Site icon Vistara News

Oven Blast: ಬಳ್ಳಾರಿ ಬಿಸ್ಕೆಟ್ ಪ್ಯಾಕ್ಟರಿಯಲ್ಲಿ ಓವನ್‌ ಸ್ಫೋಟ; ಒಬ್ಬರ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Oven blast

ಬಳ್ಳಾರಿ: ಬಿಸ್ಕೆಟ್ ಪ್ಯಾಕ್ಟರಿಯಲ್ಲಿ ಓವನ್‌ ಸ್ಫೋಟವಾಗಿ ಒಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Oven Blast) ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಗಾಯಾಳುವನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಗ್ಗರಹಟ್ಟಿಯ ಭರತ್ ಬಿಸ್ಕೆಟ್ ಪ್ಯಾಕ್ಟರಿಯಲ್ಲಿ ಅವಘಡ ನಡೆದಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಲಗಿದ್ದವರ ಮೇಲೆ ಹರಿದ ಲಾರಿ; ಅಸುನೀಗಿದ ಇಬ್ಬರು ಕುರಿಗಾಯಿಗಳು

ಬಳ್ಳಾರಿ: ಕುರಿಗಾಯಿಗಳು ಇಬ್ಬರು ಮಲಗಿದ್ದ ವೇಳೆ ಲಾರಿ ಹರಿದು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಬಳ್ಳಾರಿ ತಾಲೂಕಿನ ಏತ್ತಿನಬೂದಿಹಾಳು ಹತ್ತಿರದ ಬೆಂಚಿಕೊಟ್ಟಲ ಗ್ರಾಮದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ಲಾರಿ ಹರಿದು ಮಲಗಿದ್ದಲೇ ಇಬ್ಬರು ಅಸುನೀಗಿದ್ದಾರೆ.

ಚಿತ್ರದುರ್ಗದ ಮೋಳಕಾಲ್ಮುರು ತಾಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ (51), ಎರಿಸ್ವಾಮಿ (20) ಮೃತ ದುರ್ದೈವಿಗಳು. ಇವರಿಬ್ಬರು ಕಬ್ಬಿನ ಹೊಲದಲ್ಲಿ ಕುರಿಗಳನ್ನು ಬಿಟ್ಟು ಮಲಗಿದ್ದರು. ಇದರ ಅರಿವು ಇರದೇ ಚಾಲಕ ಲಾರಿಯಲ್ಲಿ ಕಬ್ಬಿನ ಲೋಡ್ ತುಂಬಿಸಿಕೊಂಡು, ಗಾಡಿ ರಿವರ್ಸ್ ತೆಗೆಯಲು ಮುಂದಾಗಿದ್ದ. ಇದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಲಾರಿ ಹಿಂದೆ ಮಲಗಿದ್ದವರ ಮೇಲೆ ಏಕಾಏಕಿ ಹರಿದ ಪರಿಣಾಮ ಇಬ್ಬರು ಮಲಗಿದ್ದಲೇ ಉಸಿರು ಚೆಲ್ಲಿದ್ದಾರೆ. ಸದ್ಯ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಎರಡು ಬೈಕ್‌ಗಳ ನಡುವೆ ಡಿಕ್ಕಿ‌; ಬೈಕ್ ಸವಾರ‌ ಸಾವು

ಚಿಕ್ಕಬಳ್ಳಾಪುರ‌: ಎರಡು ಬೈಕ್‌ಗಳ ನಡುವೆ ಡಿಕ್ಕಿ‌ಯಾಗಿ ಬೈಕ್ ಸವಾರ‌ ಸ್ಥಳದಲ್ಲೇ ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ನಲ್ಲರೆಡ್ಡಿಪಲ್ಲಿ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ | Wife Missing in Bengaluru : 4 ತಿಂಗಳ ಗರ್ಭಿಣಿ ನಾಪತ್ತೆ; ಗಲ್ಲಿ ಗಲ್ಲಿಯಲ್ಲಿ ಪತ್ನಿಗಾಗಿ ಪತಿಯ ಅಲೆದಾಟ

ಬಾಗೇಪಲ್ಲಿ ತಾಲೂಕಿನ ಗೊಲ್ಲಪಲ್ಲಿ ನಿವಾಸಿ ಕುಲಾಯಪ್ಪ (40) ಮೃತ ದುರ್ದೈವಿ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಂಧ್ರ ಪ್ರದೇಶದ ಗೊಲ್ಲಪಲ್ಲಿಯಿಂದ ಬಾಗೇಪಲ್ಲಿಯ ಗೂಳೂರಿಗೆ ಬರುವ ವೇಳೆ ಅಪಘಾತ ನಡೆದಿದೆ. ಸ್ಥಳಕ್ಕೆ ಬಾಗೇಪಲ್ಲಿ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version