Site icon Vistara News

Bangalore South: ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ: ಡಿ.ಕೆ.ಶಿವಕುಮಾರ್‌

DK Shivakumar in Press meet

ಬೆಂಗಳೂರು: ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ (Bangalore South) ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಹಿಂದೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದವು. ತದನಂತರ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಯಿತು ಎಂದು ಹೇಳಿದ್ದಾರೆ.

ನಂತರ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಒಳಗೊಂಡಂತೆ ಬೆಂಗಳೂರು ಗ್ರಾಮಂತರ ಜಿಲ್ಲೆಯನ್ನಾಗಿ ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಹೆಸರನ್ನು ಹಾಗೇ ಉಳಿಸಿಕೊಳ್ಳಲಾಯಿತು.

ಇದನ್ನೂ ಓದಿ | Kanakapura Row : ನಾನು ಬೆಂಗಳೂರಿಗ, ಏನೀಗ?; ಕನಕಪುರ ಸೇರ್ಪಡೆ ಹೇಳಿಕೆ ಸಮರ್ಥಿಸಿದ ಡಿಕೆಶಿ

ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಯಿತು. ರಾಮನಗರ ಜಿಲ್ಲಾ ಕೇಂದ್ರವಾಯಿತು. ಈಗ ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಿಗೆ ಲಭ್ಯ ಆಗಬೇಕೆಂಬುದು ಜನರ ಆಶಯ ಮತ್ತು ನನ್ನ ಚಿಂತನೆಯೂ ಕೂಡ ಆಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣಕ್ಕೆ ರಾಮನಗರ ಜಿಲ್ಲಾ ಕೇಂದ್ರ

ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ, ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಇರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಜನರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದ್ದಾರೆ.

ರಾಮನಗರದ ಜಿಲ್ಲೆ ಬೆಂಗಳೂರಿಗೆ ಸೇರಿದ್ದು, ಕುಮಾರಸ್ವಾಮಿಗೆ ಸಾಮಾನ್ಯ ಪರಿಜ್ಞಾನ ಇಲ್ಲ: ಡಿಕೆಶಿ

ಬೆಂಗಳೂರು: ರಾಮನಗರ ಬೆಂಗಳೂರಿನ ಭಾಗ. ನಂತರ ಅದು ಗ್ರಾಮಾಂತರ ಆಗಿ, ಈಗ ಪ್ರತ್ಯೇಕ ಜಿಲ್ಲೆ ಆಗಿದೆ. ಕುಮಾರಸ್ವಾಮಿಗೆ ಸಾಮಾನ್ಯ ಪರಿಜ್ಞಾನ ಇಲ್ಲವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕನಕಪುರ ಬೆಂಗಳೂರಿಗೆ ಸೇರಿದ್ದು ಎಂಬ ತಮ್ಮ ಹೇಳಿಕೆಗೆ ಕುಮಾರಸ್ವಾಮಿ ಟೀಕೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದವರು, ಅವರಿಗೆ ಸಾಮಾನ್ಯ ಪರಿಜ್ಞಾನ ಇದೆ ಎಂದು ಭಾವಿಸಿದ್ದೆ. ಆದರೆ ಇಲ್ಲ. ಇಂತಹ ವಿಚಾರವಾಗಿ ಅವರ ತಂದೆ ಅವರನ್ನಾದರೂ ಕೇಳಿ ಅವರು ಟ್ವೀಟ್ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿರಿಯರಾದ ದೇವೇಗೌಡರಿಗೆ ರಾಮನಗರದಲ್ಲಿ ಇರುವವರು ಯಾರು? ರಾಮನಗರ ಜಿಲ್ಲೆ ಇತಿಹಾಸವೇನು ಎಂಬುದು ಗೊತ್ತಿದೆ. ಕುಮಾರಸ್ವಾಮಿ ಮಾತನಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಭಾಗದ ಅಭಿವೃದ್ಧಿಗೆ ನಮ್ಮ ಬಳಿ ನೀಲನಕ್ಷೆ ಇದೆ. ಅಧಿಕಾರದಲ್ಲಿ ಇದ್ದಾಗ ನಾನು ಹಾಗೂ ನಮ್ಮ ಸರ್ಕಾರ ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ. ರಾಮನಗರ ಜಿಲ್ಲೆ ಮಾಡಿದ್ದು, ಮೂರು ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಕುಮಾರಸ್ವಾಮಿ ಕ್ರೆಡಿಟ್ ತೆಗೆದುಕೊಳ್ಳಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಮನಗರದ ನಾಲ್ಕೈದು ತಾಲೂಕು ಬೆಂಗಳೂರಿನದ್ದು. ಈ ಬಗ್ಗೆ ಕುಮಾರಸ್ವಾಮಿ ದಾಖಲೆ ತೆಗೆಸಿ ನೋಡಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Kanakapura Row : ರಾಮನಗರದಲ್ಲಿ ‘ರಾಮ‌’ ಇರೋದಕ್ಕೆ ಡಿಕೆಶಿಯಿಂದ ವಿರೋಧವೇ? ಸಿ.ಪಿ. ಯೋಗೇಶ್ವರ್‌ ಖಡಕ್‌ ಪ್ರಶ್ನೆ

