Site icon Vistara News

Shivamogga violence : ಕೋಲಾರ, ಶಿವಮೊಗ್ಗ ಟೆಸ್ಟಿಂಗ್‌ ಡೋಸ್‌; ಪಿಕ್ಚರ್‌ ಅಭೀ ಬಾಕಿ ಹೈ ಎಂದ ಸಿ.ಟಿ ರವಿ

CT Ravi press meet

ಬೆಂಗಳೂರು: ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ (Karnataka to face Danger) ಕಾದಿದೆ. ಶಿವಮೊಗ್ಗ, ಕೋಲಾರ ಘಟನೆಗಳ ಮೂಲಕ ಟೆಸ್ಟಿಂಗ್ ಡೋಸ್ (Shivamogga, Kolara Test dose) ಕೊಟ್ಟಿದ್ದಾರೆ. ಈಗ ಪಿಕ್ಚರ್ ಅಭಿ ಬಾಕಿ ಹೈ (Picture Abhi Baki hai) ಎಂಬಂತೆ ಟ್ರೈಲರ್ ತೋರಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ. ರವಿ (CT Ravi) ಎಚ್ಚರಿಕೆ ನೀಡಿದರು. ಶಿವಮೊಗ್ಗ ಘಟನೆ (Shivamogga violence) ಹಿಂದೆ ದುರುದ್ದೇಶ ಇದ್ದಂತಿದೆ. ರಾಜ್ಯದ ಶಾಂತಿ ಹಾಳು ಮಾಡುವ ಉದ್ದೇಶ ಇದ್ದಂತಿದೆ. ಆದ್ದರಿಂದ ಈ ಘಟನೆಯ ನ್ಯಾಯಾಂಗ ತನಿಖೆಗೆ (Judicial Enquiry) ಆಗ್ರಹಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಅಬ್ದುಲ್ ಕಲಾಂ‌ ಜೊತೆ ಗುರ್ತಿಸಿಕೊಂಡರೆ ನೀವು ನಮ್ಮವರು. ಔರಂಗಜೇಬ್ ಜೊತೆ ಗುರ್ತಿಸಿಕೊಂಡ್ರೆ ಅಲ್ಲ. ಇಷ್ಟೆಲ್ಲಾ ಹತ್ಯೆ ಮಾಡಿದವರನ್ನು ಹೇಗೆ ಒಪ್ಪಲು ಸಾಧ್ಯ? ನೀವು ನಮ್ಮವರಾಗಲು ಇನ್ನೂ ಅವಕಾಶ ಇದೆ. ಯೋಚನೆ ಮಾಡಿ ನಿರ್ಧಾರ ಮಾಡಿ. ಇಲ್ಲದಿದ್ರೆ ಮನೆ ಮನೆಯಲ್ಲೂ ಶಿವಾಜಿ ಹುಟ್ಟಬೇಕಾಗುತ್ತದೆ ಎಂದು ಸರ್ಕಾರ ಹಾಗೂ ಗಲಭೆಯಲ್ಲಿ ಭಾಗಿಯಾದ ಮುಸ್ಲಿಂ ಸಮುದಾಯಕ್ಕೆ ಸಂದೇಶ ನೀಡಿದರು.

ಹಿಂದೂ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆ ತೆಗೆಯಿರಿ

ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು

ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹಾಕುತ್ತಿದ್ದೀರಿ. ಸಹಜ ಸಾವಿನ ಮಾಹಿತಿ ಇದ್ದರೂ ಪುನೀತ್ ಕೆರೆಹಳ್ಳಿ ಮೇಲೆ ಕೊಲೆ ಮೊಕದ್ದಮೆ ಹಾಕಿದ್ದೀರಿ. ವೇಶ್ಯಾವಾಟಿಕೆ ಮಾಡುತ್ತಿದ್ದ ಎಂದು ಸುಳ್ಳುವರದಿ ಕೊಟ್ಟಿದ್ದೀರಿ. ಪುನೀತ್ ಜೀವಕ್ಕೇನಾದರೂ ಆದರೆ ಈ ಪಾಪಿಷ್ಟ ಸರಕಾರವೇ ಹೊಣೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 140 ದಿನಗಳು ಕಳೆದಿವೆ. ಕೋಮುವಾದಿ ಶಕ್ತಿಗಳು ಸಾರ್ವಜನಿಕವಾಗಿ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಿದ್ದೇ ಈ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.

