Site icon Vistara News

Road Accident: ಶ್ರೀರಂಗಪಟ್ಟಣದಲ್ಲಿ ಕಾರು-ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಶಿಕ್ಷಕಿಯರ ಸಾವು

Bike Accident

ಮಂಡ್ಯ: ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಇಬ್ಬರು ಶಿಕ್ಷಕಿಯರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಭಾನುವಾರ ನಡೆದಿದೆ. ಪಿ. ಹೊಸಹಳ್ಳಿ ಗ್ರಾಮದ ಶಾಲೆ ಶಿಕ್ಷಕಿ ನಾಗರತ್ನ, ಬಸ್ತಿಪುರ ಗ್ರಾಮದ ಶಾಲೆ ಶಿಕ್ಷಕಿ ಮಂಜುಳ ಮೃತರು.

ಮೃತರಿಬ್ಬರೂ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದವರಾಗಿದ್ದಾರೆ. ನಾಗರತ್ನ ಅವರು ಸ್ಥಳದಲ್ಲಿ ಮೃತಪಟ್ಟರೆ, ಮಂಜುಳ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹುಲಿ ದಾಳಿಗೆ ಮೂರು ಜಾನುವಾರು ಬಲಿ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಹುಲಿ ದಾಳಿ ಆತಂಕ ಹೆಚ್ಚಾಗಿದ್ದು, ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಒಂದೇ ದಿನ ಮೂರು ಜಾನುವಾರು ಬಲಿ ಹಿನ್ನೆಲೆಯಲ್ಲಿ ಗ್ರಾಮಗಳ ಸುತ್ತಮುತ್ತಲಿನ ಜನರಿಗೆ ವ್ಯಾಘ್ರನ ಭಯ ಶುರುವಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಿದ್ದಾರೆ. ಬಿ.ಹೊಸಳ್ಳಿ ಕುಂದೂರು ಗ್ರಾಮಗಳಲ್ಲಿ ಹುಲಿ ಸಂಚಾರ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್‌ ಪಲ್ಟಿ; ಟೈರ್‌ ಸ್ಫೋಟಕ್ಕೆ ಹೊತ್ತಿ ಉರಿದ ಕಾರು

ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಬ್ಯಾಕ್‌ ಟು ಬ್ಯಾಕ್‌ ರಸ್ತೆ ಅಪಘಾತಗಳು (Road Accident) ನಡೆಯುತ್ತಲೆ ಇವೆ. ಸದ್ಯ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿದ್ದ ಬಸ್ ಪಲ್ಟಿಯಾಗಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟ ಬಳಿ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಮೈಸೂರು ಮೂಲದ 34 ಜನ ಮಾಲಾಧಾರಿಗಳಲ್ಲಿ 15 ಜನರಿಗೆ ಗಾಯವಾಗಿದೆ. ಗಾಯಾಳುಗಳು ಶೃಂಗೇರಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆ ತಿರುವಿನಲ್ಲಿ ಸ್ಕಿಡ್ ಆಗಿ ಬಸ್‌ ಪಲ್ಟಿಯಾಗಿದೆ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಲಾರಿ-ಬಸ್‌ ಡಿಕ್ಕಿ; ಚಾಲಕರಿಬ್ಬರಿಗೂ ಗಾಯ

ಯಾದಗಿರಿ ಜಿಲ್ಲೆಯ ಸುರಪುರದ ದೇವಾಪುರ ಗ್ರಾಮದಲ್ಲಿ ಲಾರಿ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಇಬ್ಬರು ಚಾಲಕರು ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆ ನಡೆದಿದೆ. ರಸ್ತೆ ಅಪಘಾತದಿಂದಾಗಿ ಇತರೆ ವಾಹನಗಳ ಸಂಚಾರವು ಸ್ಥಗಿತಗೊಂಡಿತ್ತು. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Murder Case : ವರದಕ್ಷಿಣಿಗಾಗಿ ಹೆಂಡತಿನಾ ಹೆಲ್ಮೆಟ್‌ನಿಂದ ಹೊಡೆದು ಕೊಂದ ದುಷ್ಟ ಪತಿ

ಟೈರ್‌ ಸ್ಫೋಟ- ಹೊತ್ತಿ ಉರಿದ ಕಾರು

ಟೈರ್ ಸ್ಫೋಟಗೊಂಡು ಓಮಿನಿ ಕಾರೊಂದು ಧಗಧಗನೇ ಹೊತ್ತಿ ಉರಿದಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ಟೈರ್ ಸ್ಫೋಟವಾಗಿ ಪಲ್ಟಿ ಹೊಡೆದಿದೆ. ಬಳಿಕ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಯಾದಗಿರಿಯಿಂದ ಕಲಬುರಗಿಗೆ ಬರುತ್ತಿದ್ದಾಗ ಘಟನೆ ನಡೆದಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಚಿತ್ತಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version