Site icon Vistara News

Ramanagara Issue : ರಾಮನಗರ ವಿವಾದ; ವಕೀಲರಿಂದ ಫೆ. 22ರಂದು ಬೆಂಗಳೂರಿನಲ್ಲಿ ಬೃಹತ್‌ ರ‍್ಯಾಲಿ

Ramanagara issue protest by Lawyers

ಬೆಂಗಳೂರು: ರಾಮನಗರದಲ್ಲಿ ಜಿಲ್ಲಾ ವಕೀಲರ ಸಂಘದ (Ramanagara Lawyers) 40 ಮಂದಿ ವಕೀಲರ ವಿರುದ್ಧ ಪಿಎಸ್‌ಐ ತನ್ವೀರ್‌ ಹುಸೇನ್‌ (PSI Tanveer Husssain) ಅವರು ಪ್ರಕರಣ ದಾಖಲಿಸಿಕೊಂಡಿರುವುದನ್ನು ಆಕ್ಷೇಪಿಸಿ ಮತ್ತು ಪಿಎಸ್‌ಐ ಅಮಾನತಿಗೆ ಆದೇಶಿಸಿ ಫೆ. 22ರಂದು (ಗುರುವಾರ) ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ (Massive Protest in Bangalore) ನಡೆಸಲು ವಕೀಲರು ನಿರ್ಧರಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ವಕೀಲರು ಪ್ರತಿಭಟನೆ ನಡೆಸುತ್ತಿದ್ದು, ಅದು ದಿನಕ್ಕೊಂದು ಸ್ವರೂಪವನ್ನು ಪಡೆಯುತ್ತಿದೆ (Ramanagara Issue). ರಾಜ್ಯ ವಿಧಾನಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ಜಟಾಪಟಿಗೆ ಕಾರಣವಾಯಿತು.

ವಿವಾದದ ಕೇಂದ್ರ ಬಿಂದುವಾಗಿರುವ ಎಸ್‌ಡಿಪಿಐ ಕಾರ್ಯಕರ್ತ, ವಕೀಲ ಚಾಂದ್‌ ಪಾಷಾನನ್ನು ಗಡಿಪಾರು ಮಾಡಬೇಡಕು, ಐಜೂರು ಠಾಣೆಯ ಪಿಎಸ್‌ಐ ತನ್ವೀರ್‌ ಹುಸೇನ್‌ ಅವರನ್ನು ಅಮಾನತು ಮಾಡಬೇಕು ಎಂಬ ಆಗ್ರಹದೊಂದಿಗೆ ಮಂಗಳವಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ಇತ್ತ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ರಾತ್ರಿಯಿಂದ ವಕೀಲರ ಪ್ರತಿಭಟನೆ ಮುಂದುವರಿದಿದೆ.

Ramanagara Issue ಏನಿದು ರಾಮನಗರ ಚಾಂದ್‌ ಪಾಷಾ ಪ್ರಕರಣ?

  1. ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅಲ್ಲಿನ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ಅವಕಾಶ ಕಲ್ಪಿಸಿ ಆದೇಶ ಮಾಡಿತ್ತು. ಇದನ್ನು ಆಕ್ಷೇಪಿಸಿ ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಎಸ್‌ಡಿಪಿಐ ಮುಖಂಡ ಚಾಂದ್‌ ಪಾಷಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
  2. ಪಾಷಾ ಪೋಸ್ಟ್‌ ಗಮನಿಸಿದ ಬಿಜೆಪಿ ಮುಖಂಡ ಪಿ ಶಿವಾನಂದ ಅವರು ಪಾಷ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಪ್ರಕರಣ ದಾಖಲಾಗಿತ್ತು.
  3. ಪಾಷಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘವು ಅವರ ವಿರುದ್ಧ ಕ್ರಮ ಕೈಗೊಳ್ಳಲು ಫೆಬ್ರವರಿ 6ರಂದು ಸಂಜೆ ಸರ್ವ ಸದಸ್ಯರ ಸಭೆ ಕರೆದಿತ್ತು.
  4. ಈ ನಡುವೆ ದಲಿತ ಮತ್ತು ಪ್ರಗತಿಪರ ಮುಖಂಡರ ನಿಯೋಗವು ರಾಮನಗರ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವಂತೆ ಮನವಿ ಸಲ್ಲಿಸಲು ಆಗಮಿಸಿತು.
  5. ಚಾಂದ್‌ ಪಾಷಾ ಪರವಾಗಿ ಬಂದಿದ್ದ ಮುಖಂಡರು ಮತ್ತು ವಕೀಲರ ನಡುವೆ ವಾಗ್ವಾದ ನಡೆಯಿತು. ಸೌಹಾರ್ದಯುತ ಮಾತುಕತೆ ಜಗಳವಾಯಿತು.
  6. ದಲಿತ ಮತ್ತು ಪ್ರಗತಿಪರ ಮುಖಂಡರು ನ್ಯಾಯಾಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ, ವಕೀಲರ ಸಂಘದ ಅಧ್ಯಕ್ಷರು ಫೆ. 6ರಂದು ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು.
  7. ವಕೀಲರ ಸಂಘದ ದೂರಿನ ಮೇರೆಗೆ ಪಾಷಾ ಮತ್ತು 40 ಮುಖಂಡರ ವಿರುದ್ಧ ಐಜೂರು ಠಾಣೆ ಪಿಎಸ್‌ಐ ತನ್ವೀರ್ ಹುಸೇನ್ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
  8. ಫೆ. 7ರಂದು ವಕೀಲರ ಜತೆಗೆ ಮಾತುಕತೆಗೆ ತೆರಳಿದ್ದ ದಲಿತ ಮತ್ತು ಪ್ರಗತಿಪರರ ತಂಡದಲ್ಲಿದ್ದ ರಫೀಕ್ ಖಾನ್ ಎಂಬುವರು ಐಜೂರು ಠಾಣೆಗೆ ಒಂದು ದೂರನ್ನು ನೀಡಿ ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
  9. ರಫೀಕ್‌ ಖಾನ್‌ ನೀಡಿದ ದೂರಿನ ಮೇರೆಗೆ ಪಿಎಸ್‌ಐ ತನ್ವೀರ್‌ ಹುಸೇನ್‌ ಅವರು 40 ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರು.
  10. ತಮ್ಮ ಮೇಲೆ ಕೇಸ್‌ ಹಾಕಿರುವುದರಿಂದ ಕೆರಳಿದ ವಕೀಲರು ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ., ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ.
  11. ವಕೀಲರ ಈ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ಬೆಂಬಲ ನೀಡಿವೆ. ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ವಕೀಲರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

