Site icon Vistara News

Shivamogga terror: ಉಗ್ರ ಚಟುವಟಿಕೆಗೆ PFI ಮುಖಂಡರಿಂದ ಗೇಮಿಂಗ್ ಆ್ಯಪ್ ಬಳಕೆ; ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌, ಮಂಗ್ಳೂರು ಕುಕ್ಕರ್‌ ಬ್ಲಾಸ್ಟ್‌ಗೂ ಲಿಂಕ್‌!

gaming app in Shivamogga terror trail blast case

ಮಂಗಳೂರು: ರಾಜ್ಯದಲ್ಲಿ ಉಗ್ರ ಚಟುವಟಿಕೆ ಸದ್ದಿಲ್ಲದೆ ನಡೆಯುತ್ತಿದೆ. ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ (Shivamogga terror) ಹಾಗೂ ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಬಳಿಕ ಒಂದೊಂದೇ ವಿಚಾರಗಳು ಹೊರಗೆ ಬರುತ್ತಲೇ ಇದೆ. ಈಗ ಉಗ್ರ ಚಟುವಟಿಕೆಗೆ ಗೇಮಿಂಗ್ ಆ್ಯಪ್ ಬಳಕೆ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಪೊಲೀಸ್ ಹಾಗೂ ಗುಪ್ತಚರ ಇಲಾಖೆಗೆ ಈಗ ಗೇಮಿಂಗ್ ಆ್ಯಪ್ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ. ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಹಾಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೂ ಈ ಗೇಮಿಂಗ್‌ ಆ್ಯಪ್ ಬಳಕೆಗೂ ಲಿಂಕ್‌ ಇದೆ ಎಂಬ ವಿಷಯ ಈಗ ಬಹಿರಂಗಗೊಂಡಿದೆ.

ಸೈಬರ್ ಸೆಲ್‌ನಿಂದ ಚಾಟಿಂಗ್ ಆ್ಯಪ್‌ಗಳ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಉಗ್ರ ಚಟುವಟಿಕೆಗೆ ಗೇಮಿಂಗ್ ಆ‌್ಯಪ್ ದಾರಿ ಕಂಡುಕೊಂಡಿದ್ದ ಕೆಲವರು ಅದರ ಮೂಲಕ ಕೋಡ್ ವರ್ಡ್‌ಗಳಲ್ಲಿ ಚಾಟಿಂಗ್ ಮಾಡುತ್ತಿದ್ದರು. ಈ ಕೋಡ್ ವರ್ಡ್ ಚಾಟಿಂಗ್ ಅನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ.

ಪಬ್ ಜೀ , ಲುಡೊ ಸೇರಿದಂತೆ ಇನ್ನಿತರ ಆ್ಯಪ್‌ಗಳ ಬಳಕೆ ಮಾಡುತ್ತಿದ್ದ ಕೆಲವು ಪಿಎಫ್‌ಐ (PFI) ಮುಖಂಡರು ಮಾಹಿತಿಯನ್ನು ರವಾನೆ ಮಾಡುತ್ತಿದ್ದರು ಎನ್ನಲಾಗಿದೆ. ಈಗಾಗಲೇ ತಲೆ ಮರೆಸಿಕೊಂಡಿರುವ ಪಿಎಫ್‌ಐ ಮುಖಂಡರಿಂದ ಚಾಟಿಂಗ್ ನಡೆಯುತ್ತಿತ್ತು ಎಂಬ ವಿಷಯ ಗೊತ್ತಾಗಿದ್ದು, ಅವರ ಹುಡುಕಾಟದಲ್ಲಿ ಎನ್‌ಐಎ ತಂಡ ಹಾಗೂ ಪೊಲೀಸರು ನಿರತರಾಗಿದ್ದಾರೆ.

ಇದನ್ನೂ ಓದಿ: IT Company Layoffs : ಅಮೆರಿಕದಲ್ಲಿ 80,000 ಭಾರತೀಯ ಟೆಕ್ಕಿಗಳಿಗೆ ಈಗ ನಿರುದ್ಯೋಗ: ಕಳವಳಕಾರಿ ವರದಿ ಬಹಿರಂಗ

