Site icon Vistara News

Tragedy| ಟಿಪ್ಪರ್‌ ಡಿಕ್ಕಿಯಾಗಿ ಮಗು ಸಾವು, ಅಲೆಗಳಿಗೆ ಸಿಲುಕಿ ಮೀನುಗಾರ ಮೃತ್ಯು, ಸಾಲಬಾಧೆಗೆ ಬಲಿಯಾದ ರೈತ

accident death

ಹಾನಗಲ್‌: ಹಾನಗಲ್‌ ಪಟ್ಟಣದ ದರ್ಗಾ ಓಣಿ ಪ್ರದೇಶದಲ್ಲಿ ಟಿಪ್ಪರ್‌ ಡಿಕ್ಕಿ ಹೊಡೆದು ಆರು ವರ್ಷದ ಬಾಲಕ ಮಹಮ್ಮದ್ ತಲಹಾನ್‌ ಮೃತಪಟ್ಟಿದ್ದಾನೆ. ಇಲ್ಲಿ ರಸ್ತೆ ಪಕ್ಕದಲ್ಲಿ ಪೈಪ್ ಗಳನ್ನು ರಾಶಿ ಹಾಕಲಾಗಿದ್ದು, ಟಿಪ್ಪರ್‌ ಒಂದು ಅವುಗಳನ್ನು ಸವರಿಕೊಂಡು ಹೋಗಿದೆ. ಆ ವೇಳೆಯಲ್ಲಿ ಪೈಪ್‌ ಪಕ್ಕದಲ್ಲೇ ನಿಂತಿದ್ದ ಬಾಲಕ ತಲಹಾನ್‌ಗೂ ಡಿಕ್ಕಿ ಹೊಡೆದಿದೆ. ಟಿಪ್ಪರ್‌ ಡಿಕ್ಕಿಯಿಂದ ಎಸೆಯಲ್ಪಟ್ಟ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪುಟ್ಟ ಬಾಲಕ ಸಾವಿನಿಂದ ಮನೆ ಮಂದಿ ಮತ್ತು ಇತರರ ಆಕ್ರಂದನ ಮುಗಿಲು ಮುಟ್ಟಿದೆ.

ಮೀನುಗಾರಿಕೆ ತೆರಳಿದ್ದ‌ ಮೀನುಗಾರ ಸಾವು
ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ. ಗಂಗೊಳ್ಳಿ ಮಲ್ಯರ‌ಬೆಟ್ಟು ನಿವಾಸಿ ವೆಂಕಟೇಶ್ ಖಾರ್ವಿ ( 47) ಮೃತಪಟ್ಟ ದುರ್ದೈವಿ. ಮೀನುಗಾರಿಕೆ ನಡೆಸುತ್ತಿದ್ದ ವೆಂಕಟೇಶ ಗಂಗೊಳ್ಳಿ ಬ್ರೇಕ್ ವಾಟರ್ ಬಳಿ ತೆರಳಿದ್ದರು. ಬ್ರೇಕ್ ವಾಟರ್ ಬಳಿಯ ಬೇಲಿಕೇರಿ ಬಳಿ ಅಲೆಗಳ ಹೊಡೆತಕ್ಕೆ ಸಿಕ್ಕಿ ವೆಂಕಟೇಶ ನೀರುಪಾಲಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸಾಲಬಾಧೆಗೆ ಬೇಸತ್ತು ಯುವ ರೈತ ಆತ್ಮಹತ್ಯೆ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗನೂರು ಗ್ರಾಮದ ರೈತ ಶಿವಪ್ರಕಾಶ್ ಹಿರೇಮಠ (26) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಾಗಿ 3.50 ಲಕ್ಷ ರೂ. ಸಾಲ ಪಡೆದಿದ್ದ ಅವರು ಅತಿವೃಷ್ಠಿಗೆ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡ್ಡನಹಳ್ಳಿಯಲ್ಲಿ ಹಸುವಿನ ಮೇಲೆ ಕಾಡಾನೆ ದಾಳಿ ಮಾಡಿರುವುದು.

ಸೀಮೆಹಸುವಿನ‌ ಮೇಲೆ ಕಾಡಾನೆ ದಾಳಿ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಗಳು ಮನೆಯ ಮುಂಭಾಗ ಕಟ್ಟಿದ್ದ ಹಸುವಿನ ಮೇಲೆ ದಾಳಿ ಮಾಡಿವೆ. ಶುಕ್ರವಾರ ಬೆಳಗ್ಗೆಯೇ ನಾಲ್ಕು ಆನೆಗಳು ಗ್ರಾಮದ ಸನಿಹಕ್ಕೆ ಬಂದು ಉಪಟಳ ನೀಡಿವೆ. ಇಲ್ಲಿನ ರಾಜು ಎಂಬುವರ ಸೀಮೆ ಹಸುವಿನ ಹೊಟ್ಟೆ ಭಾಗಕ್ಕೆ ಆನೆಗಳು ಸೊಂಡಿಲಿನಿಂದ ತಿವಿದಿವೆ. ಆನೆ ತಿವಿತಕ್ಕೆ ಹಸುವಿನ ಹೊಟ್ಟೆಯಿಂದ ಕರುಳೇ ಹೊರಬಂದಿದೆ.

ಇದನ್ನೂ ಓದಿ | Accident Case | ಜೋಗ ಬಳಿ ಬಸ್‌-ಒಮಿನಿ ನಡುವೆ ಅಪಘಾತ, ವಡನ್‌ಬೈಲ್‌ ದೇಗುಲದ ಅರ್ಚಕ ಸಾವು, ಧರ್ಮದರ್ಶಿ ಗಂಭೀರ

Exit mobile version