Site icon Vistara News

Brutal Tragedy : ಪೆಟ್ರೋಲ್‌ ಬಂಕ್‌ನಲ್ಲಿ ಅಚಾತುರ್ಯ; ಮಲಗಿದ್ದ ಕಾರ್ಮಿಕನ ಮೇಲೆ ಹರಿದ ಟಿಪ್ಪರ್!

Hebri petrol pump tragedy

ಉಡುಪಿ: ಅವನು ಲಾರಿ ಕಾರ್ಮಿಕ. ದಿನವಿಡೀ ವಾಹನದಲ್ಲಿ ದುಡಿದು ಸುಸ್ತಾಗಿದ್ದ. ಹೀಗಾಗಿ ಒಂದು ಪೆಟ್ರೋಲ್‌ ಬಂಕ್‌ನಲ್ಲಿ ವಾಹನ ನಿಲ್ಲಿಸಿ ಸ್ವಲ್ಪ ಹೊತ್ತು ಕಣ್ಣು ಮುಚ್ಚೋಣ ಅಂದುಕೊಂಡಿದ್ದ. ಆದರೆ, ಅವನೀಗ ಶಾಶ್ವತವಾಗಿ ಕಣ್ಣುಮುಚ್ಚಿದ್ದಾನೆ. ಹೀಗೆ ಆತನ ಸಾವಿಗೆ ಕಾರಣವಾಗಿದ್ದು ಒಂದು ಟಿಪ್ಪರ್‌ ಎನ್ನುವುದು ದುರಂತ. ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಸೋಮೇಶ್ವರ (Someshwara near Hebri) ಪೆಟ್ರೋಲ್ ಬಂಕ್ (Petrol Bunk) ಆವರಣದಲ್ಲಿ. ಲಾರಿಯ ಮುಂದೆ ಮಲಗಿದ್ದ ಕಾರ್ಮಿಕ ಶಿವರಾಜ್‌ ಅವರು ಟಿಪ್ಪರ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ (Brutal Tragedy).

ಸಾಗರ ತಾಲೂಕಿನ ಕೊರ್ಲಿ ಕೊಪ್ಪ ನಿವಾಸಿಯಾಗಿರುವ ಶಿವರಾಜ್‌ ಲಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಹಗಲಿಡೀ ವಾಹನದಲ್ಲಿ ಓಡಾಡಿದ್ದರಿಂದ ಅವರಿಗೆ ತುಂಬ ಸುಸ್ತಾಗಿತ್ತು. ಹಾಗಾಗಿ ಸೋಮೇಶ್ವರ ಪೆಟ್ರೋಲ್‌ ಪಂಪ್‌ಗೆ ಬಂದು ಲಾರಿಗೆ ಡೀಸೆಲ್‌ ಹಾಕಿ ಸ್ವಲ್ಪ ಹೊತ್ತು ವಿರಮಿಸೋಣ ಎಂದು ವಾಹನವನ್ನು ನಿಲ್ಲಿಸಿ ಅಲ್ಲೇ ವಾಹನದ ಮುಂದೆ ಮಲಗಿಕೊಂಡರು. ಜತೆಗೆ ಇನ್ನೊಬ್ಬ ಕಾರ್ಮಿಕನೂ ಮಲಗಿದ್ದರು.

ಈ ನಡುವೆ, ಇನ್ನೊಂದು ಟಿಪ್ಪರ್‌ ಡೀಸೆಲ್‌ ಹಾಕಿಕೊಳ್ಳಲು ಅಲ್ಲಿಗೆ ಬಂದಿದೆ. ಅದರ ಚಾಲಕ ಡೀಸೆಲ್‌ ಹಾಕಿಸಿಕೊಂಡು ವಾಹನವನ್ನು ನಿಧಾನಕ್ಕೆ ಮುಂದೆ ಚಲಾಯಿಸಿದ್ದಾನೆ. ಅವನ ಎಡಗಡೆಗೆ ಇದ್ದ ಇನ್ನೊಂದು ವಾಹನದ ಮುಂದೆ ಈ ಕಾರ್ಮಿಕರು ಮಲಗಿದ್ದರು.

ಟಿಪ್ಪರ್‌ ಚಾಲಕ ಪಕ್ಕದ ಲಾರಿಯ ಮುಂದೆ ಕಾರ್ಮಿಕರು ಮಲಗಿದ್ದನ್ನು ಗಮನಿಸಿರಲಿಲ್ಲ ಅನಿಸುತ್ತದೆ. ಅವನು ವಾಹನವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ಅಂತರವನ್ನು ಕಾಪಾಡಿಕೊಂಡು ವಾಹನವನ್ನು ಎಡಕ್ಕೆ ತಿರುಗಿಸಿ ಮುಂದುವರಿದಿದ್ದಾನೆ. ಆಗ ಲಾರಿ ಮುಂದೆ ಮಲಗಿದ್ದವರಲ್ಲಿ ಒಬ್ಬನಿಗೆ ಏನೋ ಎಚ್ಚರವಾಗಿದೆ. ಅವನು ಎದ್ದು ಕುಳಿತು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಟಿಪ್ಪರ್‌ ಇನ್ನೊಬ್ಬನ ತಲೆಯ ಮೇಲೆ ಹರಿದಿದೆ.

ಅಲ್ಲಿಗೆ ಕಾರ್ಮಿಕ ಶಿವರಾಜ್‌ ದೇಹ ಸ್ತಬ್ಧವಾಗಿ ಹೋಗಿದೆ. ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ದುರಂತ ದೃಶ್ಯವನ್ನು ಈ ವಿಡಿಯೊದಲ್ಲಿ ನೋಡಿ

ಇದನ್ನೂ ಓದಿ : Road Accident : ಯಮನಂತೆ ಬಂದ ಗೂಡ್ಸ್‌ ವಾಹನಕ್ಕೆ ತಾಯಿ-ಮಗ ಬಲಿ!

Exit mobile version