Site icon Vistara News

Savarkar Issue | ಸಿದ್ದರಾಮಯ್ಯ ಕಾರಿಗೆ ಮಡಿಕೇರಿಯಲ್ಲಿ ಮೊಟ್ಟೆ ಎಸೆತ, ಕಪ್ಪು ಪಟ್ಟಿ ಪ್ರದರ್ಶನ!

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ 2

ಕೊಡಗು/ಮೈಸೂರು: ಮುಸ್ಲಿಂ ಪ್ರದೇಶಗಳಲ್ಲಿ ಸಾವರ್ಕರ್‌ ಫೋಟೊವನ್ನು (Savarkar Issue) ಯಾಕೆ ಹಾಕಬೇಕಿತ್ತು ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಈಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಮಳೆ ಹಾನಿ ಪ್ರದೇಶಗಳಿಗೆ ಅವರ ಕೊಡಗು ಪ್ರವಾಸಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಇನ್ನೊಂದೆಡೆ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದಾರೆ.

ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಮುಖಾಮುಖಿಯಾಗಿದ್ದಾರೆ. ಈ ಸಂಬಂಧ ಉದ್ವಿಗ್ನ ವಾತಾವರಣ ನಿರ್ಮಾಣ ನಿರ್ಮಾಣವಾಗಿದೆ. ಅಲ್ಲದೆ, ಹಿಂದುಪರ ಸಂಘಟನೆ ಕಾರ್ಯಕರ್ತರಿಂದ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆಯಲಾಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಾದ ಮದೆ ಪಂಚಾಯಿತಿಯ 2ನೇ ಮೊಣ್ಣಂಗೇರಿ ಸೇರಿದಂತೆ ವಿವಿಧೆಡೆ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ. ಒಂದು ದಿನ ಕೊಡಗು ಪ್ರವಾಸ ಕೈಗೊಂಡಿದ್ದಾರೆ. ಈ ನಡುವೆ ಆನೆ ಚೌಕೂರು ಗೇಟ್ ಬಳಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಕಾಂಗ್ರೆಸ್‌ನಿಂದ ಅದ್ಧೂರಿ ಸ್ವಾಗತ ಸಿಕ್ಕಿದ್ದರೆ, ಬಿಜೆಪಿ ಕಪ್ಪು ಪಟ್ಟಿ ಧರಿಸಿ ಗೋ ಬ್ಯಾಕ್‌ ಘೋಷಣೆ ಕೂಗಿದೆ.

ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ತಿತಿಮತಿ ಬಳಿ ಕಪ್ಪು ಬಾವುಟ
ಸಿದ್ದರಾಮಯ್ಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಬಳಿ ಬಂದಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಕಾರು ಬಂದಾಗ ಎಲ್ಲರೂ ದಿಕ್ಕಾರ ಕೂಗಿದ್ದಾರೆ. ಇನ್ನು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ.

ಇದನ್ನೂ ಓದಿ | Karnataka Politics | ಬಿಜೆಪಿ ಸೇರುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದೇನೆ; ಶ್ರೀರಾಮುಲು

ಸಿದ್ದರಾಮಯ್ಯ ಹೋದಲ್ಲೆಲ್ಲ ಆಕ್ರೋಶ
ಸಾವರ್ಕರ್ ವಿರುದ್ಧದ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ, ಹಿಂದು ಸಂಘಟನೆಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೋದ ಕಡೆಗಳೆಲ್ಲ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ಎಸ್.ಟಿ.ಸೋಮಶೇಖರ್ ತಿರುಗೇಟು
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಾತಿಗೆ ತೂಕ ಇತ್ತು. ಆದರೆ, ಈಗ ಅದನ್ನು ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಇತ್ತೀಚೆಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಮುಂದೆ ಈ ರೀತಿ ಹೇಳಿಕೆಗಳನ್ನು ನೀಡದೇ ಇರಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥಿಸುತ್ತೇನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.

ಅಲ್ಲದೆ, ಸಿದ್ದರಾಮಯ್ಯ ಅವರ ನೆರೆ ಹಾನಿ ವೀಕ್ಷಣೆ ಬಗ್ಗೆಯೂ ಸಚಿವರು ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರಿಗೆ ಈಗ ಪುರುಸೊತ್ತಾಗಿರಬೇಕು. ಅದಕ್ಕಾಗಿ ಇಷ್ಟು ತಡವಾಗಿ ಹೋಗುತ್ತಿದ್ದಾರೆ. 15 ದಿನಗಳಿಂದ ಅವರು ವೀಕ್ಷಣೆಗೆ ಹೋಗಿಲ್ಲ. ಅವರಿಗೆ ಸರ್ಕಾರದ ಕಾರು ಸೇರಿದಂತೆ ಎಲ್ಲ ಸವಲತ್ತುಗಳೂ ಇವೆ. ಅವರೇ ಮೊದಲು ಹೋಗಿ ಸರ್ಕಾರದ ಗಮನ ಸೆಳೆಯಬೇಕಿತ್ತು. ಈಗ ಸರ್ಕಾರ ಎಲ್ಲ ಪರಿಹಾರ ಕೊಟ್ಟ ಮೇಲೆ ಏಕೆ ಹೋಗುತ್ತಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ | Shivamogga Clash | ಸಿದ್ದರಾಮಯ್ಯ ಪ್ರಚೋದನೆಯೇ ಸಾವರ್ಕರ್‌ ಬಗ್ಗೆ ವಿರೋಧ ಹೆಚ್ಚಲು ಕಾರಣ ಎಂದ ಆರಗ

Exit mobile version