ಚುರುಕುಗೊಂಡಿರುವ ಎನ್‌ಐಎ ತನಿಖೆ

ಶಿವಮೊಗ್ಗದಲ್ಲಿ ಕಳೆದ ಸೆಪ್ಟೆಂಬರ್‌ ೧೯ರಂದು ಬೆಳಕಿಗೆ ಬಂದಿದ್ದ ಟ್ರಯಲ್‌ ಬ್ಲಾಸ್ಟ್‌ ಸಹಿತ ಉಗ್ರ ಚಟುವಟಿಕೆಗೆ (Shivamogga terror) ಸಂಬಂಧಿಸಿದಂತೆ ಎನ್‌ಐಎ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಸಂಬಂಧ ಈಚೆಗೆ ಮೂವರನ್ನು ವಶಕ್ಕೆ ಪಡೆದಿದ್ದರು. ಜನವರಿ ೫ರಂದು ದಾವಣಗೆರೆಯ ಹೊನ್ನಾಳಿಯಲ್ಲಿ ನದೀಮ್‌ ಎನ್ನುವ ಯುವಕನನ್ನು ಎನ್‌ಐಎ ತಂಡ ವಶಕ್ಕೆ ಪಡೆದುಕೊಂಡಿತ್ತು.

ಈತ ಶಿವಮೊಗ್ಗದ ಯಾಸಿನ್‌ಗೆ ಸ್ನೇಹಿತ ಎಂದು ಹೇಳಲಾಗಿದೆ. ಹೊನ್ನಾಳಿ ಪಟ್ಟಣದ‌ ನಿವಾಸಿಯಾಗಿರುವ ನದೀಮ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಎನ್‌ಐಎ ಪೊಲೀಸರು ಕೆಲವೊಂದು ಮಹತ್ವದ ಸಂಗತಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆನ್ನಾಗಿದೆ. ಅಲ್ಲದೆ, ಇದಕ್ಕೂ ಮುಂಚೆ ಮಂಗಳೂರಿನ ಪಿಎ ಎಂಜಿನಿಯರಿಂಗ್‌ ಕಾಲೇಜಿಗೆ ದಾಳಿ ನಡೆಸಿದ್ದ ಎನ್‌ಐಎ, ಉಡುಪಿ ಮೂಲದ ವಿದ್ಯಾರ್ಥಿ ರೇಶಾನ್‌ ತಾಜುದ್ದೀನ್‌ ಶೇಖ್‌ ಹಾಗೂ ಶಿವಮೊಗ್ಗದಲ್ಲಿ ಹುಜೇರ್‌ ಫರಾನ್‌ ಬೇಗ್‌ ಎಂಬಾತನನ್ನು ವಶಕ್ಕೆ ಪಡೆದುಕೊಂಡಿತ್ತು.

ಏನಿದು ಪ್ರಕರಣ?

ಸೆಪ್ಟೆಂಬರ್‌ ೧೯ರಂದು ಬೆಳಕಿಗೆ ಬಂದ ಶಿವಮೊಗ್ಗ ಉಗ್ರ ಚಟುವಟಿಕೆಗೆ ಸಂಬಂಧಿಸಿ ಮಂಗಳೂರಿನ ಎಂಜಿನಿಯರಿಂಗ್‌ ಪದವೀಧರ ಮಾಜ್‌ ಮುನೀರ್‌ ಮತ್ತು ಶಿವಮೊಗ್ಗದ ಸೈಯದ್‌ ಯಾಸಿನ್‌ನನ್ನು ಬಂಧಿಸಲಾಗಿತ್ತು. ಅಂದು ಇವರೆಲ್ಲರ ಹಿಂದಿನ ಮಾಸ್ಟರ್‌ ಮೈಂಡ್‌ ಆಗಿದ್ದ ತೀರ್ಥಹಳ್ಳಿ ನಿವಾಸಿ ಮೊಹಮ್ಮದ್‌ ಶಾರಿಕ್‌ ತಪ್ಪಿಸಿಕೊಂಡಿದ್ದ. ಮುಂದೆ ನವೆಂಬರ್‌ ೧೯ರಂದು ಸಂಜೆ ಮಂಗಳೂರಿನ ನಾಗುರಿ ಬಳಿ ಕುಕ್ಕರ್‌ ಬ್ಲಾಸ್ಟ್‌ ಮಾಡಲು ಹೋಗುತ್ತಿದ್ದಾಗ ಅದು ರಿಕ್ಷಾದಲ್ಲೇ ಬಾಂಬ್‌ ಸ್ಫೋಟಗೊಂಡಿದ್ದರಿಂದ ಮೊಹಮ್ಮದ್‌ ಶಾರಿಕ್‌ ಸಿಕ್ಕಿಬಿದ್ದಿದ್ದ. ಈಗ ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎನ್‌ಐಎ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಅಂದು ಶಿವಮೊಗ್ಗ ಟೆರರ್‌ ಪ್ರಕರಣ ಬೆಳಕಿಗೆ ಬಂದಾಗ ಶಾರಿಕ್‌, ಮಾಜ್‌ ಮುನೀರ್‌ ಮತ್ತು ಸೈಯದ್‌ ಯಾಸಿನ್‌ ತಂಡ ಶಿವಮೊಗ್ಗ ಗುರುಪುರದಲ್ಲಿರುವ ತುಂಗಾ ತೀರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಾವೂರು ಬಳಿ ನೇತ್ರಾವತಿ ತೀರದಲ್ಲಿ ಪರಿಶೀಲನೆ ನಡೆಸಿದಾಗ ಟ್ರಯಲ್‌ ಬಾಂಬ್‌ ಬ್ಲಾಸ್ಟ್‌ ನಡೆಸಿದ್ದ ಬಗ್ಗೆ ಕುರುಹುಗಳು ಸಿಕ್ಕಿದ್ದವು.

