Site icon Vistara News

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌, ಬೈಕ್‌ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಬಲಿ

sirsi accident

ಮಂಡ್ಯ: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ ಮತ್ತು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿ (Road accident), ಇಬ್ಬರು ಯುವಕರು ಸ್ಥಳದಲ್ಲೇ (Two bike riders dead) ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ (Mandya news) ಮದ್ದೂರು ತಾಲ್ಲೂಕಿನ ಮಾದರಹಳ್ಳಿ ಗ್ರಾಮದಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ.

ಮಂಡ್ಯದ ಎಸ್.ಡಿ.ಜಯರಾಮ್ ಬಡಾವಣೆಯ ನಿವಾಸಿಗಳಾಗಿರುವ ದಿಲೀಪ್ ಕುಮಾರ್ (22), ಶ್ರೀನಿವಾಸ್ (21) ಮೃತ ದುರ್ದೈವಿಗಳು. ಇವರಿಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದರು.

ದಿಲೀಪ್‌ ಮತ್ತು ಶ್ರೀನಿವಾಸ್‌ ಅವರು ಉದ್ಯೋಗಕ್ಕೆ ಹೋಗಿದ್ದರು. ತಡರಾತ್ರಿ ಅವರು ಕೆಲಸ ಮುಗಿಸಿ ಮರಳಿ ಬರುತ್ತಿದ್ದರು. ಯುವಕರು ಕೆ.ಎಂ.ದೊಡ್ಡಿ ಮಾರ್ಗವಾಗಿ ಮಂಡ್ಯಕ್ಕೆ ವಾಪಸ್ ಬರುವ ವೇಳೆ ಮಾದರಹಳ್ಳಿ ಗ್ರಾಮದ ಬಳಿ ಅವರ ಬೈಕ್‌ ಮತ್ತು ಎದುರಿನಿಂದ ಬರುತ್ತಿದ್ದ ಕಬ್ಬು ತುಂಬಿದ್ದ ಟ್ರಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರೂ ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ರಾತ್ರಿ ಹೊತ್ತು ರಸ್ತೆಯಲ್ಲಿ ವಾಹನ ದಟ್ಟಣೆ ಇಲ್ಲದಿರುವ ಹಿನ್ನೆಲೆಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿರುತ್ತವೆ. ಈ ಹಂತದಲ್ಲಿ ಎದುರಿನಿಂದ ಏನೇ ಬಂದರೂ ನಿಯಂತ್ರಣ ಸಾಧಿಸಲಾಗದೆ ಅಪಘಾತಗಳು ಸಂಭವಿಸುತ್ತವೆ.

ಅಪಘಾತ ಮತ್ತು ಇಬ್ಬರು ಯುವಕರ ಸಾವಿನ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಆಸ್ಪತ್ರೆಗೆ ತಲುಪಿಸಿದರು.

ಬೈಕ್‌-ಲಾರಿ ಅಪಘಾತದಲ್ಲಿ ಬೈಕ್‌ ಸವಾರ ಸಾವು

ಮೈಸೂರು: ಮಂಡ್ಯದ ಭೀಕರ ಅಪಘಾತದಂತೆ ತಿ. ನರಸೀಪುರದಲ್ಲಿ ನಡೆದ ಅಪಘಾತದಲ್ಲೂ ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಕೂಡಾ ಬೈಕ್‌ ಸವಾರರೇ ಆಗಿದ್ದಾರೆ.

ತಿ.ನರಸೀಪುರ ಪಟ್ಟಣದ ಕೆಇಬಿ ಕಚೇರಿ ಮುಂಭಾಗ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ರುದ್ರ (40) ಎಂಬವರು ಮೃತಪಟ್ಟಿದ್ದಾರೆ.

ರುದ್ರ ಅವರು ನರಸೀಪುರ ಪಟ್ಟಣದ ದಾಸನಾಯಕರ ಬೀದಿಯ ನಿವಾಸಿ.ಯಾಗಿದ್ದು ಉದ್ಯೋಗಕ್ಕೆ ತೆರಳುತ್ತಿದ್ದರು. ಆಗ ಬೈಕ್‌ ಡಿಕ್ಕಿ ಹೊಡೆದಿದೆ. ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಲಾರಿಯ ಎರಡು ಚಕ್ರಗಳು ಬೈಕ್ ಸವಾರನ ಮೇಲೆ ಹರಿದಿವೆ. ಸ್ಥಳಕ್ಕೆ ತಿ.ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Terrorists in Bengaluru: ಹಿಂದೂ- ಮುಸ್ಲಿಂ ಗಲಭೆ ಸೃಷ್ಟಿಗೆ ಉಗ್ರರ ಸ್ಕೆಚ್‌, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ!

Exit mobile version