ಶ್ರೀ ಬಾಲಗಂಗಧರನಾಥ ಸ್ವಾಮೀಜಿ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಗಳು, ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಅವರು ರಾಮನಗರ ಜಿಲ್ಲೆಯವರು. ಮೂಲತಃ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಆಡಳಿತಾತ್ಮಕ ದೃಷ್ಟಿಯಿಂದ, ನಂತರ ಇದು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಆಯಿತು. ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರದಲ್ಲಿ ಕೋವಿಡ್ ನಂತರ ಅನೇಕರು ತಮ್ಮ ಆಸ್ತಿ ಮಾರಿಕೊಳ್ಳುತ್ತಿದ್ದಾರೆ. ರಾಮನಗರ, ಮಾಗಡಿ, ಚನ್ನಪಟ್ಟಣದ ಜನರಿಗೂ ನಾನು ಆಸ್ತಿ ಮಾರಿಕೊಳ್ಳಬೇಡಿ ಎಂದು ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ.

ನಾನು ಮೊದಲು ಸಾತನೂರಿನಲ್ಲಿದ್ದೆ. ಕನಕಪುರಕ್ಕೆ ಬಂದ ನಂತರ ಇಲ್ಲಿನ ಭೂಮಿಯ ಮೌಲ್ಯ ಎಷ್ಟು ಏರಿಕೆಯಾಗಿದೆ, ಏನು ಬದಲಾವಣೆ ಆಗಿದೆ ಎಂದು ನಮಗೆ ಗೊತ್ತಿದೆ. ನಿಮಗೆ ಇತಿಹಾಸ ಎಷ್ಟು ಗೊತ್ತಿದೆಯೊ ನನಗೆ ತಿಳಿದಿಲ್ಲ. ಕನಕಪುರ ಲೋಕಸಭಾ ಕ್ಷೇತ್ರ ಎಂದು ಆ ಕಾಲದಲ್ಲಿ ಯಾಕೆ ಇಟ್ಟರು? ಈಗ ಏಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಎಂದು ಚುನಾವಣಾ ಆಯೋಗದವರು ಹೆಸರು ಇಟ್ಟಿದ್ದಾರೆ? ಯಾವುದಾದರೂ ಬೇರೆ ಹೆಸರು ಇಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಹೊಸಕೋಟೆ, ದೇವನಹಳ್ಳಿ, ಮಾಗಡಿ, ಆನೇಕಲ್, ಚನ್ನಪಟ್ಟಣ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ ಇದೆಲ್ಲಾ ಮೂಲತಃ ಬೆಂಗಳೂರು ಜಿಲ್ಲೆ. ಈ ಊರನ್ನು ಕಟ್ಟಿದ್ದು, ಹೆಸರನ್ನು ಕೊಟ್ಟಿದ್ದು ಕೆಂಪೇಗೌಡರು. ವಿಧಾನಸೌಧ ಕಟ್ಟಿದ್ದು ಕೆಂಗಲ್ ಹನುಮಂತಯ್ಯ ಅವರು. ಈ ಹೆಸರನ್ನು ಉಳಿಸಬೇಕೆಂಬುದು ನಮ್ಮ ಭಾವನೆ. ಕುಮಾರಸ್ವಾಮಿ ಅವರು ಈ ಭಾಗಕ್ಕೆ ಬರಲಿಲ್ಲವೇ? ಇಲ್ಲಿ ಆಸ್ತಿ ತೆಗದುಕೊಂಡಿಲ್ಲವೇ? ನಾವು ಯಾವತ್ತಾದರೂ ತಕರಾರು ಮಾಡಿದ್ದೇವೆಯೇ? ವಿದ್ಯಾ ಕ್ಷೇತ್ರಕ್ಕೆ ನಮ್ಮ ಎಷ್ಟು ಆಸ್ತಿಯನ್ನು ದಾನ ಮಾಡಿದ್ದೇವೆ ಎನ್ನುವುದು ಏನಾದರೂ ನಿಮಗೆ ಗೊತ್ತಿದೆಯೇ? ನನ್ನ ಜನರು 1,23,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂಬುದು ಗೊತ್ತಿದೆಯೇ? ನನ್ನ ಖಾತೆಗೆ, ಬೇರೆಯವರ ಖಾತೆಗೆ ಏನು ಬರುತ್ತದೆ ಎನ್ನುವ ಬಗ್ಗೆ ಆನಂತರ ಮಾಹಿತಿ ನೀಡೋಣ ಎಂದರು.