ಬಹುಶಃ ಋಣ ತೀರಿಸುವ ದೃಷ್ಟಿಯಿಂದ ತಾಲಿಬಾನಿಗಳನ್ನು ಬೆಂಬಲಿಸುವ ಕೆಟ್ಟ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಈ ಸರಕಾರದ ನಡೆ ಅನುಮಾನಾಸ್ಪದ ಮತ್ತು ದುರುದ್ದೇಶದ ಹಿನ್ನೆಲೆಯಿಂದ ಕೂಡಿದೆ ಎಂದು ಟೀಕಿಸಿದರು.

ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ಎಂದ ಸಿ.ಟಿ. ರವಿ

ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಸಂದರ್ಭದಲ್ಲಿ ಬೆಳವಾವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಭಟ್ಕಳದಲ್ಲಿ ಹಿಂದೂಗಳ ಹೆಣ ಎತ್ತಲು ಕೂಡ ಜನ ಇರಬಾರದು ಎಂದು ಮುಸ್ಲಿಮರೊಬ್ಬರು ಬರಹ ಬರೆದಿದ್ದರು. ಬೆಳಗಾವಿಯಲ್ಲಿ ಜೈನಮುನಿಯ ಭೀಕರ ಹತ್ಯೆ ಆಗಿದೆ. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ನಡೆದಿದೆ. ಫಲಿತಾಂಶ ಬಂದ ಮರುದಿನವೇ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ ಎಂದು ಸಿ.ಟಿ. ರವಿ ವಿವರಿಸಿದರು.

ಧಾರವಾಡದಲ್ಲಿ ಚುನಾವಣಾ ವಿಜಯೋತ್ಸವದ ಸಂದರ್ಭದಲ್ಲಿ ಚೂರಿ ಇರಿತ, ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಿಂದೂಗಳ ಬೈಕಿಗೆ ಬೆಂಕಿ ಹಾಕಿದ್ದಾರೆ. ಹಾಸನದಲ್ಲಿ ಪಿಸ್ತೂಲ್ ಹಿಡಿದು ಓಡಾಡಿ ಭಯ ಹುಟ್ಟಿಸುವ ಕೆಲಸ ನಡೆದಿದೆ. ಸಕಲೇಶಪುರದಲ್ಲಿ ಪರವಾನಗಿ ಇಲ್ಲದ ಬಂದೂಕು ಇಟ್ಟುಕೊಂಡು ಹಸುವಿನ ತಲೆ ಸೀಳಿ ಹತ್ಯೆ ಮಾಡಿದ್ದಾರೆ. ಕಡೂರಿನಲ್ಲಿ ವಿಘ್ನೇಶ್ ಎಂಬ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ನಂಜನಗೂಡಿನಲ್ಲಿ ಚಾಕುವಿನಿಂದ ಇರಿದು ಪರಾರಿ, ಬಾಗಲಕೋಟೆ ನವನಗರದಲ್ಲಿ ಬೀದಿ ದೀಪ ಬಂದ್ ಮಾಡಿ ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆದಿದೆ. ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಆದರೆ, ಅವರ ತವರು ಜಿಲ್ಲೆಯಲ್ಲಿ ಮತಾಂಧರ ಅಟ್ಟಹಾಸ ಮೆರೆಯಲು ಅವಕಾಶ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಟಿಪ್ಪು ಸಾಲದು ಅಂತ ಔರಂಗಜೇಬನನ್ನು ತಂದಿದ್ದಾರೆ!

