Site icon Vistara News

20 ಯುವ ನಾಯಕರಿಗೆ ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್; ಡಿಕೆ ಶಿವಕುಮಾರ್‌, ಬಿವೈ ವಿಜಯೇಂದ್ರರಿಂದ ನಾಯಕತ್ವ ಪಾಠ

Vistara News Emerging Leader Award for 20 young leaders Leadership lessons from DK Shivakumar and BY Vijayendra

ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸುದ್ದಿ ವಾಹಿನಿ ವಿಸ್ತಾರ ನ್ಯೂಸ್ ಸುದ್ದಿ ಬಿತ್ತರಿಸುವುದಷ್ಟೇ ಅಲ್ಲ, ಸಮಾಜದ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತಿದೆ. ಜನರಿಗೆ ಅದರಿಂದ ಅನುಕೂಲವಾಗುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಾ ಬಂದಿದೆ. ಮಾತ್ರವಲ್ಲ, ಹಲವು ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸಾಧನೆ ಮಾಡಿದವರನ್ನು ಗುರುತಿಸುವುದರಲ್ಲಿಯೂ ಮುಂಚೂಣಿಯಲ್ಲಿದೆ. ಈಗ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ವಿಸ್ತಾರ ನ್ಯೂಸ್ “ಎಮರ್ಜಿಂಗ್ ಲೀಡರ್” ಅವಾರ್ಡ್ (Vistara News Emerging Leader Award) ನೀಡಿ ಪ್ರೋತ್ಸಾಹಿಸಿದೆ. ಪ್ರಜ್ವಲಿಸುತ್ತಿರುವ ಭವಿಷ್ಯದ ನಾಯಕರನ್ನು ಗೌರವಿಸುವ ಕೆಲಸವನ್ನು ಮಾಡಲಾಗಿದೆ.

ರಾಜ್ಯದ 20 ಯುವ ನಾಯಕರ ಸಾಧನೆಯನ್ನು ವಿಸ್ತಾರ ನ್ಯೂಸ್‌ ಗಮನಿಸಿದೆ. ಈ ಯುವ ನಾಯಕರಿಗೆ “ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್” ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು.

ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯುವ ನಾಯಕರಿಗೆ ಒಂದಷ್ಟು ಹಿತನುಡಿಗಳನ್ನು ಹೇಳಿದರು. ರಾಜಕೀಯದ ಮೊದಲ ಪಾಠವನ್ನು ಮಾಡಿದರು. ರಾಜಕೀಯ ಎಂದರೆ ಅಧಿಕಾರ ಒಂದೇ ಅಲ್ಲ, ಒಬ್ಬ ಯಶಸ್ವಿ ನಾಯಕ ಆಗುವುದರ ಹಿಂದಿನ ಪರಿಶ್ರಮಗಳು ಏನು? ಜನರನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು? ಈ ಯುವ ನಾಯಕರ ಮುಂದಿನ ಜವಾಬ್ದಾರಿಗಳು ಹೇಗಿರಬೇಕು ಎಂಬ ಬಗ್ಗೆ ಸಲಹೆಗಳನ್ನು ನೀಡಿದರು. ಅಲ್ಲದೆ, ಸಂವಾದವನ್ನೂ ನಡೆಸಿಕೊಟ್ಟು ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು.

ಡಿ.ಕೆ. ಮಾಡಿದ ರಾಜಕೀಯ ಪಾಠ ಏನು?

ಈ ವೇಳೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಒಬ್ಬ ನಾಯಕನಾದವನು ನಾಯಕರನ್ನು ತಯಾರು ಮಾಡಬೇಕು. ಹಿಂಬಾಲಕರನ್ನಲ್ಲ. ಈ ದೇಶಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಬೇಕು. ಒಬ್ಬ ನಾಯಕನಾದವನಿಗೆ ಹಲವು ಗುಣಗಳು ಇರಬೇಕು. ಅವು ಯಾವುವೆಂದರೆ, ಧರ್ಮರಾಯನ ಧರ್ಮತ್ವ, ದಾನಶೂರ ಕರ್ಣನ ದಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ವಿದುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು ಎಂದು ಹೇಳಿದರು. ಈ ಎಲ್ಲ ಗುಣಗಳು ಒಬ್ಬ ರಾಜಕಾರಣಿಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.

