Site icon Vistara News

Karnataka Election 2023: ವರುಣದಲ್ಲಿ ಸಿದ್ದರಾಮಯ್ಯ ರೋಡ್‌ ಶೋ ಅಬ್ಬರ; ಮತ್ತೆ ಸಿಎಂ ಮಾತು

Siddaramaiah roadshow in Varuna wants to become CM again Karnataka Election 2023 updates

ಮೈಸೂರು: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎರಡನೇ ಸುತ್ತಿನ ಮತ ಬೇಟೆಗೆ ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಈಗಾಗಲೇ ಅಬ್ಬರ ಪ್ರಚಾರವನ್ನು ಶುರು ಮಾಡಿರುವ ಅವರಿಗೆ ಸಿನಿ ತಾರೆಯರ ಬಲ ಬಂದಿದೆ. ಇನ್ನು ಪ್ರಚಾರದ ಆರಂಭದಲ್ಲಿಯೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ನಾನು ಈ ಹಿಂದೆ ಸಿಎಂ ಆಗಿದ್ದೆ. ಈ ಬಾರಿ ಮತ್ತೆ ಅವಕಾಶ ಇದೆ. ನೀವೆಲ್ಲರೂ ಸೇರಿ ನನ್ನನ್ನು ಮತ್ತೆ ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಿಂದ ಪ್ರಚಾರ ಸಿದ್ದರಾಮಯ್ಯ ಪ್ರಚಾರವನ್ನು ಆರಂಭಿಸಿದ್ದಾರೆ. ಇದಕ್ಕೂ ಮುನ್ನ ರಾಮಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಪ್ರಚಾರದ ಆರಂಭದಲ್ಲೇ ಸಿಎಂ ಆಸೆ ಪ್ರಸ್ತಾಪ

ಪ್ರಚಾರದ ಆರಂಭದಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಿಎಂ ಆಸೆಯನ್ನು ಪ್ರಸ್ತಾಪ ಮಾಡಿದ್ದಾರೆ. ವರುಣ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಹಿಂದೆ ಸಿಎಂ ಆಗಿದ್ದೆ. ಈ ಬಾರಿ ಮತ್ತೆ ಅವಕಾಶ ಇದೆ. ನೀವೆಲ್ಲ ನನ್ನನ್ನೂ ಮತ್ತೆ ಗೆಲ್ಲಿಸಿ ಕಳುಹಿಸಿಕೊಡಬೇಕು. ಇಲ್ಲೇ ನೀವು ನಿಲ್ಲಬೇಕು ಅಂತಾ ಹೈಕಮಾಂಡ್ ನಿರ್ಧಾರ ಮಾಡಿ ಕಳುಹಿಸಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಈಗಾಗಲೇ ನಾವು ಕೊಟ್ಟಿರುವ 5 ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್‌ನಲ್ಲಿ ಈಡೇರಿಸುತ್ತೇವೆ. ನೀವೆಲ್ಲ ಈ ಹಿಂದೆ ಬೆಂಬಲಿಸಿದಂತೆಯೇ ಈ ಬಾರಿಯೂ ನನ್ನನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ವರುಣದ ರಾಂಪುರದಲ್ಲಿ ಸಿದ್ದರಾಮಯ್ಯ ಅವರ ರೋಡ್‌ ಶೋ

ನಟಿ ನಿಶ್ವಿಕಾ ನಾಯ್ಡು ಪ್ರಚಾರ

ಸಿದ್ದರಾಮಯ್ಯ ಪ್ರಚಾರಕ್ಕೆ ತಾರೆಯರ ಮೆರಗು ಬಂದಿದೆ. ವರುಣ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಸಿದ್ದರಾಮಯ್ಯ ಅವರ ಜತೆ ನಟಿ ನಿಶ್ವಿಕಾ ನಾಯ್ಡು ಪ್ರಚಾರ ನಡೆಸಿದ್ದಾರೆ. ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಜತೆ ಪ್ರಚಾರದಲ್ಲಿ ಭಾಗಿಯಾಗಿದ್ದು, ಜನರತ್ತ ಕೈಬೀಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರ ಮೇಲೆ ಪುಷ್ಪವೃಷ್ಟಿ ಸುರಿಸಿ ಗ್ರಾಮಸ್ಥರು ಬರಮಾಡಿಕೊಂಡಿದ್ದಾರೆ.

ಡಾ.ಶಿವರಾಜ್ ಕುಮಾರ್, ರಮ್ಯಾ, ದುನಿಯಾ ವಿಜಯ್ ಪ್ರಚಾರ

ಎರಡನೇ ಸುತ್ತಿನ ಮತ ಬೇಟೆಗೆ ಸಕಲ ಸಿದ್ಧತೆ. ನಡೆಸಿರುವ ಸಿದ್ದರಾಮಯ್ಯ, ಈ ಬಾರಿ ನಟ, ನಟಿಯರನ್ನು ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ ನಟರಾದ ಡಾ.ಶಿವರಾಜ್ ಕುಮಾರ್, ದುನಿಯಾ ವಿಜಯ್ ಹಾಗೂ ಮೋಹಕ ತಾರೆ ರಮ್ಯಾ ಸೇರಿದಂತೆ ಹಲವರು ನಟ-ನಟಿಯರಿಂದ ಪ್ರಚಾರ ನಡೆಸಲಾಗುತ್ತಿದೆ. ಅಲ್ಲದೆ, ಡಾ.ಯತೀಂದ್ರ ಸಿದ್ದರಾಮಯ್ಯ, ಮಧು ಬಂಗಾರಪ್ಪ, ಜಮೀರ್ ಅಹ್ಮದ್ ಖಾನ್, ಗೀತಾ ಶಿವಕುಮಾರ್ ಕೂಡ ಭಾಗಿಯಾಗಿದ್ದಾರೆ.

ವರುಣದಲ್ಲಿ ಸಿದ್ದರಾಮಯ್ಯ ಅವರ ಅಬ್ಬರದ ರೋಡ್‌ ಶೋ; ಜತೆಗೆ ನಿಶ್ವಿಕಾ ನಾಯ್ಡು ಸಾಥ್

ಇದನ್ನೂ ಓದಿ: Karnataka Election 2023: ಬಜರಂಗದಳ ಬಿಜೆಪಿಯದ್ದೇ ಸಂಘಟನೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಳಗ್ಗೆ ರಾಂಪುರ, ಗೊದ್ದನಪುರ, ಮರಳೂರು, ತಾಂಡವಪುರದಲ್ಲಿ ಮತಯಾಚನೆ ನಡೆಸಿರುವ ಸಿದ್ದರಾಮಯ್ಯ ಅವರು, ಮಧ್ಯಾಹ್ನ ಕೆಂಪಿಸಿದ್ದನಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸಂಜೆ ಸುತ್ತೂರು, ಬಿಳಿಗೆರೆ, ನಗರ್ಲೆ, ಮಲ್ಲೂಪುರದಲ್ಲಿ ಪ್ರಚಾರ ಮಾಡಲಿದ್ದಾರೆ.

Exit mobile version