Site icon Vistara News

Actor Darshan: ಒಂದಲ್ಲ, ಎರಡಲ್ಲ, 3 ಕೇಸ್‌ಗಳಲ್ಲಿ ದರ್ಶನ್‌ಗೆ ಸಂಕಷ್ಟ; ಆರೋಪ ಸಾಬೀತಾದರೆ ಯಾವ ಶಿಕ್ಷೆ?

Actor Darshan

Renukaswamy Murder: Murder, Kidnap Cases Will Punish Actor Darshan

ಬೆಂಗಳೂರು: ನಟನೆ, ಸಿನಿಮಾಗಳ ಜತೆಗೆ ವಿವಾದಗಳಿಂದಲೂ ಹೆಚ್ಚು ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ (Actor Darshan) ಅವರೀಗ ಗಂಭೀರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ (Renukaswamy) ಎಂಬ 28 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ, ದರ್ಶನ್‌ ಅವರ ವಿರುದ್ಧ ಕೊಲೆ, ಅಪಹರಣ ಹಾಗೂ ಸಾಕ್ಷ್ಯನಾಶ ಪ್ರಕರಣಗಳ ಸಂಕಷ್ಟ ಎದುರಾಗಿದ್ದು, ಆರೋಪ ಸಾಬೀತಾದರೆ ಇವರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್‌ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್‌ 364ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಿದ್ದಾರೆ. ಇನ್ನು ಗೋಡೌನ್‌ನಲ್ಲಿ ಇರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದಾದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಹಾಗಾಗಿ, ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಕೇಸ್‌ ದಾಖಲಾಗಲಿದೆ. ಇನ್ನು ಹತ್ಯೆ ಬಳಿಕ ಶವವನ್ನು ಬಿಸಾಕಿದ ಕಾರಣ ಸಾಕ್ಷ್ಯ ನಾಶದ ಪ್ರಕರಣವನ್ನೂ ಸೇರಿಸಲಾಗುತ್ತದೆ. ಹಾಗಾಗಿ, ಯಾವ ಪ್ರಕರಣಗಳಲ್ಲಿ ಆರೋಪ ಸಾಬೀತಾದರೂ ದರ್ಶನ್‌ ಅವರಿಗೆ ಜೈಲು ಶಿಕ್ಷೆಯಾಗಲಿದೆ. ಕೊಲೆ ಕೇಸ್‌ನಲ್ಲಿ ಆರೋಪ ಸಾಬೀತಾದರಂತೂ ಜೀವಾವಧಿ ಶಿಕ್ಷೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಕೊಲೆ ಪ್ರಕರಣದಲ್ಲಿ ಬಂಧನವಾದ ಆರೋಪಿಗಳು

  1. ಪವನ್: ದರ್ಶನ್ ಮನೆಯಲ್ಲಿ ಇರುವ ದರ್ಶನ್ ಅಪ್ತ, ಕಿಡ್ನ್ಯಾಪ್ ಮಾಡಲು ಹೇಳಿದ್ದವನು, ಪವಿತ್ರಾಗೂ ಆಪ್ತ
  1. ಪ್ರದೋಶ್: ಹೋಟೆಲ್ ಉದ್ಯಮಿ
  2. ನಂದೀಶ್: ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ ಕಿಡ್ನಾಪ್ ಮಾಡಿಕೊಂಡು ಕರೆತಂದವನು
  3. ಕೇಶವಮೂರ್ತಿ: ಪ್ರದೂಶ್ ಗೆಳೆಯ ಹಾಗೂ ಉದ್ಯಮಿ
  4. ರಾಘವೇಂದ್ರ : ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
  5. ಲಕ್ಷ್ಮಣ್‌
  6. ದೀಪಕ್
  7. ಕಾರ್ತಿಕ್
  8. ಪವಿತ್ರಾ ಗೌಡ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂಗೆ ಅಖಿಲ ಕರ್ನಾಟಕ ತೂಗುದೀಪ ಸೇನಾ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಘು ದರ್ಶನ್‌ ಎಂಬಾತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಳುಹಿಸಲು ದರ್ಶನ್‌ ಅವರು ರಘು ದರ್ಶನ್‌ ಅವರ ನೆರವು ಪಡೆದಿದ್ದರು ಎನ್ನಲಾಗಿದೆ. ಕೊಲೆ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದ ಸಂಚಿನ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್‌ ಕೈವಾಡವೇನು?

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ರೇಣುಕಾಸ್ವಾಮಿ ಮೇಲೆ ದರ್ಶನ್‌ ಅವರೇ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ನಂತರ ಶವವನ್ನು ಚರಂಡಿ ಬಳಿ ಎಸೆಯಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್‌; ಪೊಲೀಸರು ಹೇಳಿದ್ದೇನು?

Exit mobile version