Site icon Vistara News

Murder Attempt : ಪರಸ್ತ್ರೀಯನ್ನು ಕರೆ ತಂದ ಮಗ; ಪ್ರಶ್ನಿಸಿದ ತಂದೆಗೇ ಚೂರಿ ಹಾಕಿದ!

Murder attempt

ಮೈಸೂರು: ಜಗತ್ತಿನಲ್ಲಿ ಎಂಥೆಂಥ ಘಟನೆಗಳು ನಡೆಯುತ್ತವೋ ದೇವರೇ ಬಲ್ಲ. ಮಂಗಳವಾರವಷ್ಟೇ ಮಂಗಳೂರಿನಲ್ಲಿ ಧೂರ್ತನೊಬ್ಬ ತಾಯಿಯ ಮೇಲೆಯೇ ಅತ್ಯಾಚಾರ ಮಾಡಲು ಹೋಗಿ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೊಂದೇ ಬಿಟ್ಟಿದ್ದಾನೆ. ಇದೀಗ ಮೈಸೂರಿನಲ್ಲಿ ಕಡುಪಾಪಿಯೊಬ್ಬ ತನ್ನ ತಂದೆಗೇ ಚೂರಿ (Man attacks his own father) ಹಾಕಿದ್ದಾನೆ. ತಾನು ಪರಸ್ತ್ರೀಯೊಬ್ಬಳನ್ನು ಮನೆಗೆ ಕರೆತಂದಿದ್ದನ್ನು ಅಪ್ಪ ಆಕ್ಷೇಪಿಸಿದ್ದೇ ಈ ಕೊಲೆ ಯತ್ನಕ್ಕೆ (Murder Attempt) ಕಾರಣ!

ಮೈಸೂರು ಜಿಲ್ಲೆ (Mysore News) ಸರಗೂರು ತಾಲೂಕಿನ ಕಟ್ಟೆಹುಣಸೂರು‌ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ರಂಗಸ್ವಾಮಿ (50) ಎಂಬ ಧೂರ್ತನೇ ತನ್ನ ತಂದೆ ರಂಗಯ್ಯ (83) ಎಂಬವರಿಗೆ ಚಾಕುವಿನಿಂದ ಇರಿದವನು.. ರಂಗಸ್ವಾಮಿಯ ಪರಸ್ತ್ರೀ ವ್ಯಾಮೋಹದಿಂದಾಗಿ ಈ ಘಟನೆ ನಡೆದಿದೆ.

ರಂಗಯ್ಯ ಮತ್ತು ರಂಗಸ್ವಾಮಿ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ರಂಗಸ್ವಾಮಿಗೆ ಮದುವೆಯಾಗಿ ಪತ್ನಿ ಮತ್ತು 27 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದರೆ, ರಂಗಸ್ವಾಮಿ ಚಪಲ ಚೆನ್ನಿಗರಾಯ. ತನ್ನ ಕಾಮದಾಹಕ್ಕಾಗಿ ಆತ ಪತ್ನಿ ಇರುವಂತೆಯೇ ಇನ್ನೊಬ್ಬ ಮಹಿಳೆಯನ್ನು ಮನೆಗೆ ಕರೆ ತಂದಿದ್ದ.

ಅವನು ಈ ರೀತಿ ಮಹಿಳೆಯನ್ನು ಮನೆಗೆ ಕರೆದುಕೊಂಡು ಬಂದಿದ್ದನ್ನು ತಂದೆ ರಂಗಯ್ಯ ಅವರು ಪ್ರಶ್ನಿಸಿದ್ದಾರೆ. ಆಗ ಸಿಟ್ಟುಗೊಂಡ ರಂಗಸ್ವಾಮಿ ತಂದೆ ಮತ್ತು ತಾಯಿಯ ಮೇಳೆ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಹೆದರಿದ ರಂಗಯ್ಯ ಅವರು ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಂಡರು.

ಸ್ವಲ್ಪ ಸಮಯ ಕಳೆದ ಮೇಲೆ ಪರಿಸ್ಥಿತಿ ತಣ್ಣಗಾಗಿರಬಹುದು ಎಂದು ಭಾವಿಸಿ ಹೊರಗೆ ಬಂದರು. ಆಗ ಅವರು ಹೊರಗೆ ಬರುವುದನ್ನೇ ಕಾದಿದ್ದ ರಂಗಸ್ವಾಮಿ ಅವರ ಮೇಲೆ ದಾಳಿ ಮಾಡಿದ. ತಂದೆಯ ಎದೆಗೆ ಚಾಕುವಿನಿಂದ ಇರಿದ.

ಎದೆಯ ಎಡಭಾಗಕ್ಕೆ ಆದ ಇರಿತದಿಂದ ಗಾಯಗೊಂಡ ರಂಗಯ್ಯ ಅವರ ರಕ್ಷಣೆಗೆ ಅಲ್ಲಿದ್ದ ವ್ಯಕ್ತಿಯೊಬ್ಬರು ಆಗಮಿಸಿದರು. ರಂಗಸ್ವಾಮಿ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಇದೀಗ ಗಾಯಾಳುಗಳನ್ನು ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version