Site icon Vistara News

ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್‌ ಮರ್ಡರ್‌; ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ರೌಡಿಶೀಟರ್‌

ಶಿವಮೊಗ್ಗ: ನಗರದ ವಿನೋಬ ನಗರದ ಪೋಲಿಸ್ ಚೌಕಿ ಬಳಿ ರೌಡಿಶೀಟರ್‌ ಹಂದಿಹಣ್ಣಿ (45) ಎಂಬಾತನನ್ನು ದುಷ್ಕರ್ಮಿಗಳು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದಾರೆ.

ಗುರುವಾರ ಬೆಳಗ್ಗೆ ಇನ್ನೋವಾ ಕಾರಿನಲ್ಲಿ ಬಂದ ಆರು ದುಷ್ಕರ್ಮಿಗಳು ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಕೊಲೆಯ ಹಿಂದೆ ಲೇಔಟ್‌ ವ್ಯವಹಾರದ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ನಗರದ ಸವರ್ಲೈನ್ ನಿವಾಸಿ ಹಂದಿ ಅಣ್ಣಿ ಹಲವಾರು ಕೊಲೆ ಪ್ರಕರಣಗಳ ಆರೋಪಿಯಾಗಿದ್ದ. ಈತನ ವಿರುದ್ಧ 2006ರಲ್ಲಿ ಗುರಾಯಿಸಿದ್ದಕ್ಕೆ ಲವ-ಕುಶ ಎಂಬ ಸಹೋದರರನ್ನು ಕೊಲೆ ಮಾಡಿದ ಆರೋಪವಿತ್ತು. ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಹಂದಿ ಅಣ್ಣಿ ಪತ್ರಕರ್ತ ರವಿ ಬೆಳಗೆರೆ ಮೂಲಕ ಪೊಲೀಸರಿಗೆ ಶರಣಾಗಿದ್ದ. ನಂತರ ಕೇಸು ಎದುರಿಸಿ ಖುಲಾಸೆಗೊಂಡಿದ್ದ ಹಂದಿ ಅಣ್ಣಿ ಜೈಲಿನಿಂದ ಹೊರಬಂದ ನಂತರ ಸಣ್ಣಪುಟ್ಟ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ. ಹೆಬ್ಬೆಟ್‌ ಮಂಜನ ಶಿಷ್ಯನಾಗಿದ್ದ ಹಂದಿ ಅಣ್ಣಿ, ಲೋಕಲ್ ರೌಡಿಗಳನ್ನು ಎದುರು ಹಾಕಿಕೊಂಡಿದ್ದ ಎನ್ನಲಾಗಿದೆ.

ಇತ್ತೀಚೆಗೆ ಲೇಔಟ್ ವ್ಯವಹಾರಕ್ಕೆ ಸಂಬಂಧಿಸಿ ಇನ್ನೊಬ್ಬ ರೌಡಿಶೀಟರ್ ನವುಲೆ ಆನಂದ್ ಜತೆ ಕಿರಿಕ್ ಮಾಡಿಕೊಂಡಿದ್ದ.
ಹೆಬ್ಬೆಟ್‌ ಮಂಜ ಮತ್ತು ನವುಲೆ ಆನಂದ ನಡುವೆ ಲೇಔಟ್ ವಿಚಾರಕ್ಕೆ ಸಂಬಂಧಿಸಿ ವೈಮನಸ್ಸು ಇತ್ತು. ಹೀಗಾಗಿ ಹೆಬ್ಬೆಟ್‌ ಮಂಜ ಪರವಾಗಿ ನವುಲೆ ಆನಂದನ ಜತೆ ಹಂದಿ ಅಣ್ಣಿ ವಾಗ್ವಾದ ನಡೆಸಿದ್ದ. ಈ ವೇಳೆ ಇನ್ನೊಬ್ಬರ ವ್ಯವಹಾರದಲ್ಲಿ ಮಧ್ಯೆ ಪ್ರವೇಶಿಸದಂತೆ ಹಂದಿ ಅಣ್ಣಿಗೆ ನವುಲೆ ಆನಂದ ಎಚ್ಚರಿಸಿದ್ದ ಎನ್ನಲಾಗಿದೆ. ಹೀಗಾಗಿಯೇ ಕೊಲೆ ನಡೆಸಿರಬಹುದು ಎಂಬ ಅನುಮಾನಗಳು ಮೂಡಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿನೋಬ ನಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Kickboxing Death | ಬೆಂಗಳೂರಿನಲ್ಲಿ ಒಂದೇ ಏಟಿಗೆ ರಿಂಗ್‌ನಲ್ಲೇ ಬಾಕ್ಸರ್‌ ಸಾವು

Exit mobile version