ಸಿದ್ದರಾಮಯ್ಯನವರು ಮೊದಲ ಅವಧಿಯ ಸಿಎಂ ಆಗಿದ್ದಾಗ ಟಿಪ್ಪುವಿನ ಓಲೈಕೆ, ಸರಕಾರದಿಂದ ಟಿಪ್ಪು ಜಯಂತಿ ಆರಂಭಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರ ಸ್ಪರ್ಧೆಯಲ್ಲಿ ಈಗ ಸರ್ವ ಜನಾಂಗದ ಶಾಂತಿಯ ತೋಟದ ಶಾಂತಿ ಹಾಳು ಮಾಡಲು ಒಬ್ಬ ಟಿಪ್ಪು ಸಾಕಾಗುವುದಿಲ್ಲ ಎಂದು ಟಿಪ್ಪು ಜೊತೆ ಔರಂಗಜೇಬನ ವಿಜೃಂಭಣೆಗೆ ಅವಕಾಶ ಕೊಡುತ್ತಿದ್ದಾರೆ. ಮತಾಂಧರ ಮೆರೆಸುವ ಕೆಲಸಕ್ಕೆ ಈ ಸರಕಾರ ಬೆನ್ನೆಲುಬಾಗಿ ನಿಂತಿದೆ. ಪೊಲೀಸರ ಮೇಲೆ ಕಲ್ಲೆಸೆತ ಆದಾಗ ಎಸ್ಪಿಯೇ ಓಡಿಬರಬೇಕಾದ ಸ್ಥಿತಿ ಬರುತ್ತದೆ. ಗೃಹ ಸಚಿವ ಪರಮೇಶ್ವರರವರು ಇದೆಲ್ಲ ಸಾಮಾನ್ಯ ಎಂದು ಲಘುವಾಗಿ ತಳ್ಳಿ ಹಾಕುತ್ತಾರೆ ಎಂದು ಸಿ.ಟಿ. ರವಿ ಟೀಕಿಸಿದರು.

ಸಿದ್ದರಾಮಯ್ಯನವರೇ ಅವರು ನಿಮ್ಮ ರಕ್ತ ಕುಡೀತಾರೆ

ʻʻಟಿಪ್ಪು ಸುಲ್ತಾನ್ ಖಡ್ಗದಲ್ಲಿ ಏನು ಬರೆದಿದೆ? ಕಾಫೀರರ ರಕ್ತ ಬಯಸುತ್ತಿದೆ ಅಂತ ಬರೆದಿದೆ. ಕಾಫೀರರು ಅಂದ್ರೆ ಯಾರು ಸಿದ್ದರಾಮಯ್ಯ ಅವರೇ? ಮುಸ್ಲಿಂ ಹೊರತುಪಡಿಸಿ ಎಲ್ಲರೂ ಕಾಫೀರರೇ.. ನಾನು ಹಿಂದೂ ಅಂತ ನೀವು ಹೇಳಿಕೊಂಡಿದ್ದೀರಿ ಸಿದ್ದರಾಮಯ್ಯ ಅವರೇ. ಅವರು ನಿಮ್ಮ ರಕ್ತವನ್ನೂ ಕುಡಿಯಲು ಬಯಸುತ್ತಿದ್ದಾರೆʼʼ ಎಂದು ಹೇಳಿದ ಸಿ.ಟಿ. ರವಿ ಅವರು, ʻʻಭಗವಾಧ್ವಜ ಹಾಕಿದ್ರೆ ಅದಕ್ಕೆ ನೂರೆಂಟು ಪ್ರಶ್ನೆ ಹಾಕ್ತೀರಿ. ಇಲ್ಲಿ ಔರಂಗಜೇಬ್, ಟಿಪ್ಪು, ಖಡ್ಗ ಇಡೋಕೆ‌ ಯಾಕೆ ಅವಕಾಶ ಕೊಟ್ರಿʼ ಎಂದು ಪ್ರಶ್ನಿಸಿದರು.

