Site icon Vistara News

Vistara News Impact : ಬುಡಕಟ್ಟು ಸಮುದಾಯ, ಸಾಗುವಳಿದಾರರಿಗಿಲ್ಲ ಮೀಸಲು ಅರಣ್ಯ ಕಂಟಕ; 3 ತಿಂಗಳಲ್ಲಿ ಹಕ್ಕು ಪತ್ರ

Eshwar Khandre

ಬೆಂಗಳೂರು: ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾಗಿದ್ದಂತಹ ಅರಣ್ಯ ಭೂಮಿಯ (Forest Land) ಪೈಕಿ ಶೇಕಡಾ 40ರಷ್ಟು ಭೂಮಿಯನ್ನು ಮರಳಿ ಮೀಸಲು ಅರಣ್ಯವಾಗಿ (Reserve Forest) ಪರಿವರ್ತನೆ ಮಾಡುವ ರಾಜ್ಯ ಸರ್ಕಾರದ (State Government) ನಿರ್ಧಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ವಿಸ್ತಾರ ನ್ಯೂಸ್‌ ಮಂಗಳವಾರ ಅಭಿಯಾನ (Vistara News Campaign‌) ಆರಂಭಿಸಿತ್ತು. ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸಿತ್ತು. ಈಗ ಈ ಬಗ್ಗೆ ಸ್ವತಃ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿದ್ರೆ ಮಾತ್ರ ತೆರವುಗೊಳಿಸಲಾಗುವುದು. ಬುಡಕಟ್ಟು ಸಮುದಾಯ, ಸಾಗುವಳಿದಾರರಿಗೆ (Tribal community and cultivators) ಸಮಸ್ಯೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು 3 ತಿಂಗಳಲ್ಲಿ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ವಿಸ್ತಾರ ನ್ಯೂಸ್‌ ಅಭಿಯಾನಕ್ಕೆ (Vistara News Impact) ಸರ್ಕಾರ ಸ್ಪಂದನೆ ನೀಡಿದೆ.

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರ ಖಂಡ್ರೆ, ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿದ್ದರೆ ಮಾತ್ರ ತೆರವುಗೊಳಿಸುವಂತೆ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಸ್ವಹಿತಾಸಕ್ತಿ, ರಾಜಕೀಯ ಕಾರಣಕ್ಕಾಗಿ ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಆರೋಪ ಸುಳ್ಳು. ಬುಡಕಟ್ಟು ಸಮುದಾಯ, ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸದೆ ಹಕ್ಕು ಪತ್ರ ನೀಡುವಂತೆ ಸೂಚನೆ ನೀಡಲಾಗಿದೆ. 3 ತಿಂಗಳಲ್ಲಿ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಕೂಡಾ ಇದಕ್ಕೆ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

‘ಅರಣ್ಯ ರೋದನ’ ಎಂಬ ಅಭಿಯಾನವನ್ನು ವಿಸ್ತಾರ ನ್ಯೂಸ್‌ ಕೈಗೊಂಡಿತ್ತು. ಸರ್ಕಾರದ ಹಾಗೂ ಅರಣ್ಯ ಇಲಾಖೆಯ ತಪ್ಪುಗಳ ಬಗ್ಗೆ ಬೆಳಕು ಚೆಲ್ಲಿತ್ತು. ಕರಾವಳಿ, ಮಲೆನಾಡು ಸೇರಿದಂತೆ ಮೀಸಲು ಅರಣ್ಯ ಘೋಷಣೆಯಿಂದ ಬಾಧಿತವಾದ ಜನರ ಸಂಕಷ್ಟಗಳನ್ನು ತೋರಿಸಿತ್ತು. ಸರ್ಕಾರದ ಈ ದಿಢೀರ್‌ ನಿರ್ಧಾರವನ್ನು ಪ್ರಶ್ನೆ ಮಾಡಿತ್ತು. ಅಲ್ಲದೆ, ಸರಣಿ ಕ್ಯಾಂಪೇನ್‌ಗೂ ಮುಂದಾಗಿತ್ತು. ಆದರೆ, ಈಗ ಇದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಬುಡಕಟ್ಟು ಸಮುದಾಯ, ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಅಭಯವನ್ನು ನೀಡಿದ್ದಾರೆ.

ಇದನ್ನೂ ಓದಿ: Power Point with HPK : ಸಿಎಂ ಸಿದ್ದರಾಮಯ್ಯಗೆ ಮಾಮ ಎಂದು ಕರೆಯುವ ಶಿವರಾಜಕುಮಾರ್!

