Site icon Vistara News

Karnataka Election 2023: ಅಡಕೆ ಬೆಳೆಗಾರರಿಗೆ ಮೋಡಿ ಮಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Narendra modi vows arecanut farmers and Explained farmers friendly efforts

ಶಿವಮೊಗ್ಗ, ಕರ್ನಾಟಕ: ಬಿಜೆಪಿ ಸರ್ಕಾರವು ಅಡಕೆ ಬೆಳೆಗಾರರಿಗೆ ಎಲ್ಲ ರೀತಿಯ ನೆರವು ನೀಡುತ್ತಿದೆ. ಅಡಿಕೆ ಆಮದು ನಿಯಂತ್ರಿಸಿ ಇಲ್ಲಿನ ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. 2014ರಲ್ಲಿ ಪ್ರತಿ ಕೆಜಿಗೆ ಅಡಕೆಯ ಕನಿಷ್ಠ ಆಮದು ಬೆಲೆ (MIP) 100 ರೂ. ಇತ್ತು. ಅದನ್ನು ನಾನು 350 ರೂ.ಗೆ ಹೆಚ್ಚಿಸಿದ್ದೇನೆ. ಜಗತ್ತಿನಲ್ಲಿ ಯಾರು ಏನೆಂದರೂ ನನಗೆ ಲೆಕ್ಕಕ್ಕಿಲ್ಲ. ನನ್ನ ಕರ್ನಾಟಕದ ರೈತರಿಗೆ ಒಳ್ಳೆಯದಾಗಬೇಕು, ಅಡಕೆ ಬೆಳೆಗಾರರಿಗೆ ಒಳ್ಳೆಯದಾಗಬೇಕು. ಎಂಐಪಿ ಹೆಚ್ಚಿಸಿದ್ದರಿಂದ ಕರ್ನಾಟಕದ ರೈತರಿಗೆ, ಅಡಕೆ ಬೆಳೆಗಾರರಿಗೆ ಭಾರಿ ಲಾಭವಾಗಿದೆ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಹೇಳಿದರು(Karnataka Election 2023).

ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಒಂದೆಡೆ ಆಮದು ಮೇಲೆ ನಿಯಂತ್ರಣ ಹೇರುತ್ತಿದ್ದರೆ ಮತ್ತೊಂದೆಡೆ ಕೃಷಿ ರಫ್ತು ಹೆಚ್ಚಿಸುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಕೃಷಿ ರಫ್ತು ಬಹಳ ಕಡಿಮೆ ಇತ್ತು. ಮೋದಿ ಸರ್ಕಾರದ ಪ್ರಯತ್ನದ ಫಲವಾಗಿ ಈಗ ಭಾರತವು ಕೃಷ್ಟಿ ರಫ್ತು ಮಾಡುವ ಟಾಪ್ 10 ರಾಷ್ಟ್ರಗಳ ಸಾಲಿಗೆ ಸೇರಿಕೊಂಡಿದೆ. ಆ ಮೂಲಕ ಕೃಷ್ಟಿ ರಫ್ತು ಮಾಡುವ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ನಾನು ಪ್ರಧಾನಿಯಾಗುವುದಕ್ಕಿಂತಲೂ ಮುಂಚೆನಿಂದಲೂ ಕರ್ನಾಟಕ ಅಡಕೆ ಬೆಳೆಗಾರರ ಪರವಾಗಿಯೇ ಇದ್ದೇನೆ. ಹಿಂದೆ ನಾನು ಗುಜರಾತ್ ಸಿಎಂ ಆಗಿದ್ದಾಗ, ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಅವರು ತಮ್ಮ ನಿಯೋಗದೊಂದಿಗೆ ಬಂದು, ಅಡಕೆ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ನೆರವು ನೀಡಿ ಎಂದರು. ಆಗ ನಾನು ಸಾಧ್ಯವಿರುವ ಎಲ್ಲ ನೆರವು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಶಿವಮೊಗ್ಗ ಸೇರಿದಂತೆ ಈ ಪ್ರದೇಶದಲ್ಲಿ ಅಡಕೆ ಪ್ರಮುಖ ಬೆಳೆಯಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರವು ಅಡಕೆ ಬೆಳೆಗಾರರ ಮೇಲೆ ಗದಾಪ್ರಹಾರ ಮಾಡಿತು. ಇದಕ್ಕೆ ಕಾಂಗ್ರೆಸ್ ಆಡಳಿತದಲ್ಲಿದ್ದ ಅಡಕೆ ಆಮದು ನೀತಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಈಗ ನೀವು ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತದ ಆಮದು ನೀತಿಗಳನ್ನು ಹೋಲಿಕೆ ಮಾಡಿದರೆ, ಯಾರು ಅಡಕೆ ಬೆಳೆಗಾರರ ಪರವಾಗಿ ಇದ್ದಾರೆಂಬುದು ಖಚಿತವಾಗುತ್ತದೆ. ಆಮದು ಕನಿಷ್ಠ ಬೆಲೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿದ್ದರಿಂದ ಹೊರಗಿನಿಂದ ಯಾರೂ ಅಡಕೆ ಖರೀದಿಸುವ ಧೈರ್ಯವನ್ನೇ ಮಾಡಲಿಲ್ಲ. ಇದರಿಂದ ಕರ್ನಾಟಕ ರೈತರಿಗೆ, ಅಡಕೆ ಬೆಳೆಗಾರರಿಗೆ ಲಾಭವಾಯಿತೋ ಇಲ್ಲ ಎಂದು ಪ್ರಧಾನಿ ಮೋದಿ ಅವರು ಪ್ರಶ್ನಿಸಿದರು.

ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ಪ್ರತಿ ವರ್ಷ 13 ಲಕ್ಷ ಉದ್ಯೋಗ ಸೃಷ್ಟಿ

ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದರೆ ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದೆ. ಅಂದರೆ ವರ್ಷಕ್ಕೆ 2 ಲಕ್ಷ ಉದ್ಯೋಗ ಎಂದಾಯಿತು. ಕಾಂಗ್ರೆಸ್‌ನ ಈ ಗ್ಯಾರಂಟಿ ಎಷ್ಟು ಸುಳ್ಳು ಎಂದು ನಾನು ಹೇಳುತ್ತೇನೆ. ಕೇವಲ 3.5 ವರ್ಷ ಆಡಳಿತ ನಡೆಸಿದ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರವು ಪ್ರತಿ ವರ್ಷ 13 ಲಕ್ಷ ಔಪಚಾರಿಕ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ಅದು ಕೊರೊನಾದಂಥ ಸಂಕಟ ಕಾಲದಲ್ಲೂ ಈ ಸಾಧನೆ ಮಾಡಿದೆ. ಈಗ ಗೊತ್ತಾಯಿತು ಅಲ್ವಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೇಗೆ ಕರ್ನಾಟಕವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಪ್ರತಿ ಎರಡು ದಿನಕ್ಕೆ ಒಂದು ಕಾಲೇಜ್ ನಿರ್ಮಿಸಿದ್ದಾರೆ ಮೋದಿ

ಈ ನಾಡಿನ ಯುವಕರಿಗೆ ಮೋದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವು ಕಳೆದ 9 ವರ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಯುವಕರ ಸಬಲೀಕರಣಕ್ಕೆ ಮಾಡಿದೆ. ದೇಶದಲ್ಲಿ ಪ್ರತಿ ಎರಡು ದಿನಕ್ಕೆ ಒಂದು ಕಾಲೇಜ್ ನಿರ್ಮಾಣ ಮಾಡಿದೆ. ಪ್ರತಿ ವಾರಕ್ಕೆ ಒಂದು ವಿಶ್ವವಿದ್ಯಾಲಯ ಆರಂಭಿಸಿದೆ. ದೇಶದಲ್ಲಿ 300ಕ್ಕೂ ಅಧಿಕ ವೈದ್ಯಕೀಯ ಕಾಲೇಜ್ ಆರಂಭಿಸಿದೆ. ಗ್ರೂಪ್ ಡಿ ಮತ್ತು ಸಿ ನೇಮಕಾತಿಯಲ್ಲಿದ್ದ ಸಂದರ್ಶನವನ್ನು ತೆಗೆದು ಹಾಕಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಮುದ್ರಾ ಮೂಲಕ 20 ಲಕ್ಷ ರೂ. ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೇ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಯಡಿಯೂರಪ್ಪ, ಈಶ್ವರಪ್ಪ ಅವರ ಭುಜ ತಟ್ಟಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಜನರತ್ತ ಕೈ ಬೀಸಿ, ತಮ್ಮ ಅಕ್ಕಪಕ್ಕದಲ್ಲಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಕೈಗಳನ್ನು ಎತ್ತಿ ಹಿಡಿದು ಒಗ್ಗಟ್ಟು ಸೂಚಿಸಿದರು. ಬಳಿಕ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ಗಟ್ಟಿಯಾಗಿ ಭುಜ ತಟ್ಟಿದರು. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಫೋನ್ ಮಾಡಿ ಮಾತನಾಡಿದ್ದರು.

Exit mobile version