ನೀವು ಶಿವಮೊಗ್ಗ, ಕೋಲಾರದಲ್ಲಿ ಖಡ್ಗ ಹಾಕಲು ಯಾಕೆ ಮತ್ತು ಹೇಗೆ ಅವಕಾಶ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದ ಸಿ.ಟಿ ರವಿ, ಉಡುಪಿಯಲ್ಲಿ ಭಗವಾಧ್ವಜ ಹಾಕಲು ಮತ್ತು ಬಂಟಿಂಗ್ಸ್ ಕಟ್ಟಿದಾಗ ತೆಗೆಸುತ್ತೀರಿ ಎಂದು ಆಕ್ಷೇಪಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಅ. ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Shivamogga Violence : ನಾವೇನು ಚಾಕು ಚೂರೀನಾ ಉಳ್ಳಾಗಡ್ಡಿ ಹಚ್ಚಲು ಇಟ್ಕೊಂಡಿದ್ದಾ? ; ಯತ್ನಾಳ್‌ ಪ್ರಶ್ನೆ

ಕಾಂಗ್ರೆಸ್‌ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳು

  1. ಇತಿಹಾಸದಲ್ಲಿ ಔರಂಗಜೇಬ್ ಒಬ್ಬ ಮತಾಂಧನಲ್ಲವೇ?
  2. ಗುರು ತೇಜ್ ಬಹದ್ದೂರರನ್ನು ಹತ್ಯೆ ಮಾಡಿದ ಕ್ರೂರಿ ಯಾರು? ಕಾಶಿ ವಿಶ್ವನಾಥ ಮಂದಿರವನ್ನು ಧ್ವಂಸ ಮಾಡಿದ ವಿಧ್ವಂಸಕ ಯಾರು? ಮಥುರಾದ ಕೃಷ್ಣ ಮಂದಿರವನ್ನು ಮತ್ತೆ 3ನೇ ಬಾರಿ ಧ್ವಂಸ ಮಾಡಿದ ಕಿರಾತಕ ಯಾರು? ನಿಮ್ಮ ಔರಂಗಜೇಬ್ ಅಲ್ಲವೇ? ಅವನನ್ನು ಮೆರೆಸುವ ಉದ್ದೇಶ ಏನು? ಪೈಗಂಬರರ ಶಾಂತಿಯ ಸಂದೇಶ ಇದೇನಾ?
  3. ಮುಸ್ಲಿಮೇತರರ ಮೇಲೆ ಜಜಿಯ ತಲೆಗಂದಾಯ ಹೇರಿದ ಒಬ್ಬ ಪಾಪಿಯನ್ನು ಪ್ರಜಾಪ್ರಭುತ್ವದಲ್ಲಿ ಡಾ.ಅಂಬೇಡ್ಕರರು ಕೊಟ್ಟ ಸಂವಿಧಾನಕ್ಕೆ ಅಪಮಾನ ಮಾಡುವಂತೆ ಪ್ರತಿಷ್ಠಾಪಿಸಲು ಅವಕಾಶ ಕೊಟ್ಟಿದ್ದೀರಾ? ಇದಕ್ಕೆಲ್ಲ ಹೊಣೆ ಯಾರು? ನೀವೇ ಹೊಣೆ ಹೊರಬೇಕಲ್ಲವೇ?
  4. ಭವಿಷ್ಯದಲ್ಲಿ ಅಫಜಲ್ ಗುರು, ಬಿನ್ ಲಾಡೆನ್, ಸದ್ದಾಂ ಹುಸೇನ್, ಮಹಮ್ಮದ್ ಆಲಿ ಜಿನ್ನಾನ ವೈಭವೀಕರಣ ನಡೆದರೂ ಅಚ್ಚರಿಯಿಲ್ಲ.
