Site icon Vistara News

Rahul Gandhi: ರಾಹುಲ್ ಗಾಂಧಿಗೆ ರಿಲೀಫ್; ಜೂನ್‌ 7ಕ್ಕೆ ವಿಚಾರಣೆಗೆ ಹಾಜರಾಗಲು ಕೋರ್ಟ್‌ ಸೂಚನೆ

Rahul Gandhi

ಬೆಂಗಳೂರು: ಬಿಜೆಪಿಗೆ ಮಾನನಷ್ಟ ಪ್ರಕರಣದಲ್ಲಿ (Defamation Case) ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ರಾಹುಲ್ ಗಾಂಧಿಗೆ ರಿಲೀಫ್ ಸಿಕ್ಕಿದೆ. ಪ್ರಕರಣದ 4ನೇ ಆರೋಪಿ ರಾಹುಲ್ ಗಾಂಧಿ (Rahul Gandhi) ಅವರು ಶನಿವಾರ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ವಾರಂಟ್ ಜಾರಿ ಮಾಡುವಂತೆ ದೂರುದಾರರ ಪರ ವಕೀಲ ಮನವಿ ಮಾಡಿದ್ದರು. ಆದರೆ, ವಾರಂಟ್‌ ನೀಡದೆ, ಜೂನ್ 7 ರಂದು ಖುದ್ದು ಹಾಜರಾಗಲು 42ನೇ ಎಸಿಎಂಎಂ ಕೋರ್ಟ್‌ ಸೂಚನೆ ನೀಡಿದೆ.

ಸಿಆರ್‌ಪಿಸಿ 205 ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಲಾಗಿದ್ದು, ಜೂನ್ 7 ರಂದು ಖುದ್ದು ಹಾಜರಾಗಲು ರಾಹುಲ್‌ ಗಾಂಧಿಗೆ ಸೂಚನೆ ನೀಡಲಾಗಿದೆ. ಬಿಜೆಪಿ ಮಾನನಷ್ಟ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ಖಾಸಗಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಇಂದು ಕೋರ್ಟ್‌ಗೆ ಹಾಜರಾಗಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ನೀಡಲಾಗಿತ್ತು. ರಾಹುಲ್ ಗಾಂಧಿ ಹಾಜರಾಗದ ಹಿನ್ನಲೆ ವಾರಂಟ್ ಜಾರಿ ಮಾಡುವಂತೆ ದೂರುದಾರ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಕೋರ್ಟ್‌ ವಿಚಾರಣೆಗೆ ಹಾಜರಾಗಲು ರಾಹುಲ್‌ ಗಾಂಧಿಗೆ ಸೂಚಿಸಿದೆ.

ಸಿಎಂ, ಡಿಸಿಎಂಗೆ ಶರತ್ತುಬದ್ಧ ಜಾಮೀನು

ಬಿಜೆಪಿಗೆ ಮಾನನಷ್ಟ ಪ್ರಕರಣದಲ್ಲಿ (Defamation Case) 42ನೇ ಎಸಿಎಂಎಂ ಕೋರ್ಟ್‌ (ACMM court) ಮುಂದೆ ಇಂದು ಹಾಜರಾದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರಿಗೆ ಶರತ್ತುಬದ್ಧ ಜಾಮೀನು (Bail) ನೀಡಲಾಗಿತ್ತು. ಪ್ರಕರಣದ ಇನ್ನೊಬ್ಬ ಆರೋಪಿ ರಾಹುಲ್‌ ಗಾಂಧಿ (Rahul Gandhi) ಗೈರು ಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಗರಂ ಆಗಿದ್ದರು.

ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಕೋರ್ಟ್‌ ವಿಚಾರಣೆ ನಡೆಸಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಕೈ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ A4 ಆರೋಪಿಯಾಗಿದ್ದಾರೆ.

