Site icon Vistara News

Sexual Harrassment | ಲೈಂಗಿಕ ಕಿರುಕುಳ ನೀಡಲು ಬಂದ ಶಿಕ್ಷಕನ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿನಿಯರು!

Sexual Harrassment in mandya hostel

ಮಂಡ್ಯ: ಲೈಂಗಿಕ ಕಿರುಕುಳ (Sexual Harrassment) ನೀಡಲು ಬಂದ ಶಿಕ್ಷಕನ ಅಟ್ಟಾಡಿಸಿ ವಿದ್ಯಾರ್ಥಿನಿಯರು ಹೊಡೆದಿರುವ ಘಟನೆ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.

ಬಂಧಿತ ಶಿಕ್ಷಕ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದಾರೆ. ಕಟ್ಟೇರಿ ಗ್ರಾಮದ ಪ್ರೌಢಶಾಲೆ ಹಾಗೂ ಹೆಣ್ಣು ಮಕ್ಕಳ ವಸತಿ ಶಾಲೆಯ ಉಸ್ತುವಾರಿ ಚಿನ್ಮಯಾನಂದ ಬಂಧಿತ ಆರೋಪಿ ಶಿಕ್ಷಕ.

ಕೈನಲ್ಲಿ ದೊಣ್ಣೆ ಹಿಡಿದ ವಿದ್ಯಾರ್ಥಿನಿಯರು

ಏನಿದು ಪ್ರಕರಣ?
ಬುಧವಾರ ತಡರಾತ್ರಿ ವಸತಿ ಶಾಲೆಗೆ ಬಂದ ಶಿಕ್ಷಕ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಜತೆಗೆ ಕೆಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಶಿಕ್ಷಕನ ವರ್ತನೆಗೆ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಕೈಗೆ ಸಿಕ್ಕ ದೊಣ್ಣೆ, ಪೊರಕೆಯಿಂದ ಧರ್ಮದೇಟು ಕೊಟ್ಟಿದ್ದಾರೆ. ವಿದ್ಯಾರ್ಥಿನಿಯರ ಏಟು ತಪ್ಪಿಸಿಕೊಳ್ಳಲು ಓಡಿ ಹೋಗಲು ಯತ್ನಿಸಿದ್ದಾಗ, ಹಾಸ್ಟೆಲ್‌ ಗೇಟ್ ಬಂದ್ ಮಾಡಿ ಮತ್ತಷ್ಟು ಥಳಿಸಿದ್ದಾರೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೇಳೆ ವಿದ್ಯಾರ್ಥಿನಿಯರು ಚೀರಾಟ, ಕೂಗಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕಾಗಮಿಸಿದ್ದಾರೆ. ಬಳಿಕ ಪೊಲೀಸರಿಗೆ ಫೋನ್ ಮಾಡಿ ಕಿರುಕುಳ ನೀಡಿದ ಶಿಕ್ಷಕನನ್ನು ಖಾಕಿಗೆ ಒಪ್ಪಿಸಿದ್ದಾರೆ.

ಸ್ಥಳೀಯರ ಆಕ್ರೋಶ
ಈ ಶಿಕ್ಷಕ ಹಾಸ್ಟೆಲ್‌ ಉಸ್ತುವಾರಿಯಾಗಿರಬಹುದು. ಸಂಜೆ ೫ ಗಂಟೆವರೆಗೆ ಮಾತ್ರ ಹಾಸ್ಟೆಲ್‌ನಲ್ಲಿ ಆತ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ರಾತ್ರಿ ೧೧ ಗಂಟೆ, ೧೨ ಗಂಟೆಯಾದರೂ ಆತ ಆಗಾಗ ಹಾಸ್ಟೆಲ್‌ಗೆ ಭೇಟಿ ನೀಡುತ್ತಲೇ ಇರುತ್ತಿದ್ದ. ನಾವು ಸ್ಥಳೀಯರು ಪ್ರಶ್ನೆ ಮಾಡಿದರೆ, ಯಾವುದೋ ದಾಖಲೆಗಾಗಿ ಬಂದಿದ್ದೇನೆ ಎಂಬಿತ್ಯಾದಿ ಸಬೂಬು ನೀಡುತ್ತಿದ್ದ. ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಬುಧವಾರ ರಾತ್ರಿ ವಿದ್ಯಾರ್ಥಿನಿಯರ ಕೂಗಾಟ ಕೇಳಿ ನಾವೆಲ್ಲ ಬಂದಾಗ ಈತನ ನಿಜಬಣ್ಣ ಬಯಲಾಗಿದೆ ಎಂದು ಹಾಸ್ಟೆಲ್‌ ಪಕ್ಕದ ನಿವಾಸಿ ವೆಂಕಟೇಶ್‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಶಿಕ್ಷಕನಿಗೆ ಚಳಿ ಬಿಡಿಸಿದ ವಿದ್ಯಾರ್ಥಿನಿಯರು

ಬಾಲಕಿರ ಧೈರ್ಯಕ್ಕೆ ಡಿಡಿಪಿಐ ಜವರೇಗೌಡ ಮೆಚ್ಚುಗೆ
ಈ ಸಂಬಂಧ ಕಟ್ಟೇರಿಯಲ್ಲಿ ಪ್ರತಿಕ್ರಿಯಿಸಿರುವ ಡಿಡಿಪಿಐ ಜವರೇಗೌಡ, ಆರೋಪಿ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಬಾಲಕಿಯರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಘಟನೆ‌ ಕುರಿತು ಸಮಿತಿ ರಚಿಸಲಾಗುವುದು. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಜತೆಗೆ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುವುದು. ಆರೋಪಿ ಶಿಕ್ಷಕನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.

ಹಾಸ್ಪೆಲ್‌ಗೆ ಭೇಟಿ ನೀಡಿದ ಶಾಸಕ ಸಿ.ಎಸ್‌.ಪುಟ್ಟರಾಜು
ಕಟ್ಟೇರಿ ಗ್ರಾಮದ ಆರ್‌ಎಂಎಸ್‌ವಿ ವಿದ್ಯಾರ್ಥಿನಿಲಯಕ್ಕೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದ ಶಾಸಕ ಸಿ.ಎಸ್.ಪುಟ್ಟರಾಜು, ಕಾಮುಕ ಶಿಕ್ಷಕನಿಗೆ ವಿದ್ಯಾರ್ಥಿನಿಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಜಿಲ್ಲೆಯಲ್ಲಿ ಇಂತಹ ಪ್ರಕರಣ ಮತ್ತೆ ನಡೆಯಬಾರದು. ಗುರುವಾರ ನಡೆಯುವ ಕೆಡಿಪಿ ಸಭೆಯಲ್ಲಿ ಹಾಗೂ ಸದನದಲ್ಲಿ ಈ ವಿಚಾರ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಶಿಕ್ಷಕ ವಶಕ್ಕೆ

Exit mobile version