ಇದನ್ನೂ ಓದಿ | Congress Politics : ಅಭಿವೃದ್ಧಿ ಬಗ್ಗೆ ಮಾಧ್ಯಮ ಚರ್ಚೆಗೆ ಬನ್ನಿ; ಎಚ್‌ಡಿಕೆಗೆ ಡಿಕೆಶಿ ಸವಾಲು

ವಿಧಾನಸೌಧದಲ್ಲಿ ಚರ್ಚೆಗೆ ಸಿದ್ಧ

ಯಾವ, ಯಾವ ತಾಲೂಕಿನಲ್ಲಿ ಏನೇನು ನಡೆದಿದೆ ಎಂಬುದು ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಇಲ್ಲಿ ಮಾಧ್ಯಮದಗಳ ಎದುರು ಚರ್ಚೆಯಾಗುವುದು ಬೇಡ. ಅಲ್ಲಿ ದಾಖಲಾಗಲಿ. ನೀವು ಸಿದ್ಧತೆ ಮಾಡಿಕೊಂಡು ಬನ್ನಿ, ನಾನು ಸಹ ಸಿದ್ಧತೆ ಮಾಡಿಕೊಂಡು ಬರುತ್ತೇನೆ‌. ನೀವು ಏನೇನು ಹೇಳಬೇಕೊ ಎಲ್ಲಾ ಹೇಳಿ, ಅದೆಷ್ಟು ಗಂಟೆಗಳ ಕಾಲ ಬೇಕಾದರೂ ಚರ್ಚೆ ನಡೆಯಲಿ. ನಾನು ಸಿದ್ಧನಿದ್ದೇನೆ ಎಂದು ಎಚ್‌.ಡಿ.ಕುಮಾರಸ್ವಾಮಿಗೆ ಡಿಕೆಶಿ ಸವಾಲು ಹಾಕಿದರು.

ಇದು ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಕ್ಷೇತ್ರದ ಸ್ವಾಭಿಮಾನಿಗಳ ಬದುಕಿನ ವಿಚಾರ. ನಾನು ಆ ಕ್ಷೇತ್ರವನ್ನು ಪ್ರತಿನಿಧಿಸುವವನು, ಆ ಕ್ಷೇತ್ರದ ಜನರ ಶ್ರೇಯಸ್ಸನ್ನು ಬಯಸುವುದು ನನ್ನ ಕರ್ತವ್ಯ. ನಾನು ಹೇಳಿದ ಈ ಭಾಗಗಳು ಬೆಂಗಳೂರದ್ದಲ್ಲವೇ? ಗೆಜೆಟಿಯರ್ ತೆಗೆದು ತೋರಿಸಲೆ? ಅವರಿಗೆ ಇತಿಹಾಸದ ಅರಿವಿಲ್ಲವೇ? ನನ್ನ ಮಾತಿನ ಅರ್ಥ ಕನಕಪುರವನ್ನು ಮಾತ್ರ ಬೆಂಗಳೂರಿಗೆ ಸೇರಿಸುತ್ತೇನೆ ಎಂದಲ್ಲ. ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣದ ನಾವೆಲ್ಲರೂ ಬೆಂಗಳೂರಿನವರು, ನಮ್ಮ ಆ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಅರ್ಥ ಎಂದು ತಿಳಿಸಿದರು.

