Site icon Vistara News

Prahlad Modi | ಬಂಡೀಪುರಕ್ಕೆ ಹೊರಟಿದ್ದ ಮೋದಿ ಸಹೋದರನ ಕುಟುಂಬದ ಕಾರು ಅಪಘಾತ; ಮಗುವಿನ ಕಾಲು ಮೂಳೆ ಕಟ್‌, ಉಳಿದವರು ಪಾರು

modi car accident ಪ್ರಹ್ಲಾದ್‌ ಮೋದಿ ಕಾರು ಅಪಘಾತ ಕಾಲು ಮೂಳೆ ಕಟ್

ಮೈಸೂರು: ಬೆಂಗಳೂರಿನಿಂದ ಬಂಡೀಪುರಕ್ಕೆ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್‌ ಮೋದಿ (Prahlad Modi) ಅವರ ಕುಟುಂಬದ ಕಾರು ಇಲ್ಲಿನ ಕಡಕೊಳ‌ ಬಳಿ ಅಪಘಾತಕ್ಕೀಡಾಗಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಜಖಂಗೊಂಡಿದ್ದು, ಮಗುವಿನ ಕಾಲಿನ ಮೂಳೆ ಕಟ್‌ ಆಗಿದ್ದರೆ, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನು ಹೊರತುಪಡಿಸಿದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಹ್ಲಾದ್ ಮೋದಿ, ಅವರ ಪುತ್ರ ಮೇಹುಲ್ ಮೋದಿ, ಸೊಸೆ ಜಿಂದಾಲ್ ಮೋದಿ, ಮೊಮ್ಮಗ ಆರು ವರ್ಷದ ಮೇನತ್ ಮೇಹುಲ್ ಮೋದಿ ಹಾಗೂ ಚಾಲಕ ಸತ್ಯನಾರಾಯಣ ಕಾರಿನಲ್ಲಿದ್ದರು. ಇವರೆಲ್ಲರೂ ಬೆಂಗಳೂರಿನಿಂದ ಬಂಡೀಪುರಕ್ಕೆ ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇವರ ಪೈಕಿ ಮಗುವಿಗೆ ಮಂಡಿಯಿಂದ ಕೆಳಭಾಗದ ಮೂಳೆ ಮುರಿದಿದ್ದರೆ, ಮಗ, ಸೊಸೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಎಸ್‌ಪಿ ಸೀಮಾ ಲಾಟ್ಕರ್, ಡಿವೈಎಸ್‌ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಏರ್‌ಬ್ಯಾಗ್‌ಗಳು ಓಪನ್‌ ಆಗಿದ್ದು, ಜೀವ ಉಳಿಯಲು ಸಹಾಯಕವಾಗಿದೆ ಎಂದು ಹೇಳಲಾಗಿದೆ.

ಚಾಮುಂಡೇಶ್ವರಿ ಕೃಪೆಯಿಂದ ಎಲ್ಲರೂ ಪಾರು- ಪ್ರತಾಪ್‌ ಸಿಂಹ
ಪ್ರಹ್ಲಾದ ಮೋದಿ ಅವರಿಗೆ ಕಣ್ಣಿನ ಬಳಿ ತರಚಿದ ಗಾಯವಾಗಿದೆ. ಅವರ ಪುತ್ರನಿಗೂ ಸಣ್ಣಪುಟ್ಟ ಗಾಯ ಆಗಿದೆ. ಸೊಸೆಗೆ ಹಣೆಯ ಬಲ ಭಾಗದಲ್ಲಿ ಸ್ವಲ್ಪ ಕಟ್ ಆಗಿದೆ. ಅದಕ್ಕೆ ಚಿಕಿತ್ಸೆ ಕೊಡಿಸಲಾಗಿದೆ. ಮಗುವಿಗೆ ಮಂಡಿಯಿಂದ ಕೆಳಭಾಗದ ಮೂಳೆ ಮುರಿದಿದೆ. ಮಗುವನ್ನು ಹೊರತುಪಡಿಸಿ ಯಾರಿಗೂ ಹೆಚ್ಚಿನ ತೊಂದರೆ ಆಗಿಲ್ಲ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಎಲ್ಲರೂ ಚೆನ್ನಾಗಿದ್ದಾರೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಪ್ರಹ್ಲಾದ ಮೋದಿ ಅವರು ಹಿಂದೆಯೂ ಮೈಸೂರಿಗೆ ಬಂದಿದ್ದರು. ನಾನೇ ಅರಮನೆಗೆ ಕರೆದುಕೊಂಡು ಹೋಗಿದ್ದೆ. ಈಗ ಕುಟುಂಬ ಸಮೇತ ಬಂಡೀಪುರಕ್ಕೆ ತೆರಳುತ್ತಿದ್ದರು. ಇದು ಖಾಸಗಿ ಭೇಟಿಯಾಗಿದೆ. ಚಾಲಕನಿಗೆ ನಿದ್ರೆ ಬಂದಂತೆ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಾಗುತ್ತಿದೆ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ | Hassan Blast | ಆಂಟಿ ಪ್ರೀತ್ಸೆ ಎಂದವನಿಗೆ NO ಅಂದಿದ್ದಕ್ಕೆ ಉಗ್ರ ಪ್ಲ್ಯಾನ್‌; ಮಿಕ್ಸಿ ಬಾಂಬ್‌ ಕಳಿಸಿದ್ದ ಪಾಗಲ್‌ ಪ್ರೇಮಿ!

Exit mobile version