ಇದನ್ನೂ ಓದಿ: Denotification Case: ಸ್ಟೇ ತೆರವಿಗೆ ಸುಪ್ರೀಂ ಕೋರ್ಟ್ ನಕಾರ, ಯಡಿಯೂರಪ್ಪ ನಿರಾಳ

ನಾಲ್ಕು ಕಡೆಗಳಲ್ಲಿ ದಾಳಿ

ಈ ಪ್ರಕರಣದ ಬೆನ್ನು ಹತ್ತಿದ್ದ ಎನ್‌ಐಎ ಅಧಿಕಾರಿಗಳಿಗೆ ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ತಿಳಿದುಬಂದಿದ್ದು, ಅದರಂತೆ ಗುರುವಾರ ಮಂಗಳೂರು, ಉಡುಪಿ, ಶಿವಮೊಗ್ಗ, ದಾವಣಗೆರೆ ಬೆಂಗಳೂರುಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧನದಲ್ಲಿರುವ ಮಂಗಳೂರು ಮೂಲದ ಮಾಜ್‌ ಮುನೀರ್‌ನ ವಿಚಾರಣೆ ವೇಳೆ ಉಡುಪಿಯ ರೇಶಾನ್ ತಾಜೂದ್ದೀನ್ ಶೇಕ್ ಮತ್ತು ಶಿವಮೊಗ್ಗ ಜಿಲ್ಲೆಯ ಹುಝೇರ್ಬೇ ಫರ್ಹಾನ್‌ಗ್ ಮಾಹಿತಿ ದೊರಕಿತ್ತು. ಇವರಿಬ್ಬರೂ ಐಸಿಸ್‌ನ ಸಕ್ರಿಯ ಕಾರ್ಯಕರ್ತರು ಎನ್ನುವ ಪ್ರಾಥಮಿಕ ಮಾಹಿತಿಯೂ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದ್ದು, ಹೆಚ್ಚಿನ ವಿಚಾರಣೆ ನಡೆಯಬೇಕಾಗಿದೆ.

ಇವರಿಬ್ಬರ ಪಾಲುದಾರಿಕೆ ಏನು?

ಮಂಗಳೂರಿನ ಪಿಎ ಕಾಲೇಜಿನಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ಉಡುಪಿ ವಾರಂಬಳ್ಳಿಯ ರೇಶಾನ್‌ ತಾಜುದ್ದೀನ್‌ ಮತ್ತು ಶಿವಮೊಗ್ಗದ ಫರ್ಹಾನ್‌ ಬೇಗ್‌ ಇಬ್ಬರೂ ಐಸಿಸ್ ಹ್ಯಾಂಡ್ಲರ್ಸ್ ಜತೆ ಸಂಪರ್ಕ ಹೊಂದಿದ್ದು, ಅವರಿಂದ ಕ್ರಿಫ್ಟೋ ವ್ಯಾಲೆಟ್‌ಗೆ ಹಣ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.

ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ಇವರ ಮೇಲಿದೆ. ಇವರಿಬ್ಬರ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಡಿಜಿಟಲ್ ಡಿವೈಸಸ್ ಮತ್ತು ಹಲವು ದಾಖಲೆಗಳು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Menstrual Leave: ಕೇರಳದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ವಿದ್ಯಾರ್ಥಿನಿಯರಿಗೆ ಇನ್ಮುಂದೆ ಸಿಗಲಿದೆ ಮುಟ್ಟಿನ ರಜೆ

ಇವರ ಟಾರ್ಗೆಟ್‌ ಯಾವುದು?

ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋದಾಮುಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ಬೆಂಕಿ ಹಚ್ಚಲು ಇವರು ಟಾರ್ಗೆಟ್ ಮಾಡಿದ್ದರು. ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಉಂಟು ಮಾಡಲು ಸಂಚು ಮಾಡಿದ್ದರು ಎಂದು ಆರೋಪಿಸಲಾಗಿದೆ.

Exit mobile version