ನಮ್ಮ ಊರಿನ ಹೆಸರು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ?

ಈ‌ ಮೊದಲು ಆ ಭಾಗದಲ್ಲಿ 2-3 ಲಕ್ಷಕ್ಕೆ ಜಮೀನು ಸಿಗುತ್ತಿತ್ತು. ನೀವು ರಾಮನಗರದಲ್ಲಿ ಜಮೀನು ತೆಗದುಕೊಂಡಿರಲ್ಲ ಕುಮಾರಣ್ಣ, ಅದಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ, ಎಷ್ಟಕ್ಕೆ ನೋಂದಣಿ ಆಗಿದೆ ಎಂದು ನಿಮ್ಮ ತಂದೆಯರನ್ನು ಕೇಳಿ ನೋಡಿ? ಈಗೆಷ್ಟು ಗೈಡೆನ್ಸ್ ವ್ಯಾಲ್ಯೂ ಇದೆ ಎಂಬ ಮಾಹಿತಿ ತೆಗೆದುಕೊಳ್ಳಿ. ನಮ್ಮ ಊರಿನ, ಬೆಂಗಳೂರಿನ ಹೆಸರನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಈ ಪ್ರಶ್ನೆಯನ್ನು ನಾನು ನಿಮಗೆ ಕೇಳುತ್ತಿಲ್ಲ, ನನ್ನ ಜನರಿಗೆ ಕೇಳುತ್ತಿದ್ದೇನೆ. ನಮ್ಮ ತಂದೆ ದೊಡ್ಡಾಲಹಳ್ಳಿ ಎಂದು ಹೆಸರಲ್ಲಿ ಸೇರಿಸಿದ್ದಾರೆ? ನನ್ನ ಹೆಸರಿನ ಪಕ್ಕ ‘ಡಿ.ಕೆ.’ ಎಂದು ಏಕೆ ಸೇರಿಸಿದ್ದಾರೆ? ನಿಮ್ಮ ಹೆಸರಿನ ಮುಂದೆ ‘ಎಚ್.ಡಿ’ ಎಂದು ಏಕೆ ಇಟ್ಟುಕೊಂಡಿದ್ದಿeರಿ? ದೇವೇಗೌಡರು ಎಂದು ತಂದೆ ಹೆಸರು ಏಕೆ ಸೇರಿಸಿಕೊಂಡಿರಿ? ಹರದನಹಳ್ಳಿ ಅಥವಾ ಹೊಳೆನರಸೀಪುರ ಎಂದು ಬದಲಾಯಿಸಿ ಕೊಳ್ಳಬಹುದಿತ್ತಲ್ಲವೇ ಎಂದು ಟೀಕಿಸಿದರು.

ಇದನ್ನೂ ಓದಿ | Kanakapura Row : ಒಡೆದು ಚೂರು ಮಾಡಲು ರಾಮನಗರವೇನು ಕಲ್ಲು ಬಂಡೆಯೇ?; ಎಚ್ಡಿಕೆ ಆಕ್ರೋಶ

If you forget the route, you will not get the fruit ಎಂಬಂತೆ ಎಲ್ಲರಿಗೂ ಅವರ ಊರು, ಆಚಾರ, ವಿಚಾರ, ಇತಿಹಾಸವನ್ನ ಕಾಪಾಡಬೇಕು ಎನ್ನುವ ಆಸೆಯಿರುತ್ತದೆ. ಈ ವಿಚಾರದಲ್ಲಿ ನಾನು ತೊಡಗಿಕೊಂಡಿದ್ದೇನೆ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾತನಾಡುತ್ತಾ ಹೋಗುತ್ತೇನೆ ಎಂದರು.

Exit mobile version