Site icon Vistara News

Mandya Train accident : ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಇಬ್ಬರು ದುರ್ಮರಣ: ರೈಲು ಇಳಿದು ಹಳಿ ದಾಟುವಾಗ ದುರಂತ

Mandya train accident

ಮಂಡ್ಯ: ಇಲ್ಲಿನ ರೈಲು ನಿಲ್ದಾಣದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ (Mandya Train accident). ರೈಲು ಇಳಿದು ಹಳಿ ದಾಟುತ್ತಿದ್ದ ಇಬ್ಬರು ಮಹಿಳೆಯರಿಗೆ ಇನ್ನೊಂದು ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕಾಚಿಗುಡ ಎಕ್ಸ್ ಪ್ರೆಸ್ ರೈಲಿನಲ್ಲಿ ಬಂದಿಳಿದ ಮಹಿಳೆಯರು ರೈಲಿನಿಂದ ಇಳಿದು ಮತ್ತೊಂದು ಭಾಗಕ್ಕೆ ಹೋಗಲು ರೈಲು ಹಳಿ ದಾಟುತ್ತಿದ್ದರು. ಆಗ ಮತ್ತೊಂದು ಹಳಿಯಲ್ಲಿ ಬಂದ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಅವರಿಬ್ಬರೂ ಹಳಿಯಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದೆ.

ಕಾಚಿಗುಡ ಎಕ್ಸ್‌ಪ್ರೆಸ್‌ ನಿಂತು ಇವರೆಲ್ಲ ಇಳಿದು ಹಳಿ ದಾಟುವ ಹೊತ್ತಿಗೇ ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಬಂದಿದೆ. ಹೀಗಾಗಿ ದುರಂತ ಸಂಭವಿಸಿದೆ. ನಿಜವೆಂದರೆ ಇಲ್ಲಿ ರೈಲು ಹಳಿಗಳನ್ನು ದಾಟಿಕೊಂಡು ಒಂದು ಪ್ಲ್ಯಾಟ್‌ಫಾರಂನಿಂದ ಇನ್ನೊಂದು ಕಡೆಗೆ ಹೋಗಲು ಅವಕಾಶವಿಲ್ಲ. ಅದಕ್ಕಾಗಿ ಪ್ರತ್ಯೇಕ ದಾರಿ ಇದೆ. ಆದರೆ ಅವಸರದಿಂದ ಸಾಗಿದ ಮಹಿಳೆಯರು ರೈಲು ಬಂದಿದ್ದು ಗೊತ್ತಾಗದೆ ಪ್ರಾಣ ಕಳೆದುಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಸಂಬಂಧಿಕರ ಗೋಳಾಟ

ಮೃತರಲ್ಲಿ ಒಬ್ಬರ ಗುರುತು ಪತ್ತೆ
ರೈಲು ದುರಂತದಲ್ಲಿ ಮೃತಪಟ್ಟ ಇಬ್ಬರು ಮಹಿಳೆಯರ ಪೈಕಿ ಒಬ್ಬರ ಗುರುತು ಪತ್ತೆಯಾಗಿದೆ. ಇವರು ಬಸರಾಳು ಸಮೀಪದ ಹುರುಳಿಜವರನಕೊಪ್ಪಲು ಮೂಲದ ಶಶಿ ಎಂದು ಗುರುತಿಸಲಾಗಿದೆ. ಇವರ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ಅಣ್ಣನ ಮಗಳನ್ನು ಕಳೆದುಕೊಂಡ ಸೌಭಾಗ್ಯ ಎಂಬ ಮಹಿಳೆಯ ಗೋಳು ಎಂಥವರನ್ನೂ ಕಲಕುವಂತಿದೆ. ಇನ್ನೊಬ್ಬ ಮಹಿಳೆ ವೃದ್ಧೆಯಾಗಿದ್ದು, ಅವರ ಮುಖ ಗುರುತು ಹಚ್ಚಲಾಗದಷ್ಟು ಜಜ್ಜಿ ಹೋಗಿದೆ.
ಸ್ಥಳಕ್ಕೆ ರೈಲ್ವೇ ಪೊಲೀಸರು, ಸ್ಥಳೀಯ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version