  5. ಔರಂಗಜೇಬ್, ಟಿಪ್ಪು ವೈಭವೀಕರಣದ ಉದ್ದೇಶ ಭಾರತದಲ್ಲಿ ಮತ್ತೊಂದು ವಿಭಜನೆಯ ಸಂಚಿಗೆ ಪ್ರೋತ್ಸಾಹವಲ್ಲವೇ?
  6. ಬಾಲ ಬಿಚ್ಚಿದರೆ ಬಾಲ ಕಟ್ ಮಾಡುವುದಾಗಿ ಮರಿ ಖರ್ಗೆಯವರು ಹೇಳುತ್ತಿದ್ದರು. ಬಾಲ ಕಟ್ ಮಾಡುವ ಪೌರುಷ ಎಲ್ಲಿ ಹೋಯಿತು? ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ನಿಮ್ಮ ಪೌರುಷವೇ? ನೀವೆಲ್ಲಿ ಅಡಗಿದ್ದೀರಿ?
  7. ಹಿಂದೂಗಳ ಮನೆಗೆ ನುಗ್ಗಿ ಹಲ್ಲೆ ಮಾಡಿದರೆ ಅದೊಂದು ಸಣ್ಣ ಘಟನೆಯಾಗಿ ಗೃಹ ಸಚಿವರಿಗೆ ಕಾಣುತ್ತದೆ. ಬಹಳ ವರ್ಷಗಳ ರಾಜಕೀಯ ಅನುಭವ ಇರುವ ಡಾ. ಪರಮೇಶ್ವರರನ್ನು ಯಾವ ದುರ್ಬಲತೆ ಕಾಡುತ್ತಿದೆ?
  8. 35 ಡಿಎಸ್ಪಿಗಳು, 138 ಇನ್‍ಸ್ಪೆಕ್ಟರ್‍ಗಳನ್ನು ವರ್ಗಾವಣೆ ಮಾಡುವ ಮೂಲಕ ನಾನೂ ಸಕ್ರಿಯ ಎಂದು ತೋರಿಸುವ ಕೆಲಸ ಮಾಡಿದ್ದಾರೆ ಗೃಹ ಸಚಿವ ಪರಮೇಶ್ವರ್.
  9. ಐಸಿಸ್‍ನವರು ಇದನ್ನೊಂದು ಲಾಂಚಿಂಗ್ ಪ್ಯಾಡ್ ಮಾಡಲು ಕರ್ನಾಟಕ- ಕೇರಳವನ್ನು ಉಪಯೋಗಿಸುತ್ತಿದ್ದಾರೆ ಎಂದು ಎನ್‍ಐಎ ಬಂಧಿತ ಉಗ್ರರಿಂದ ಸಿಕ್ಕಿದ ಮಾಹಿತಿ ನಿಮಗೆ ತಿಳಿದಿಲ್ಲವೇ?
  10. ಮಂಗಳೂರಲ್ಲಿ ಬ್ಲಾಸ್ಟ್ ಆದ ಕುಕ್ಕರನ್ನು ತೀರ್ಥಹಳ್ಳಿಯಲ್ಲೇ ತಯಾರಿಸಿದ್ದು ನಿಮಗೆ ತಿಳಿದಿಲ್ಲವೇ? ಘನತೆವೆತ್ತ ಡಿಸಿಎಂ ಅವತ್ತು ‘ದೆ ಆರ್ ಅವರ್ ಬ್ರದರ್ಸ್’ ಎಂದಿದ್ದರಲ್ಲವೇ? ಬಾಂಬ್ ಇಡುವವರು, ಔರಂಗಜೇಬನನ್ನು ಓಲೈಸುವವರು, ಮತಾಂಧರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಬೆಂಕಿ ಹಾಕಿದವರು ನಿಮ್ಮ ಬ್ರದರ್ಸಾ?

Exit mobile version