ ಹತ್ಯೆ ಹಿಂದೆ ಕಾಂಗ್ರೆಸ್‌ ನಾಯಕರು; ಸಿಕ್ಕಿತು ಪ್ರಬಲ ಸಾಕ್ಷ್ಯ

yuva Brigade activist murder case

ಮೈಸೂರು: ಜಿಲ್ಲೆಯ ತಿ. ನರಸೀಪುರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತ (Yuva Brigade activist) ವೇಣುಗೋಪಾಲ ನಾಯಕ (Venugopala Nayaka) ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ (Murder Case) ಹಂತಕರಿಗೆ ಕಾಂಗ್ರೆ ನಂಟಿದೆ ಎಂಬ ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarty sulibele) ಅವರ ಆರೋಪಕ್ಕೆ ಸಾಕ್ಷ್ಯ ಸಿಕ್ಕಿದೆ. ಈ ಕೊಲೆಯಲ್ಲಿ ನಂಬರ್‌ 1 ಮತ್ತು ನಂಬರ್‌ 2 ಆರೋಪಿಗಳಾಗಿರುವ ವ್ಯಕ್ತಿಗಳು ಕಾಂಗ್ರೆಸ್‌ ಜತೆಗೆ (Congress Connection) ನೇರ ಸಂಪರ್ಕದಲ್ಲಿರುವುದು ಬಯಲಾಗಿದೆ.

ಹನುಮ ಜಯಂತಿ (Hanuma Jayanti) ಆಚರಣೆಯಲ್ಲಿ ಮುಂಚೂಣಿಯಲ್ಲಿದ್ದ ವೇಣುಗೋಪಾಲ ನಾಯಕ ಅವರನ್ನು ಭಾನುವಾರ ರಾತ್ರಿ ಬಾಟಲಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಸಣ್ಣ ಕ್ಷುಲ್ಲಕ ವಿವಾದವೊಂದನ್ನು ಮುಂದಿಟ್ಟುಕೊಂಡು ಜಗಳ ಮಾಡಿದ್ದ ಹಂತಕರು ಸಂಧಾನಕ್ಕೆಂದು ಕರೆದು ಮಾತನಾಡುತ್ತಲೇ ಬಾಟಲಿಯಿಂದ ಇರಿದು ಕೊಲೆ ಮಾಡಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಕೊಲೆಗೆ ಸಂಬಂಧಿಸಿ ಎರಡು ತಂಡಗಳನ್ನು ರಚಿಸಿ ಹಂತಕರ ಬೆನ್ನು ಬಿದ್ದಿದ್ದರು. ಪ್ರಕರಣದ A1 ಮತ್ತು A2 ಆರೋಪಿಗಳೆಂದು ಗುರುತಿಸಲಾದ ಮಣಿಕಂಠ ಅಲಿಯಾಸ್ ಕೊಳೆ ಮಣಿ, ಸಂದೇಶನನ್ನು ಸೋಮವಾರವೇ ಬಂಧಿಸಲಾಗಿತ್ತು. ಮಂಗಳವಾರ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. A3 ಅನಿಲ್, A4 ಶಂಕರ್ ಅಲಿಯಾಸ್ ತುಪ್ಪ, A5 ಮಂಜು ಹಾಗೂ A6 ಹ್ಯಾರಿಸ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಮೊದಲ ಆರೋಪಿ ಮಣಿಕಂಠ

ಪ್ರಕರಣದಲ್ಲಿ ಮೊದಲ ಆರೋಪಿ ಎಂದು ಗುರುತಿಸಲಾಗಿರುವ ಮಣಿಕಂಠ ಅಲಿಯಾಸ್‌ ಕೊಳೆ ಮಣಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯಾಗಿದ್ದಾನೆ. ಮಣಿಕಂಠ ತಿ‌‌.ನರಸೀಪುರ ಪುರಸಭೆ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ.

ಎರಡನೇ ಆರೋಪಿ ಸಂದೇಶ ಕಾಂಗ್ರೆಸ್ ಮುಖಂಡ ಸ್ವಾಮಿಗೌಡ ಅವರ ಪುತ್ರ. ಸ್ವಾಮಿಗೌಡ ಒಕ್ಕಲಿಗ ಸಮುದಾಯದ ನಾಯಕರಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೆಂಬಲಿಗನಾಗಿದ್ದಾನೆ. A4 ಆರೋಪಿ ಶಂಕರ್ @ ತುಪ್ಪ ಬಿಜೆಪಿ ಪಾಲಿಕೆ ಸದಸ್ಯೆ ತಮ್ಮನಾಗಿದ್ದಾನೆ.

ಈ ಕೊಲೆಯ ಹಿಂದೆ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ನ ಸಹಚರರಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದರು.

ತಿ.ನರಸೀಪುರಕ್ಕೆ ಆಗಮಿಸಿದ ಬಿಜೆಪಿ ನಿಯೋಗ

ಈ ನಡುವೆ, ವೇಣುಗೋಪಾಲ ನಾಯಕ ಅವರ ಕೊಲೆಗೆ ಸತ್ಯಶೋಧನೆಗಾಗಿ ಬಿಜೆಪಿ ನೇಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದ ತಂಡ ತಿ. ನರಸೀಪುರಕ್ಕೆ ಆಗಮಿಸಿದ್ದಾರೆ.

ತಿ.ನರಸೀಪುರ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ ನಾಯಕರು ವೇಣುಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲಿದೆ.
ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸುವ ಅವರು, ಬಳಿಕ ವೇಣುಗೋಪಾಲ್ ಮನೆಗೆ ತೆರಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅಶ್ವಥ್ ನಾರಾಯಣ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: Murder Case : ಯುವ ಬ್ರಿಗೇಡ್‌ ಕಾರ್ಯಕರ್ತನ ಕೊಲೆ ಹಿಂದೆ ಸಚಿವ ಮಹದೇವಪ್ಪ ಪುತ್ರ; ಸೂಲಿಬೆಲೆ ಆರೋಪ

Exit mobile version