Site icon Vistara News

ಉಡುಪಿಯಲ್ಲಿ ಗ್ರಾ.ಪಂ. ಪಿಡಿಒ ಅಮಾನತು; ಅಧಿಕಾರಿಗಳ ಸಂಘದ ವಿರೋಧ

ಉಡುಪಿ: ಉಡುಪಿಯ ಮುಂಡ್ಕೂರು ಗ್ರಾಮ‌ ಪಂಚಾಯತ್‌ನ ಪಿಡಿಓ ರವಿರಾಜ್.ಹೆಚ್‌ ಅವರನ್ನು ಅಮಾನತುಗೊಳಿಸಲಾಗಿದೆ. ಈ ಹುದ್ದೆಯನ್ನು ರವಿರಾಜ್‌ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಆದರೆ ಅವರು ತಮ್ಮ ಕರ್ತವ್ಯವವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಆ ಸ್ಥಾನದಿಂದ ಅಮಾನತುಗೊಳಿಸಲಾಗಿದೆ. ಆದರೆ ಇದನ್ನು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ.

ರವಿರಾಜ್.‌ಹೆಚ್‌ ಅವರಿಗೆ ಗ್ರಾಮ್‌ ಪಂಚಾಯತ್‌ ಪಿಡಿಒ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಈ ಸ್ಥಾನಕ್ಕೆ ಪ್ರಭಾರಿಯಾಗಿ ಇರುವಂತೆ ಸೂಚಿಸಲಾಗಿತ್ತು. ಈ ಅವಧಿಯಲಿ ರವಿರಾಜ್‌ ಮೇಲಧಿಕಾರಿಯ ಆದೇಶವನ್ನು ಪಾಲನೆ ಮಾಡಿಲ್ಲ ಎಂದು ತಿಳಿಸಲಾಗಿತ್ತು. ಅಲ್ಲದೆ, ಕರ್ನಾಟಕ ನಾಗರಿಕ ಸೇವಾ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅವರನ್ನು ಅಮಾನತುಗೊಳಿಸುವಂತೆ ಸಿಇಒ ಡಾ. ನವೀನ್ ಭಟ್ ಆದೇಶ ಹೊರಡಿಸಿದ್ದಾರೆ.

ಆದರೆ ಈ ನಿರ್ಧಾರಕ್ಕೆ ಉಡುಪಿ ಜಿಲ್ಲಾ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ವಿರೋಧ ವ್ಯಕ್ತಪಡಿಸಿದೆ. ʼʼಪ್ರಾಮಾಣಿಕ ಅಧಿಕಾರಿಗಳನ್ನು ಹೇಗೆ ಅಮಾನತುಗೊಳಿಸುತ್ತೀರಿ?ʼ ಎಂದು ಪ್ರಶ್ನೆ ಮಾಡಲಾಗಿದೆ. ಈ ಅಮಾನತು ಆದೇಶವನ್ನು ಕೂಡಲೇ ಹಿಂಪಡೆದು ಪ್ರಾಮಾಣಿಕ ಪಿಡಿಒಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಈ ಆದೇಶ ಮುಂದುವರೆದಲ್ಲಿ ಎಪ್ರಿಲ್ 25ರ ಬೆಳಗ್ಗೆಯಿಂದ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿ/ ಲೆಕ್ಕ ಸಹಾಯಕರು/ನೌಕರರ ಸಹಯೋಗದೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.

ಇದನ್ನೂ ಓದಿಗಾಗಿ: ಪರೀಕ್ಷೆಗಿಂತ ಹಿಜಾಬ್‌ ಮುಖ್ಯವೆಂದ ವಿದ್ಯಾರ್ಥಿನಿಯರು: ದ್ವಿತೀಯ ಪಿಯು ಪರೀಕ್ಷೆಗೆ ಗೈರು
Exit mobile version