ವಿಚಾರಣೆಗೆ ಮುನ್ನ ಆಗಮಿಸಿದ ಸಿಎಂ ಹಾಗೂ ಡಿಸಿಎಂ, ಕೋರ್ಟ್ ಹಾಲ್ ಮುಂದೆ ಸಾಮಾನ್ಯರಂತೆ, ಜೊತೆಯಾಗಿ ಕುಳಿದಿದ್ದರು. ನಂತರ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ಮುಂದೆ ಇಬ್ಬರೂ ಹಾಜರಾದರು. ಪಾರ್ಟಿ ಪ್ರೆಸಿಡೆಂಟ್ ಹಾಗೂ ಎರಡನೇ ಆರೋಪಿ ಒಂದೇ ಎಂದು ವಕೀಲರು ತಿಳಿಸಿದರು. ಇಬ್ಬರನ್ನೂ ಹೊರ ಹೋಗಬಹುದೆಂದು ಜಡ್ಜ್‌ ಸೂಚಿಸಿದರು. ಇಬ್ಬರಿಗೂ ಶರತ್ತುಬದ್ಧ ಜಾಮೀನು ಮಂಜೂರು ಮಾಡಲಾಯಿತು. ಡಿಸಿಎಂ ಪರ ಎಎಜಿ ಎಸ್.ಎ ಅಹಮದ್ ವಾದಿಸಿದ್ದರು.

ನಾಲ್ಕನೇ ಆರೋಪಿ ರಾಹುಲ್ ಗಾಂದಿ ದೆಹಲಿಯಲ್ಲಿದ್ದಾರೆ. ಇಂದು ಇಂಡಿಯಾ ಕೂಟದ ಮೀಟಿಂಗ್ ಇದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಾಗಲಾಗುತ್ತಿಲ್ಲ. ನಾಲ್ಕನೇ ತಾರೀಕು ಚುನಾವಣೆ ರಿಸಲ್ಟ್ ಇದೆ. ಹೀಗಾಗಿ ಕಾಲಾವಕಾಶ ನೀಡುವಂತೆ ವಿನಂತಿಸಿದ್ದರು. ಹಾಗಿದ್ದರೆ ಇಂದೇ ಬಂದು ಮುಗಿಸಿಕೊಂಡು ಹೋಗಬಹುದಿತ್ತಲ್ಲ, ದೆಹಲಿಗೆ ಹೋಗೋದಕ್ಕೆ ಐದು ದಿನ ಬೇಕಾಗಿಲ್ಲವಲ್ಲ ಎಂದು ಜಡ್ಜ್ ಪ್ರಶ್ನಿಸಿದ್ದರು.

ದೂರುದಾರರ ಪರ ಹಾಜರಾದ ವಕೀಲ ವಿನೋದ್ ಕುಮಾರ್, “ನ್ಯಾಯಾಲಯದಿಂದ ಸಮನ್ಸ್ ಜಾರಿ ಆದಾಗ ಬರಬೇಕು. ಪದೇ ಪದೆ ಕಾರಣ ನೀಡಿದ್ರೆ ಹೇಗೆ? ಎರಡು ಮೂರು ಸಲ ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಮುಂದೆಯೂ ಬೇರೆ ಬೇರೆ ಸಭೆ ಇದೆ ಅಂತ ಹಾಜರಾಗದೇ ಇರಬಹುದು. ಇವತ್ತಿಗೆ ಎಲೆಕ್ಷನ್ ಮುಗಿಯುತ್ತೆ. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ. ಹೀಗಾಗಿ ರಾಹುಲ್ ಗಾಂಧಿಗೆ ವಾರಂಟ್ ಜಾರಿ ಮಾಡಿ” ಎಂದು ಮನವಿ ಮಾಡಿದ್ದರು.

ಏನಿದು ಪ್ರಕರಣ?

2023ರ ಮೇ 8ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಇದನ್ನೂ ಓದಿ | Prajwal Revanna Case: ವಿಚಾರಣೆಯಲ್ಲಿ ಬಾಯಿಬಿಡದ ಪ್ರಜ್ವಲ್‌; ಸ್ಥಳ ಮಹಜರಿಗಾಗಿ ಹೊಳೆನರಸೀಪುರಕ್ಕೆ ಕರೆದೊಯ್ಯಲು ಸಿದ್ಧತೆ

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

Exit mobile version