3 ತಿಂಗಳಲ್ಲಿ ಹಕ್ಕು ಪತ್ರ ವಿತರಣೆ

ಬೆಂಗಳೂರು ಸೇರಿದಂತೆ ಅನೇಕ ಕಡೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದರ ಬಗ್ಗೆ ನಾವು ಕಠಿಣವಾಗಿ ಕ್ರಮ ಕೈಗೊಳ್ಳುತ್ತೇವೆ. ಆದರೆ, ಬುಡಕಟ್ಟು ಸಮುದಾಯ, ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸದಂತೆ ಸೂಚನೆ ನೀಡಿದ್ದೇವೆ. ಇಂಥವರಿಗೆ ಇನ್ನು ಮೂರು ತಿಂಗಳಲ್ಲಿ ಹಕ್ಕು ಪತ್ರವನ್ನು ವಿತರಣೆ ಮಾಡುತ್ತೇವೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಪ್ಪಿಗೆ ನೀಡಿ ಸೂಚನೆಯನ್ನು ನೀಡಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯ ಇಲಾಖೆ ಜತೆ ನಡೆದಿತ್ತು ಜನರ ಸಂಘರ್ಷ!

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅರಣ್ಯದಂಚಿನ ಗ್ರಾಮಸ್ಥರ ನಡುವಿನ ಸಂಘರ್ಷ ಮತ್ತೆ ಜೋರಾಗಿದೆ. ಬೆಳ್ತಂಗಡಿಯ ಅಮ್ಮಿನಡ್ಕದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ತಿರುಗಿಬಿದ್ದಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಏಳಪಟ್ಟಿ ಗ್ರಾಮದಲ್ಲಿ ಒತ್ತುವರಿ ಭೂಮಿ ಸರ್ವೇಗೆ ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರು. ನಮ್ಮ ಹಕ್ಕನ್ನು ಏಕೆ ಕಿತ್ತುಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ, ಚಿಕ್ಕಮಗಳೂರು, ಕೊಡಗಿನಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ಅರಣ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ವಿರುದ್ಧ ಮಲೆನಾಡು, ಕರಾವಳಿ ಜಿಲ್ಲೆಗಳ ಶಾಸಕರಿಂದ ಪಕ್ಷಾತೀತವಾದ ಹೋರಾಟಕ್ಕೆ ಮುಂದಾಗಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಲೂ ಮುಂದಾಗಿದ್ದರು. ಇದೇ ವೇಳೆ ವಿಸ್ತಾರ ನ್ಯೂಸ್‌ ಸಹ ಅಭಿಯಾನ ಕೈಗೊಂಡು ಜನರ ಪರವಾಗಿ ಧ್ವನಿ ಎತ್ತಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ, ಈಗ ಸಣ್ಣ ಬುಡಕಟ್ಟು ಜನಾಂಗ ಹಾಗೂ ಉಳುಮೆ ಮಾಡುವವರನ್ನು ಈಗಿನ ಕ್ರಮದಿಂದ ದೂರ ಇಡುತ್ತಿರುವುದಾಗಿ ತಿಳಿಸಿದೆ.

ಪರಿಸ್ಥಿತಿ ಹದಗೆಡಲು ಏನು ಕಾರಣ?

ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4ರ ಕಲಂ 4 (1) ಅಡಿ ಯಾವುದೇ ಭೂ ಪ್ರದೇಶವನ್ನು ʻಮೀಸಲು ಅರಣ್ಯ’ ಎಂದು ಸರ್ಕಾರ ಘೋಷಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ಅರಣ್ಯ ಇಲಾಖೆ ʻಮೀಸಲು ಅರಣ್ಯʼ ಅಧಿಸೂಚನೆಯನ್ನು ಹೊರಡಿಸಿತ್ತು. ಸರ್ಕಾರ ಅಧಿಕಾರಕ್ಕೆ ಬಂದ 120 ದಿನಗಳಲ್ಲೇ 5,729 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಿತ್ತು. ಇದನ್ನು ಸರ್ಕಾರ ಬಹುದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಂಡಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನ ನಿವಾಸಿಗಳ ತೆರವಿಗೆ ಮುಂದಾಗಿದ್ದರು. ಇದು ಸಂಘರ್ಷಕ್ಕೆ ಕಾರಣವಾಗಿತ್ತು.

ಈ ಮೊದಲು ಈಶ್ವರ್‌ ಖಂಡ್ರೆ ಏನು ಹೇಳಿದ್ದರು?

