Site icon Vistara News

Assault Case : ಪ್ರೀತ್ಸೆ ಅಂದ.. ವಿರೋಧಿಸಿದ್ದಕ್ಕೆ ಯುವತಿ ತಂದೆ ಕಾಲು ಮುರಿದು, ಕಣ್ಣಿಗೆ ಕಲ್ಲಿನಿಂದ ಜಜ್ಜಿದ ಕಿರಾತಕ

assault Case

ರಾಯಚೂರು: ಪ್ರೀತಿ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ (Neha Murder Case) ಪ್ರಕರಣದ ರೀತಿಯಲ್ಲೇ ರಾಯಚೂರಿನಲ್ಲೂ ಘಟನೆ ನಡೆದಿದೆ. ಅಲ್ಲಿ ಪ್ರೀತಿ ನಿರಾಕರಣೆಗೆ ನೇಹಾಳ ಕೊಲೆಯಾದರೆ, ಇಲ್ಲಿ ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಹೆತ್ತವರ ಮೇಲೆ ಪಾಗಲ್‌ ಪ್ರೇಮಿಯೊಬ್ಬ (Love failure) ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದಾನೆ. ರಾಯಚೂರಿನ ಸಿಂಧನೂರು ತಾಲೂಕಿನ ಆರ್‌ಎಚ್ ಕ್ಯಾಂಪ್ 3 ರಲ್ಲಿ ಘಟನೆ ನಡೆದಿದೆ.

ಪಾಗಲ್‌ ಪ್ರೇಮಿಯೊಬ್ಬ ಯುವತಿಯೊಬ್ಬಳಿಗೆ ಪ್ರೀತಿಸುವಂತೆ ಕಾಡಿಸುತ್ತಿದ್ದ. ಈತನ ಕಾಟಕ್ಕೆ ಯುವತಿ ಪೋಷಕರು ಆಕೆಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಇದರಿಂದ ಸಿಟ್ಟಾದ ಯುವಕ ಯುವತಿ ಪೋಷಕರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕಳೆದ ಏಪ್ರಿಲ್ 14 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ತಂದೆ ಹೀರಾ ಮೋಹನ್, ತಾಯಿ ಶೃತಿ ಮಂಡಲ್, ಸಹೋದರ ಹೀಮಂತು ಸಂಬಂಧಿ ಶುಬ್ರತೋ ಮೇಲೆ ಪ್ರಣವ್‌ ಎಂಬಾತ ಹಲ್ಲೆ ನಡೆಸಿದ್ದಾನೆ. ಈ ಪಾಗಲ್‌ ಪ್ರೇಮಿ ತಂಡ ಕಟ್ಟಿಕೊಂಡು ಬಂದು ಯುವತಿ ತಂದೆ ಕಾಲು ಮುರಿದಿದ್ದಾನೆ. ಕಣ್ಣಿಗೆ ಕಲ್ಲಿನಿಂದ ಜಜ್ಜಿ ಕಣ್ಣು ಕಾಣದಂತೆ ಹಲ್ಲೆ ನಡೆಸಿದ್ದಾನೆ. ಮಾತ್ರವಲ್ಲದೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಯುವತಿ ತಾಯಿಯ ಸೀರೆ ಎಳೆದಾಡಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: Murder Case : ಕುಡಿದಾಗ ಯಾವಾಗಲೂ ಬೈಯುತ್ತಾನೆಂದು ಗೆಳೆಯನನ್ನೇ ಕೊಂದುಬಿಟ್ಟರು

ಪ್ರೀತಿಸುವಂತೆ ಕಾಟ ಕೊಟ್ಟ ಪ್ರಣವ್‌

ಪಾಗಲ್‌ ಪ್ರೇಮಿ ಪ್ರಣವ್‌ ಎಂಬಾತ ಹೀರಾಮೋಹನ್ ಅವರ ಮಗಳಿಗೆ ಪ್ರೀತಿಸುವಂತೆ ಟಾರ್ಚರ್ ಕೊಡುತ್ತಿದ್ದ. ಈ ವಿಷಯ ತಿಳಿದ ಪೋಷಕರು, ಮಗಳನ್ನು ಊರು ಬಿಡಿಸಿ ಸಂಬಂಧಿಕರ ಮನೆಯಲ್ಲಿರಿಸಿದ್ದರು. ಯುವತಿ ಸಂಪರ್ಕಕ್ಕೆ ಸಿಗದೇ ಇದ್ದಾಗ ಸಿಟ್ಟಾದ ಪ್ರಣವ್‌, ಆಕೆಯನ್ನು ಯಾಕೆ ಬೇರೆಡೆ ಕಳುಹಿಸಿದ್ದೀರಾ ಎಂದು ಕಿರಿಕ್‌ ತೆಗೆದಿದ್ದ.

ಆಕೆಯನ್ನು ಮತ್ತೆ ಕರೆತನ್ನಿ ಎಂದು ಕಿರುಕುಳ ನೀಡಿ ದಾಳಿ ಮಾಡಿದ್ದಾನೆ. ಆರೋಪಿ ಪ್ರಣವ್ ಸೇರಿ ಮೂವರು ಗ್ರಾಮದಲ್ಲಿ ಯುವತಿ ತಂದೆಯನ್ನ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಮನೆಗೆ ಬಂದು ಯುವತಿಯ ತಾಯಿ, ಸಹೋದರ, ಸಂಬಂಧಿ ಮೇಲೂ ಹಲ್ಲೆ ನಡೆಸಿದ್ದಾನೆ. ಸದ್ಯ ಯುವತಿ ತಂದೆ ಹೀರಾಮೋಹನ್‌ ಅವರಿಗೆ ಸಿಂಧನೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸದ್ಯ ಏಪ್ರಿಲ್ 17ರಂದು ಕಿರಾತಕರ ವಿರುದ್ಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version