Site icon Vistara News

Student Death : ಕೇರಳದಿಂದ ಪ್ರವಾಸ ಬಂದಿದ್ದ ವಿದ್ಯಾರ್ಥಿನಿ ಕೆಆರ್‌ಎಸ್‌ನಲ್ಲಿ ಮೃತ್ಯು

Kerala Student dies at KRS

ಮೈಸೂರು: ಕೆಆರ್‌ಎಸ್‌ ಉದ್ಯಾನಕ್ಕೆ (KRS dam) ಪ್ರವಾಸ ಬಂದಿದ್ದ ಕೇರಳದ ವಿದ್ಯಾರ್ಥಿನಿಯೊಬ್ಬಳು (Student from Kerala) ಫಿಟ್ಸ್‌ ಕಾಯಿಲೆಯಿಂದ ಹಠಾತ್‌ ಕುಸಿದು ಬಿದ್ದು ಮೃತಪಟ್ಟಿದ್ದಾಳೆ (Student Death). ಕೇರಳದ ಪಾಲಕ್ಕಾಡ್ ಜಿಲ್ಲೆಯ ಸರ್ಕಾರಿ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಶ್ರೀಸಯನಾ(15) ಮೃತಪಟ್ಟ ದುರ್ದೈವಿ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಟೀಮ್‌ ಶಾಲಾ ಪ್ರವಾಸದಲ್ಲಿ ಮೈಸೂರಿಗೆ ಬಂದಿತ್ತು. ನವೆಂಬರ್‌ ಐದರಂದು ಕೇರಳದಿಂದ ಮೈಸೂರಿಗೆ ಆಗಮಿಸಿದ ಸ್ಕೂಲ್‌ ಟೀಮ್‌ ಸೋಮವಾರ ಮೈಸೂರಿನ ಎಲ್ಲ ಸ್ಥಳಗಳನ್ನು ವೀಕ್ಷಿಸಿದ ಬಳಿಕ ಕೆ.ಆರ್‌.ಎಸ್‌ಗೆ ತೆರಳಿತ್ತು. ಅಲ್ಲಿ ಬೃಂದಾವನ ಗಾರ್ಡನ್ಸ್‌ ವೀಕ್ಷಿಸಿ ಮರಳುವಾಗ ಸಯನಾ ಹಠಾತ್‌ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ಈ ಸಾವಿನ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ವಿದ್ಯಾರ್ಥಿನಿ ನೀರಿಗೆ ಬಿದ್ದು ಸಾವು, ಹೃದಯಾಘಾತದಿಂದ ಸಾವು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿತ್ತು. ಆದರೆ, ಆಕೆಯ ತಂದೆ ಶಶಿಕುಮಾರ್‌ ಅವರು ಮಗಳಿಗೆ ಫಿಟ್ಸ್‌ ಕಾಯಿಲೆ ಇತ್ತು. ಅದರಿಂದಾಗಿಯೇ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಅದರಲ್ಲಿ ಕೂಡಾ ಅಪಸ್ಮಾರ ಸಮಸ್ಯೆಯಿಂದ ಮೃತಪಟ್ಟ ಮಾಹಿತಿ ಹೊರಬಿದ್ದಿದೆ. ಇದೀಗ ಕುಟುಂಬ ಆಕೆಯ ಮೃತದೇಹವನ್ನು ಕೇರಳಕ್ಕೆ ತೆಗೆದುಕೊಂಡು ಹೋಗಿದೆ.

ಕೇರಳದಿಂದ ಬಂದಿದ್ದ ಸ್ಕೂಲ್‌ ಟೀಮ್‌ ಈ ರೀತಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಾಗ, ಒಬ್ಬ ಬಾಲಕಿ ಮೃತಪಟ್ಟ ಹೊತ್ತಿನಲ್ಲಿ ತಂಡಕ್ಕೆ ಮತ್ತು ಕುಟುಂಬಕ್ಕೆ ನೆರವಾಗಿದ್ದು ಸುವರ್ಣ ಕರ್ನಾಟಕ ಕೇರಳ ಸಮಾಜದ ಅಧ್ಯಕ್ಷ ಡಾ.ಮನು ಮೆನನ್ ಎಂದು ತಂಡ ನೆನಪು ಮಾಡಿಕೊಂಡಿದೆ.

ಇದನ್ನೂ ಓದಿ : Drowned In Canal : ವಿಸಿ ನಾಲೆ ದುರಂತ; ಉರುಳಿ ಬಿದ್ದ ಕಾರು, ನಾಲ್ವರು ಮುಳುಗಿರುವ ಶಂಕೆ!

ಡೆತ್ ನೋಟ್ ಬರೆದಿಟ್ಟು ಯುವಕ ನಾಪತ್ತೆ‌

ಮಡಿಕೇರಿ: ಮಡಿಕೇರಿ ಉಕ್ಕುಡ ನಿವಾಸಿ ಸಂದೇಶ್ (38) ಎಂಬವರು ಡೆತ್‌ ನೋಟ್‌ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸೇನೆಯಿಂದ ನಿವೃತ್ತನಾಗಿದ್ದ ಸಂದೇಶ್ ಇದೀಗ ಬದುಕುವ ಆಸೆಯಿಲ್ಲ ಎಂದು ಹೇಳಿ ಬರೆದಿಟ್ಟು ನಾಪತ್ತೆಯಾಗಿದ್ದಾರೆ.

ಮಡಿಕೇರಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವಕನಿಗಾಗಿ ಪೊಲೀಸರು ಮತ್ತು ಸಂಬಂಧಿಕರು ಶೋಧ ನಡೆಸುತ್ತಿದ್ದಾರೆ.

ಆತನ ಮೊಬೈಲ್‌ ಲೊಕೇಶನ್‌ ಆಧರಿಸಿ ಹುಡುಕಾಟ ನಡೆಯುತ್ತಿದೆ. ಮಡಿಕೇರಿಯ ಪಂಪಿನ‌ ಕೆರೆಯ ಬಳಿ ಮೊಬೈಲ್‌ ಲೊಕೇಶನ್‌ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮಡಿಕೇರಿ ನಗರ ಪೊಲೀಸರು ಅಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ನಿಜಕ್ಕೂ ಆತ ಅಲ್ಲೇ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನಾ ಅಥವಾ ಬೇರೆಲ್ಲಾದರೂ ಹೋಗಿದ್ದಾನಾ ಎನ್ನುವುದು ಸ್ಪಷ್ಟವಾಗಿಲ್ಲ.

ಈತ ಅವಿವಾಹಿತನಾಗಿದ್ದು, ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಖಿನ್ನನಾಗಿದ್ದ ಎಂದು ಸ್ನೇಹಿತರು ತಿಳಿಸಿದ್ದಾರೆ. ಆತ ಡೆತ್‌ ನೋಟ್‌ ಬರೆದಿಟ್ಟಿರುವುದರಿಂದ ಸಾಯುವ ತೀರ್ಮಾನದಿಂದಲೇ ಮನೆ ಬಿಟ್ಟು ಹೋಗಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಆದರೆ, ಎಲ್ಲಿ ಏನು ಮಾಡಿಕೊಂಡಿದ್ದಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ.

Exit mobile version