ಮೈಸೂರು: ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಯುವತಿಯೊಬ್ಬಳ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನೇ ಕೊಲೆ (Murder Case) ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಅಪೂರ್ವ ಶೆಟ್ಟಿ (21) ಕೊಲೆಗೀಡಾದ ಯುವತಿ. ಪ್ರಿಯಕರ ಆಶಿಕ್ (28) ಎಂಬಾತನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ವಿಜಯನಗರದ ಪಿಜಿಯೊಂದರಲ್ಲಿ ಅಪೂರ್ವ ಶೆಟ್ಟಿ ವಾಸವಿದ್ದಳು. ಅಪೂರ್ವ ಮತ್ತು ಆಶಿಕ್ ಪರಸ್ಪರ ಪ್ರೀತಿಸುತ್ತಿದ್ದರು.
ಇವರಿಬ್ಬರ ಸುತ್ತಾಟ, ಪ್ರೀತಿ ಮುಂದುವರಿದಿತ್ತು ಎನ್ನಲಾಗಿದೆ. ಅಲ್ಲದೆ, ಇವರು ಎರಡು ದಿನಗಳ ಕಾಲ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ತಾಳ್ಮೆ ಕಳೆದುಕೊಂಡ ಆಶಿಕ್ ಅಪೂರ್ವಳ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಗಾಬರಿಯಾದ ಆಶಿಕ್ ಹೋಟೆಲ್ನಿಂದ ಕಾಲ್ಕಿತ್ತಿದ್ದಾನೆ. ಇದೇ ವೇಳೆ ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದು ಕೊಠಡಿಗೆ ಹೋಗಿ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೂಡಲೇ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಿದ್ದು, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಆಶಿಕ್ನನ್ನು ಪತ್ತೆ ಹಚ್ಚಿದ್ದಾರೆ.
ಆತ್ಮಹತ್ಯೆಗೆ ವಿಫಲ ಯತ್ನ ಮಾಡಿದ್ದ ಆಶಿಕ್
ಮೈಸೂರಿನಿಂದ ನಾಪತ್ತೆಯಾಗಿದ್ದ ಆಶಿಕ್ ಅಲ್ಲಿಂದ ಸೀದಾ ಪಿರಿಯಾಪಟ್ಟಣದ ಕಂಪ್ಲಾಪುರಕ್ಕೆ ಹೋಗಿದ್ದಾನೆ. ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಹೇಳಲಾಗಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Gruesome Murders | ಪೂಜೆಗೆ ಅಡ್ಡಿ ಮಾಡಿದ್ದಕ್ಕೆ ಹೆಂಡತಿ, ತಾಯಿ, ಮೂವರು ಮಕ್ಕಳ ಕತ್ತು ಸೀಳಿ ಕೊಂದ!