Site icon Vistara News

MySugar Factory: ಮೈಶುಗರ್ ಕಾರ್ಖಾನೆಗೆ ಬಾಕಿ ಇರುವ 17.42 ಕೋಟಿ ರೂ. ಬಿಡುಗಡೆ ಮಾಡಿ: ದಿನೇಶ್‌ ಗೂಳಿಗೌಡ

Release Rs 17.42 crore dues to MySugar factory says Dinesh Gooligowda

ಬೆಂಗಳೂರು: ಮೈಸೂರು ಸಕ್ಕರೆ ಕಾರ್ಖಾನೆಯ (MySugar Factory) ಪುನಶ್ಚೇತನಕ್ಕೆ ಮಂಜೂರಾಗಿರುವ ಹಣದಲ್ಲಿ ಬಾಕಿ ಉಳಿಕೆಯಾಗಿರುವ 17.42 ಕೋಟಿ ರೂಪಾಯಿಯನ್ನು ಶೀಘ್ರವೇ ಬಿಡುಗಡೆ ಮಾಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಶುಕ್ರವಾರ (ಮಾ. 31) ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಬರುವ ಜೂನ್‌ನಿಂದಲೇ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಲಿದೆ. ಇದೇ ವೇಳೆ ಕಾರ್ಖಾನೆಯಲ್ಲಿ ಮುಂಚಿತವಾಗಿ ಹಣದ ಅವಶ್ಯಕತೆ ಇರುತ್ತದೆ. ರೈತರಿಗೆ ಮುಂಗಡ ಪಾವತಿ ಸೇರಿದಂತೆ ಕಬ್ಬು ಅರೆಯುವ ಸಂಬಂಧ ಅನೇಕ ಖರ್ಚು ವೆಚ್ಚಗಳು ಇರುತ್ತವೆ. ಆದರೆ, ಇಂತಹ ಸಂದರ್ಭದಲ್ಲಿ ಬರಬೇಕಾದ ಅನುದಾನವು ಬಿಡುಗಡೆಯಾಗದೇ ಹೋದರೆ ರೈತರಿಗೆ ಬಹಳವೇ ತೊಂದರೆಯಾಗಲಿದೆ. ಹೀಗಾಗಿ ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ದಿನೇಶ್‌ ಗೂಳಿಗೌಡ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Karnataka Election: ಜೆಡಿಎಸ್‌, ಬಿಜೆಪಿಯ ತಲಾ ಒಂದು ವಿಕೆಟ್‌ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ

ಅಲ್ಲದೆ, ಜಿಲ್ಲೆಯಲ್ಲಿ 6112 ಎಕರೆ ಪ್ರದೇಶದಲ್ಲಿ 305600 ಮೆಟ್ರಿಕ್ ಟನ್ ಕಬ್ಬು ಬೆಳೆದ 3395 ರೈತರು 2023 ಮತ್ತು 24ನೇ ಸಾಲಿಗೆ ಕಬ್ಬು ಸರಬರಾಜು ಮಾಡಲು ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರೆಲ್ಲರೂ ಜೂನ್‌ನಿಂದಲೇ ಕಬ್ಬು ಪೂರೈಕೆಯನ್ನು ಪ್ರಾರಂಭಿಸಬಹುದಾಗಿದ್ದು, ಇವರಿಗೆ ಆ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ಹಣದ ಪಾವತಿಯಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಬಾಕಿ ಇರುವ ಅನುದಾನ ಬಿಡುಗಡೆಯಾಗಬೇಕಿದೆ ಎಂದು ದಿನೇಶ್‌ ಗೂಳಿಗೌಡ ಅವರು ಪತ್ರದ ಮೂಲಕ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಹಣಕಾಸು ಇಲಾಖೆಗೆ ಪತ್ರ ಬರೆದಿರುವ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ

ಮನವಿ ಪತ್ರದಲ್ಲೇನಿದೆ?