Ramanagara Issue ವಿಧಾನಸಭೆಯಲ್ಲಿ ಗೃಹ ಸಚಿವರು ಹೇಳಿದ್ದೇನು?

ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ತನ್ವೀರ್‌ ಹುಸೇನ್‌ ಅಮಾನತು ಆಗ್ರಹಿಸಿ ಪ್ರತಿಭಟನೆ ನಡೆಸಿದ ವೇಳೆ ಗೃಹ ಸಚಿವ ಪರಮೇಶ್ವರ್‌ ಅವರು ವಿಧಾನಸಭೆಯಲ್ಲಿ ಉತ್ತರ ನೀಡಿದ್ದು ಹೀಗೆ: ನ್ಯಾಯಾಧೀಶರ ವಿರುದ್ಧ ಪೋಸ್ಟ್‌ ಹಾಕಿದ ಚಾಂದ್‌ ಪಾಷಾ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಪಿಎಸ್‌ಐ ಸಯ್ಯದ್‌ ತನ್ವೀರ್‌ ಹುಸೇನ್‌ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಅದಾಗ್ಯೂ, ತನಿಖೆ ನಡೆಸಿ, ವರದಿ ನೀಡುವಂತೆ ಚನ್ನಪಟ್ಟಣ ಡಿವೈಎಸ್‌ಪಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು.

ಇದರ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ವಕೀಲರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಸೌಹಾರ್ದಯುತ ಮಾತುಕತೆಗೆ ಬಂದರೆ ಪ್ರಕರಣವನ್ನು ಬಗೆಹರಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Budget Session 2024: ಸದನದಲ್ಲಿ ರಾಮನಗರ ಗದ್ದಲ; ಪಿಎಸ್‌ಐ ಸಸ್ಪೆಂಡ್‌ಗೆ ಬಿಜೆಪಿ – ಜೆಡಿಎಸ್‌ ಪಟ್ಟು!

ದಲಿತ ಮುಖಂಡರಿಂದ ತಮಟೆ ಚಳುವಳಿ

ಈ ನಡುವೆ ದಲಿತ ಮತ್ತು ಪ್ರಗತಿಪರ ಮುಖಂಡರು ಕೂಡಾ ತನ್ವೀರ್‌ ಹುಸೇನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಮಾತನಾಡಲು ಫೆಬ್ರವರಿ 6ರಂದು ಜಿಲ್ಲಾ ವಕೀಲರ ಸಂಘದ ಬಳಿ ತೆರಳಿದ್ದ ದಲಿತ ಮುಖಂಡರು ವಕೀಲರ ವಿರುದ್ಧ ಜಾತಿನಿಂದನೆ ಆರೋಪ ಮಾಡಿದ್ದಾರೆ. ಪಿಎಸ್‌ಐ ಅವರು ಇದರ ಬಗ್ಗೆ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ರಾಮನಗರದಲ್ಲಿ ತಮಟೆ ಚಳವಳಿ ನಡೆಸಲಾಯಿತು.

Exit mobile version