ಬಿ.ವೈ. ವಿಜಯೇಂದ್ರ ಕಿವಿಮಾತು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ರಾಜಕಾರಣ ಎಂಬುದು, ನಾಯಕರಾಗಿ ಬೆಳೆಯುವುದು ಎಲ್ಲರಿಗೂ ಒಲಿಯುವ ಮಾತಲ್ಲ. ಇಂದು ರಾಜಕೀಯದಲ್ಲಿ ಎಷ್ಟು ಜನಕ್ಕೆ ಅವಕಾಶ ಸಿಗುತ್ತದೆ? ರಾಜ್ಯದಲ್ಲಿ ಆರೂವರೆ ಕೋಟಿ ಜನರಿದ್ದು, ಎಲ್ಲರಿಗೂ ರಾಜಕಾರಣದಲ್ಲಿ ಅವಕಾಶ ಸಿಗುವುದಿಲ್ಲ. 224 ಕ್ಷೇತ್ರಗಳಲ್ಲಿ ಎಷ್ಟು ಜನ ಶಾಸಕರಾಗುತ್ತಾರೆ? ಅಷ್ಟು ಜನ ಮಾತ್ರ ಶಾಸಕರಾಗಲು ಅವಕಾಶ ಇದೆ. ಇನ್ನು 28 ಜನ ಮಾತ್ರ ಸಂಸದರಾಗಲು ಸಾಧ್ಯ. ಅಂದರೆ, ಬೆರಳಿಣಿಕೆಯಷ್ಟು ಮಂದಿಗೆ ಮಾತ್ರ ಇಂಥದ್ದೊಂದು ಸುವರ್ಣಾವಕಾಶ ಸಿಗುತ್ತದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಅವಕಾಶ ಎಂಬುದು ನಿಜಕ್ಕೂ ಹುಡುಗಾಟಿಕೆ ಅಲ್ಲ. ಇಷ್ಟೊಂದು ವಿಶ್ವಾಸ ಇಟ್ಟು ಜವಾಬ್ದಾರಿ ಕೊಡುವಂತಹ ಮಟ್ಟಕ್ಕೆ ಎಲ್ಲರೂ ಬೆಳೆಯಬೇಕು. ಒಂದು ಪಕ್ಷದಲ್ಲಿ ಎಲ್ಲ ಕಾರ್ಯಕರ್ತರು ಮೆಚ್ಚಿದಾಗ ಮಾತ್ರ ನೀವೊಬ್ಬ ಅತ್ಯುತ್ತಮ ನಾಯಕನಾಗಲು ಸಾಧ್ಯವಾಗುತ್ತದೆ. ರಾಜಕಾರಣದಲ್ಲಿ ಮೊದಲಿಗೆ ನಮ್ಮ ಸರಳತೆ ಮತ್ತು ವಿನಯವಂತಿಕೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆಗ ಮಾತ್ರ ನಾವು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

“ನಾಯಕತ್ವ”ದ ಬಗ್ಗೆ ಡಿಕೆ ಶಿವಕುಮಾರ್‌ – ವಿಜಯೇಂದ್ರ ಮಾತು!

ಸಂವಾದದ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು ಬಿ.ವೈ. ವಿಜಯೇಂದ್ರ ಅವರನ್ನು ಉದಾಹರಣೆಗೆ ತೆಗೆದುಕೊಳ್ಳುತ್ತಾ ಕೆಲವರಿಗೆ ಅವರ ತಂದೆಯ ರಾಜಕಾರಣದ ಬಲ ಸಿಗುತ್ತದೆ. ಹೀಗಾಗಿ ಅವರಿಗೆ ಅನಾಯಾಸವಾಗಿ ನಾಯಕತ್ವದ ಪಟ್ಟ ಸಿಕ್ಕಿ ಬಿಡುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಎಲ್ಲರಿಗೂ ತಂದೆಯ ಬಲದ ಮೇಲೆ ನಾಯಕತ್ವ ಸಿಕ್ಕಿಬಿಡುವುದಿಲ್ಲ. ನಾನು ಸಹ ಪಕ್ಷದಲ್ಲಿ ತಳಮಟ್ಟದಿಂದ ಕಾರ್ಯನಿರ್ವಹಿಸಿದ್ದೇನೆ. ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಸಾಕಷ್ಟು ಹೋರಾಟಗಳ ಮೂಲಕ ನನ್ನ ಸಾಮರ್ಥ್ಯವನ್ನು ನೋಡಿ ಪಕ್ಷ ನನಗೆ ಈಗ ಜವಾಬ್ದಾರಿಯನ್ನು ನೀಡಿದೆ. ಹೀಗಾಗಿ ಪರಿಶ್ರಮದಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಫಲ ಸಿಗುತ್ತದೆ ಎಂದು ಹೇಳಿದರು.

ವಿಸ್ತಾರ ನ್ಯೂಸ್‌ನ ವಿಶೇಷ ಪುರಸ್ಕಾರ

ಬಿ. ನಾಗೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಚಿವ

ಇವರೇ ನಮ್ಮ ಎಮರ್ಜಿಂಗ್‌ ಲೀಡರ್ಸ್

ಇದನ್ನೂ ಓದಿ: Lal Krishna Advani: ಭಾರತ ರತ್ನ ಎಲ್​ ಕೆ. ಅಡ್ವಾಣಿ ಅವರ ಅಪರೂಪದ ಚಿತ್ರಗಳು

ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ. ಧರ್ಮೇಶ್‌, ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್ ಎಕ್ಸಿಕ್ಯುಟಿವ್‌ ಡೈರೆಕ್ಟರ್ ಡಿ.ಕೆ. ಕಿರಣ್ ಕುಮಾರ್‌, ವಿಸ್ತಾರ ನ್ಯೂಸ್ ಅಸೋಸಿಯೇಟ್ ಎಕ್ಸಿಕ್ಯುಟಿವ್‌ ಎಡಿಟರ್ ಹರೀಶ್ ನಾಗರಾಜ್ ಸೇರಿದಂತೆ ಹಲವು ಗಣ್ಯರು ಹಾಗೂ ವಿಸ್ತಾರ ನ್ಯೂಸ್ ವಾಹಿನಿಯ ಸಿಬ್ಬಂದಿ ಭಾಗಿಯಾಗಿದ್ದರು.

Exit mobile version