Site icon Vistara News

Murder | ಜಮೀನಿನಲ್ಲಿ ಯುವಕನ ಬರ್ಬರ ಹತ್ಯೆ, ಆಸ್ತಿ ವಿಚಾರದಲ್ಲಿ ದಾಯಾದಿಗಳಿಂದಲೇ ದುಷ್ಕೃತ್ಯ ಶಂಕೆ

santhosh kale

ವಿಜಯಪುರ: ವಿಜಯಪುರದ ಇಟ್ಟಂಗಿಹಾಳದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ (murder) ಮಾಡಲಾಗಿದೆ. ಆಸ್ತಿಯ ವಿಚಾರಕ್ಕೆ ಸಂಬಂಧಿಕರ ಮಧ್ಯೆ ಕಲಹ ನಡೆದು ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸಂತೋಷ ಕಾಳೆ ಮೃತಪಟ್ಟಿರುವ ದುರ್ದೈವಿ. ಬುಧವಾರ ಸಂತೋಷ್‌ ಕಾಳೆಯನ್ನು ಜಮೀನಿನಲ್ಲಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆಸ್ತಿಗೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ವೈಮನಸ್ಸಿದ್ದು, ಇದೇ ಕಾರಣಕ್ಕಾಗಿ ಕೊಲೆ ನಡೆದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸಂತೋಷ ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ ಈ ಕೊಲೆ ನಡೆದಿದೆ. ದಾಯಾದಿಗಳಾಗಿರುವ ಇಬ್ಬರು ಯುವಕರು ಸಂತೋಷನೊಂದಿಗೆ ಜಗಳ ತೆಗೆದು ಈ ಕೊಲೆ ಮಾಡಿರುವ ಶಂಕೆ ಇದೆ. ದಾಯಾದಿಗಳಲ್ಲಿ ಇಬ್ಬರು ತಲೆಮರೆಸಿಕೊಂಡಿರುವುದು ಸಂಶಯಕ್ಕೆ ಪುಷ್ಟಿ ನೀಡಿದೆ. ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಸಂತೋಷ್‌ ಕೊಲೆಯಾಗಿರುವ ವಿಷಯ ತಿಳಿದು ಕುಟುಂಬಿಕರು, ಹೆಣ್ಣು ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಜಮೀನಿಗೆ ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ Murder Case | ಹೆಂಡತಿಯನ್ನು ಚುಡಾಯಿಸಿದ ಎಂದು ಪ್ರಶ್ನೆ ಮಾಡಿದವನನ್ನೇ ಕೊಂದ ಭೂಪ

Exit mobile version