Site icon Vistara News

ಕೊಲೆ ಕೇಸ್‌ ಹಿಂಪಡೆದಾಗ ಕರ್ತವ್ಯಪ್ರಜ್ಞೆ ಎಲ್ಲಿತ್ತು?: HDK, ಸಿದ್ದುಗೆ ಬೊಮ್ಮಾಯಿ ತಿರುಗೇಟು

ಬಸವರಾಜ ಬೊಮ್ಮಾಯಿ

ಉಡುಪಿ: ಕೊಲೆ ಆರೋಫ ಎದುರಿಸುತ್ತಿರುವ ಗಂಭೀರ ಪ್ರಕರಣಗಳನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ದು ಹಿಂಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳುವಾಗ ಇವರ ಕರ್ತವ್ಯ ಪ್ರಜ್ಞೆ ಎಲ್ಲಿ ಹೋಗಿತ್ತು? ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaiah) ಎಚ್‌.ಡಿ. ಕುಮಾರಸ್ವಾಮಿ(H.D. Kumara Swamy) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದ್ದಾರೆ.

ಪ್ರಚಲಿತ ವಿದ್ಯಮಾನಗಳ ಕುರಿತು ಬಿಜೆಪಿ ಹಾಗೂ ಮುಖ್ಯಮಂತ್ರಿ ಮಾತನಾಡುತ್ತಿಲ್ಲ ಎಂದು ಏಪ್ರಿಲ್‌ 3ರಂದು ಟ್ವೀಟ್‌ ಮೂಲಕ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು. “ಡಾ.ಮನಮೋಹನ್ ಸಿಂಗ್ ಅವರನ್ನು ʼಮೌನಿ ಪ್ರಧಾನಿʼ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ? ದನಿಯೆತ್ತಿ ಬೆಲೆ ಏರಿಕೆ ವಿರುದ್ಧ. ಮೌನಿ ಪಕ್ಷ! ಮೌನಿ ಸರಕಾರ!! ಮೌನಿ ಮುಖ್ಯಮಂತ್ರಿ!!!” ಎಂದಿದ್ದರು. ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಹೆಲಿಪ್ಯಾಡ್‌ನಲ್ಲಿ ಪತ್ರಕರ್ತರಿಗೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಮಾತುಗಳಿಗೆ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ನನ್ನ ಕ್ರಮಗಳೇ ಮಾತನಾಡುತ್ತಿವೆ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳ ಬೇಕು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಮಗೆ ತಿಳಿದಿದೆ. ಇವರಿಂದ ಏನನ್ನೂ ಕಲಿಯಬೇಕಿಲ್ಲ. ಹಲವಾರು ಕೊಲೆಗಳಿಗೆ ನೇರವಾಗಿ ಆರೋಪ ಇರುವ ಸಂಸ್ಥೆಗಳ ಪ್ರಕರಣಗಳನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಕೈಬಿಟ್ಟರಲ್ಲ, ಆಗ ಇವರ ಕರ್ತವ್ಯ ಪ್ರಜ್ಞೆ ಎಲ್ಲಿತ್ತು? ಅವರ ಕಾಲದಲ್ಲಿ ಹತ್ತು ಹಲವಾರು ಹಿಂದೂ ಯುವಕರ ಕೊಲೆಗಳಾದವು. ಆ ಸಂಸ್ಥೆಗಳ ಮೇಲಿನ ಪ್ರಕರಣವನ್ನೇ ಹಿಂಪಡೆದರಲ್ಲಾ, ಆಗ ಅವರು ಬುದ್ದಿ ಕಳೆದುಕೊಂಡಿದ್ದರೇ? ನಮ್ಮ ರಾಜ್ಯ ಶಾಂತಿ ಸುವ್ಯವಸ್ಥೆ ಇರುವ ಅತ್ಯಂತ ಪ್ರಗತಿಪರ ರಾಜ್ಯ. ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕೆಂದು ಗೊತ್ತಿದೆ. ಅದನ್ನು ಮಾಡಿ ತೋರಿಸುತ್ತಿದ್ದೇವೆ ಎಂದರು.

ಮತ್ತಷ್ಟು ಓದಿಗಾಗಿ: ಶ್ರೀರಾಮನ ಹೆಸರೇಳಿಕೊಂಡು ರಾವಣರಾಜ್ಯ ಸೃಷ್ಟಿಸಬೇಡಿ: BJP ವಿರುದ್ಧ ಕುಮಾರಸ್ವಾಮಿ ಕಿಡಿ

ಕಾನೂನಿನ ಪ್ರಕಾರ ನಡೆಯುವುದು ನಮ್ಮ ಕೆಲಸ

ಮಂಗಳೂರಿನಲ್ಲಿ ಲವ್ ಜಿಹಾದ್ ಬಗ್ಗೆ ಹಿಂದೂ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿರುವ ಬಗ್ಗೆ ಮಾತನಾಡಿದ ಬೊಮ್ಮಾಯಿ, ಎಲ್ಲದ್ದಕ್ಕೂ ಕಾನೂನಿದೆ. ಮತ್ತು ಕೆಲವು ಕಾನೂನುಗಳನ್ನು ಹಿಂದಿನ ಸರ್ಕಾರಗಳೇ ಮಾಡಿವೆ. ಅವುಗಳನ್ನು ಬಿಟ್ಟು ನಾವು ಹೊಸ ಕಾನೂನು ಮಾಡುತ್ತಿಲ್ಲ. ಕಾನೂನಿನ ಪ್ರಕಾರ ನಡೆಯುವುದು, ಕಾನೂನು ರಕ್ಷಿಸುವುದು ನಮ್ಮ ಕೆಲಸ.

ನಮ್ಮದು ಸಂವಿಧಾನಬದ್ಧವಾಗಿ ರಚನೆಯಾಗಿರುವ ಸರ್ಕಾರ. ಕಾನೂನು ಸುವ್ಯವಸ್ಥೆ ಮತ್ತು ಸಮಾನತೆ ಎಂಬ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದೇವೆ. ಅವರವರ ವಿಚಾರಗಳನ್ನು ಪ್ರಚಾರ ಮಾಡಿದರೆ ತೊಂದರೆ ಇಲ್ಲ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡಾಗ ಅಥವಾ ಹಿಂಸೆಗಿಳಿದಾಗ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳಿಸಿಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Exit mobile version