ಮಂಡ್ಯ ಜಿಲ್ಲೆಯ ಜನತೆಯ, ರೈತರ ಜೀವನಾಡಿಯಾಗಿರುವ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜೂನ್‌ ತಿಂಗಳಿನಲ್ಲೀಯೇ ಕಬ್ಬು ಅರೆಯುವ ಕೆಲಸವನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ಸಾಲಿನಲ್ಲಿ ಒಟ್ಟಾರೆ ಸುಮಾರು 6 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಫೆಬ್ರವರಿ, ಮಾರ್ಚ್‌ ಎರಡು ತಿಂಗಳಲ್ಲಿ 3 ಲಕ್ಷ ಟನ್‌ ಕಬ್ಬು ಸರಬರಾಜು ಮಾಡುವುದಾಗಿ ರೈತರು ಈಗಾಗಲೇ ಕಾರ್ಖಾನೆಯೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಾರ್ಖಾನೆಯಲ್ಲಿ ಯಂತ್ರಗಳ ರಿಪೇರಿ, ಹಾಗೂ ಕಬ್ಬು ನುರಿಸುವ ತಯಾರಿ ಕಾರ್ಯಕ್ಕೆ ಹಣಕಾಸಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈಗ ಸರ್ಕಾರದ ಸಹಕಾರ ಬಹಳ ಮುಖ್ಯವಾಗುತ್ತದೆ.

ಸ್ಥಗಿತಗೊಂಡಿರುವ ಮೈಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರವು ನಿರ್ಧರಿಸಿ, ಮುಂದಿನ ಎರಡು ವರ್ಷಗಳ ಕಾಲ ಪ್ರಾಯೋಗಿಕವಾಗಿ ಸರ್ಕಾರದ ವತಿಯಿಂದಲೇ ಕಾರ್ಖಾನೆಯನ್ನು ನಡೆಸಲಾಗುವುದು. ಕಾರ್ಖಾನೆಯ ಯಂತ್ರೋಪಕರಣ ದುರಸ್ತಿಗಾಗಿ 50 ಕೋಟಿ ರೂ.ಗಳನ್ನು ಒದಗಿಸುವುದಲ್ಲದೆ, ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳವನ್ನು ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಅದರಂತೆ ಯಂತ್ರೋಪಕರಣಗಳ ದುರಸ್ತಿ ಮತ್ತು ಓವ‌ರ್-ಹಾಲಿಂಗ್ ಕೆಲಸಗಳಿಗೆ, ಸಾಮಗ್ರಿ ಖರೀದಿ ಮತ್ತು ಗುತ್ತಿಗೆ ಕೆಲಸಗಳನ್ನು ಕೈಗೊಳ್ಳಲು, ಕಬ್ಬು ಕಟಾವು ಮಾಡುವ ಮೇಸ್ತ್ರಿಗಳಿಗೆ ಮುಂಗಡ ಹಣ ಪಾವತಿಸಲು, ನೌಕರರಿಗೆ ಸ್ವಯಂ ನಿವೃತ್ತಿ ಸೌಲಭ್ಯ ಪಾವತಿಸುವುದಕ್ಕಾಗಿ 32.58 ಕೋಟಿ ರೂ. ಅನುದಾನವನ್ನು ಇದುವರೆಗೆ ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದಿರುವ 17.42 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸುವ ಕ್ರಮವಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್‌ ಸಿಲಿಂಡರ್‌ ಲೀಕ್‌ ಆಗಿ 7 ಕಾರ್ಮಿಕರ ದಾರುಣ ಸಾವು

ಆದ್ದರಿಂದ ಈಗಾಗಲೇ ಸರ್ಕಾರ ನೀಡಿ ಬಜೆಟ್‌ನಲ್ಲಿ ಘೋಷಿಸಿದ್ದ 50 ಕೋಟಿ ರೂಪಾಯಿಯಲ್ಲಿ ಬಾಕಿ ಇರುವ 17.42 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಕೊಡಬೇಕು ಎಂದು ಮಂಡ್ಯ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಅವರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ದಿನೇಶ್ ಗೂಳಿಗೌಡ ಅವರು ಪತ್ರದ ಮೂಲಕ ಕೋರಿದ್ದಾರೆ.

Exit mobile version