ಅರಣ್ಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಲಾಗಿದ್ದ ಅರಣ್ಯ ಭೂಮಿಯಲ್ಲಿ ಶೇ.40 ಭೂಮಿಯನ್ನು ಮರಳಿ ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ “ಎಕ್ಸ್‌” (ಟ್ವಿಟರ್‌) ನಲ್ಲಿ ಹೇಳಿಕೊಂಡಿತ್ತು. ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಈಗಿರುವ ಶೇ.22ರಷ್ಟು ಅರಣ್ಯವನ್ನು ಶೇ.30ಕ್ಕಿಂತ ಹೆಚ್ಚಿಸುವ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅರಣ್ಯ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಮಲೆನಾಡು ಶಾಸಕರ ಆಕ್ರೋಶ

ʻʻ120 ದಿನದಲ್ಲಿ 5,000 ಸಾವಿರ ಎಕರೆ ಕಾಡನ್ನು ಈ ಅರಣ್ಯ ಇಲಾಖೆಯೇನೂ ಬೆಳೆಸಿಲ್ಲ. ಇರುವ ಕಾಡನ್ನೇ ಮೀಸಲು ಎಂದು ಸಹಿ ಹಾಕಿದ್ದಾರೆ. ಈ ಸಹಿ ಹಾಕಲು 120 ದಿನ ಏಕೆ, ಬರೀ 120 ಸೆಕೆಂಡ್ ಸಾಕು. ಇದೊಂದು ವಿವೇಚನಾ ರಹಿತ ನಿರ್ಧಾರವಾಗಿದೆ. ಇದನ್ನು ಸರ್ಕಾರ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಮಲೆನಾಡು ಭಾಗದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಬಯಲು ನಾಡು ಬೀದರ್‌ನ ಈಶ್ವರ್ ಖಂಡ್ರೆ‌ ಅವರಿಗೆ ಮಲೆನಾಡಿನ ಜನ ಜೀವನ, ಸಮಸ್ಯೆಗಳ ಬಗ್ಗೆ ಏನು ಗೊತ್ತು? ಅವರು ಅಧಿಕಾರಿಗಳು ಕೊಟ್ಟ ಫೈಲ್‌ಗೆ ಸಹಿ ಹಾಕುತ್ತಿದ್ದಾರೆ. ಸಮಸ್ಯೆ ಹೇಳಲು ಹೋದರೆ ಕೇಳಿಸಿಕೊಳ್ಳದೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಮಲೆನಾಡು ಭಾಗದ ಕಾಂಗ್ರೆಸ್‌ ಶಾಸಕರು ಕಿಡಿಕಾರಿದ್ದರು.

ಖಾರವಾಗಿ ಪ್ರಶ್ನೆ ಮಾಡಿದ್ದ ವಿಸ್ತಾರ ನ್ಯೂಸ್‌

1. ಸರ್ಕಾರ ಈಗ ಮೀಸಲು ಅರಣ್ಯವನ್ನು ಘೋಷಣೆ ಮಾಡಿದೆ. ಆದರೆ, ಇದರ ಮುಂದಿನ ಪರಿಣಾಮ ಏನು ಎಂಬುದನ್ನು ನೋಡಬೇಕಲ್ಲವೇ? ಮೀಸಲು ಅರಣ್ಯ ಎಂದು ಘೋಷಣೆ ಮಾಡಿದರೆ ಸಾಕೇ? ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಅಲ್ಲವೇ?

2. ಮೀಸಲು ಅರಣ್ಯ ಎಂದು ಘೋಷಿಸಲ್ಪಟ್ಟ ಸ್ಥಳಗಳಲ್ಲಿ ಈಗಾಗಲೇ ಮನೆ ಕಟ್ಟಿಕೊಂಡಿದ್ದರೆ ಅಥವಾ ತೋಟವನ್ನೋ ಇನ್ನೇನೋ ಕೃಷಿ ಚಟುವಟಿಕೆಯನ್ನು ಮಾಡಿಕೊಂಡಿದ್ದರೆ ಅಂತಹ ಜಾಗವನ್ನು ವಾಪಸ್‌ ಪಡೆಯುವುದು ಹೇಗೆ? ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಅಂಥವರಿಗೆ ಪುನರ್ವಸತಿ ಯೋಜನೆ ಏನು? ಏಕಾಏಕಿ ಮನೆ ಕೆಡವಿ, ನೀವು ಜಾಗ ಖಾಲಿ ಮಾಡಿ ಎಂದರೆ ಅವರು ಹೇಗೆ ಹೋಗಲು ಸಾಧ್ಯ?

3. ಈಗಾಗಲೇ ಶೇಕಡಾ 20ರಷ್ಟು ಇರುವ ಅರಣ್ಯವನ್ನು ಶೇಕಡಾ 30ಕ್ಕೆ ಹೆಚ್ಚಳ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದು ಒಳ್ಳೆಯ ಉದ್ದೇಶವೇ ಸರಿ. ಅದೇ ರೀತಿಯಾಗಿ ಇರುವ ಇನ್ನಿತರ ಪರ್ಯಾಯ ಮಾರ್ಗಗಳನ್ನೂ ನೋಡಬಹುದಲ್ಲವೇ? ಅಕೇಶಿಯಾ ನೆಡುತೋಪುಗಳನ್ನು ನೀವು ಬಳಸುವುದನ್ನು ನಿಲ್ಲಿಸಿ ಅಲ್ಲಿ ಅರಣ್ಯೀಕರಣವನ್ನು ಮಾಡಬಹುದಲ್ಲವೇ?

4. ರಸ್ತೆಯುದ್ದಕ್ಕೂ ಅಕ್ಕಪಕ್ಕದಲ್ಲಿ ಸಾಲು ಸಾಲು ಜಾಗಗಳಿವೆ. ಅಲ್ಲಿ ಸರಿಯಾಗಿ ಗಿಡಗಳನ್ನು ಬೆಳೆಸಿ ನಿರ್ವಹಣೆ ಮಾಡಿದ್ದೇ ಆದಲ್ಲಿ ಈಗ ಹಾಕಿಕೊಂಡಿರುವ ಗುರಿಗಿಂತಲೂ ಹೆಚ್ಚಳವಾಗುವುದಿಲ್ಲವೇ? ಇದು ಕ್ಲಿಷ್ಟಕರ ದಾರಿ ಎಂದು ಬಿಡಲಾಗಿದೆಯೇ?

5. ಸಮೀಕ್ಷೆಯನ್ನು ನಡೆಸದೆ, ಸರ್ವೆ ನಡೆಸದೇ ನಮ್ಮ ಬಳಿ ಸರ್ಕಾರದ ಆದೇಶ ಇದೆ ಎಂದು ಏಕಾಏಕಿ ನುಗ್ಗಿದರೆ ಜನರು ಸುಮ್ಮನಿರುತ್ತಾರೆಯೇ? ಜನರಿಂದಲೇ ಆಡಳಿತ ಎಂಬುದು ಮರೆತು ಹೋಯಿತೇ?

6. ಕೊನೆಯದಾಗಿ ಹೇಳಬೇಕೆಂದರೆ, ಅರಣ್ಯ ಜಾಗವನ್ನು ಹೆಚ್ಚಳ ಮಾಡುವ ನಿರ್ಧಾರಕ್ಕೆ ವಿಸ್ತಾರ ನ್ಯೂಸ್‌ ಸಹಮತ ಇದೆ. ಆದರೆ, ಈಗ ಕೈಗೊಂಡಿರುವ ಏಕಾಏಕಿ ನಿರ್ಧಾರ ಸರಿಯಲ್ಲ. ಪರ್ಯಾಯ ಮಾರ್ಗಗಳು ಏನು? ಈಗಿರುವವರಿಗೆ ಪರ್ಯಾಯ ನೆಲೆ ಏನು? ಎಂಬುದನ್ನು ಸ್ಪಷ್ಟಪಡಿಸದೇ ಕೈಗೊಂಡಿರುವ ನಿರ್ಧಾರವನ್ನು ಜನಸಾಮಾನ್ಯರ ಪರವಾಗಿ ಖಂಡಿಸಲಾಗುತ್ತಿದೆ ಎಂದು ವಿಸ್ತಾರ ನ್ಯೂಸ್‌ ಅಭಿಯಾನ ಮಾಡಿ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.

ಯಾವ ಜಿಲ್ಲೆಯಲ್ಲಿ ಎಷ್ಟು ಎಕರೆ ಪ್ರದೇಶ ಮೀಸಲು ಅರಣ್ಯವಾಗಿ ಘೋಷಣೆ?

ಮೀಸಲು ಅರಣ್ಯ ಘೋಷಣೆಯಿಂದ ಏನೇನು ತೊಂದರೆ?

ಇದನ್ನೂ ಓದಿ: Vistara News Campaign‌: ಕಾಡು ಕಾಪಾಡಿದ ಜನರ ಕಾಡುವ ಸರ್ಕಾರ; ರಣಾಂಗಣವಾಯ್ತು ‘ಮೀಸಲು ಅರಣ್ಯ’

ಈಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳುವುದಾಗಿ ಹೇಳಿಕೊಂಡಿದೆ. ಹೀಗಾಗಿ ಬುಡಕಟ್ಟು ನಿವಾಸಿಗಳು ಹಾಗೂ ಸಾಗುವಳಿ ಮಾಡುತ್ತಿರುವವರಿಗೆ ಯಾವುದೇ ತೊಂದರೆ ಮಾಡದೆ, ಅವರಿಗೆ ಹಕ್ಕು ಪತ್ರ ನೀಡುವುದಾಗಿ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಮಾಡಿದ ಅಭಿಯಾನವು ಸಾರ್ಥಕವಾಗಿದೆ.

Exit mobile version